Home Advertisement
Home ಸುದ್ದಿ ವಿದೇಶ ಭಾರತ–ನೇಪಾಳ ಗಡಿಯಲ್ಲಿ ಹೊಸ ಕಸ್ಟಮ್ಸ್ ನಿಯಮಕ್ಕೆ ಆಕ್ರೋಶ

ಭಾರತ–ನೇಪಾಳ ಗಡಿಯಲ್ಲಿ ಹೊಸ ಕಸ್ಟಮ್ಸ್ ನಿಯಮಕ್ಕೆ ಆಕ್ರೋಶ

0
97

ಬಿರ್ಗುಂಜ್‌ನಲ್ಲಿ ಭುಗಿಲೆದ್ದ ಪ್ರತಿಭಟನೆ

ಕಠ್ಮಂಡು: ಭಾರತದಿಂದ ನೇಪಾಳಕ್ಕೆ ತರಲಾಗುವ ವಸ್ತುಗಳ ಮೇಲೆ ಹೊಸ ಕಸ್ಟಮ್ಸ್ ಸುಂಕ ಕಡ್ಡಾಯಗೊಳಿಸಿರುವ ನೇಪಾಳ ಸರ್ಕಾರದ ಕ್ರಮಕ್ಕೆ ಗಡಿ ಪ್ರದೇಶಗಳಲ್ಲಿ ತೀವ್ರ ವಿರೋಧ ವ್ಯಕ್ತವಾಗಿದೆ. ವಿಶೇಷವಾಗಿ ಬಿರ್ಗುಂಜ್‌ ಜಿಲ್ಲೆಯಲ್ಲಿ ಜನರು ಬೃಹತ್ ಪ್ರತಿಭಟನೆ ನಡೆಸಿ ಸರ್ಕಾರದ ವಿರುದ್ಧ ಆಕ್ರೋಶ ಹೊರಹಾಕಿದ್ದಾರೆ.

ನೇಪಾಳ ಸರ್ಕಾರ ಜಾರಿಗೆ ತಂದಿರುವ ಹೊಸ ನಿಯಮದ ಪ್ರಕಾರ, ಭಾರತದ ಮೂಲಕ ನೇಪಾಳಕ್ಕೆ ತರಲಾಗುವ 100 ನೇಪಾಳಿ ರೂಪಾಯಿಗಳಿಗಿಂತ ಹೆಚ್ಚು ಮೌಲ್ಯದ ಯಾವುದೇ ವಸ್ತುವಿನ ಮೇಲೆ ಕಡ್ಡಾಯವಾಗಿ ‘ಭನ್ಸಾರ್’ (ಸೀಮಾ ಸುಂಕ) ಪಾವತಿಸಬೇಕು.

ದಿನನಿತ್ಯ ಬಳಕೆಯ ವಸ್ತುಗಳ ಮೇಲೂ ಸುಂಕ: ಈ ನಿಯಮದ ಪರಿಣಾಮವಾಗಿ ಬೇಳೆಕಾಳು, ಅಡುಗೆ ಎಣ್ಣೆ, ಸಕ್ಕರೆ, ತರಕಾರಿ ಸೇರಿದಂತೆ ದಿನನಿತ್ಯ ಬಳಕೆಯ ವಸ್ತುಗಳ ಮೇಲೂ 5% ರಿಂದ 80% ವರೆಗೆ ಕಸ್ಟಮ್ಸ್ ಸುಂಕ ವಿಧಿಸುವ ಸಾಧ್ಯತೆ ಇದೆ. ಹಿಂದಿನ ನಿಯಮದಲ್ಲಿ ಸಣ್ಣಪುಟ್ಟ ಮನೆ ಬಳಕೆಯ ವಸ್ತುಗಳಿಗೆ ವಿನಾಯಿತಿ ನೀಡಲಾಗುತ್ತಿತ್ತು. ಆದರೆ ಈಗ ಅದನ್ನು ರದ್ದುಗೊಳಿಸಿರುವುದರಿಂದ ಗಡಿ ಭಾಗದ ಜನರು ಸಂಕಷ್ಟಕ್ಕೆ ಸಿಲುಕಿದ್ದಾರೆ.

