ಬಾಗಲಕೋಟೆ: ಕುಳಗೇರಿ ಕ್ರಾಸ್