ಬಿರ್ಗುಂಜ್‌ನಲ್ಲಿ ಭಾರೀ ಪ್ರತಿಭಟನೆ: ಗಡಿ ವ್ಯಾಪಾರ ಮತ್ತು ದಿನನಿತ್ಯದ ಖರೀದಿಗೆ ಭಾರತವನ್ನು ಅವಲಂಬಿಸಿರುವ ಬಿರ್ಗುಂಜ್‌ ನಿವಾಸಿಗಳು ಸರ್ಕಾರದ ಹೊಸ ನಿಯಮದ ವಿರುದ್ಧ ಪ್ರತಿಭಟನೆ ನಡೆಸಿದ್ದಾರೆ. ಈ ಕ್ರಮದಿಂದ ಸಣ್ಣ ವ್ಯಾಪಾರಿಗಳು ಹಾಗೂ ಸಾಮಾನ್ಯ ನಾಗರಿಕರಿಗೆ ಭಾರೀ ಹೊರೆ ಬಿದ್ದಿದೆ ಎಂದು ಪ್ರತಿಭಟನಾಕಾರರು ಆರೋಪಿಸಿದ್ದಾರೆ.

ಸ್ಥಳೀಯ ವ್ಯಾಪಾರಿಗಳು, “ಈ ನಿಯಮದಿಂದ ಗಡಿ ವ್ಯಾಪಾರ ಕುಂಠಿತವಾಗುತ್ತದೆ. ಸಾಮಾನ್ಯ ಜನರ ಮೇಲೆ ಅನಗತ್ಯ ತೆರಿಗೆ ಹೊರೆ ಬೀಳುತ್ತದೆ” ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ.

ರಫ್ತು ವಸ್ತುಗಳಿಗೆ ಮಾತ್ರ ಸೌಲಭ್ಯ : ಆಶ್ಚರ್ಯಕರವಾಗಿ, ನೇಪಾಳದಿಂದ ಭಾರತಕ್ಕೆ ರಫ್ತಾಗುವ ಕೆಲವು ನಿರ್ದಿಷ್ಟ ವಸ್ತುಗಳಿಗೆ, ವಿಶೇಷವಾಗಿ ಸೋಯಾಬೀನ್ ಎಣ್ಣೆ ಮುಂತಾದ ವಸ್ತುಗಳಿಗೆ ಸುಂಕಮುಕ್ತ (Duty-free) ಪ್ರವೇಶ ಸೌಲಭ್ಯ ಮುಂದುವರೆದಿದೆ. ಇದರಿಂದ ನೇಪಾಳದ ರಫ್ತು ಪ್ರಮಾಣ ಹೆಚ್ಚಾದರೂ, ಗಡಿ ಪ್ರದೇಶದ ಜನರ ದಿನನಿತ್ಯದ ಖರೀದಿಗೆ ಹೊಸ ನಿಯಮ ಅಡೆತಡೆ ಉಂಟುಮಾಡಿದೆ.

ಸರ್ಕಾರದ ಉದ್ದೇಶ ಏನು? : ಈ ನಿಯಮದ ಮೂಲಕ ಗಡಿ ವ್ಯಾಪಾರವನ್ನು ನಿಯಂತ್ರಿಸುವುದು ಮತ್ತು ದೇಶೀಯ ಮಾರುಕಟ್ಟೆಯನ್ನು ರಕ್ಷಿಸುವುದು ಸರ್ಕಾರದ ಉದ್ದೇಶ ಎಂದು ಹೇಳಲಾಗುತ್ತಿದೆ. ಆದರೆ ಸ್ಥಳೀಯ ಜನರ ದೃಷ್ಟಿಯಲ್ಲಿ ಇದು ಜೀವನಾವಶ್ಯಕ ವಸ್ತುಗಳ ಮೇಲಿನ ಹೆಚ್ಚುವರಿ ಹೊರೆ ಎಂದೇ ಕಾಣುತ್ತಿದೆ.

ಹೊಸ ನಿಯಮದ ವಿರುದ್ಧ ಪ್ರತಿಭಟನೆ ತೀವ್ರಗೊಂಡಿರುವುದರಿಂದ, ನೇಪಾಳ ಸರ್ಕಾರ ಮುಂದಿನ ದಿನಗಳಲ್ಲಿ ನಿಯಮ ಸಡಿಲಿಕೆ ಮಾಡುವ ಸಾಧ್ಯತೆಗಳನ್ನೂ ತಳ್ಳಿ ಹಾಕಲಾಗುತ್ತಿಲ್ಲ.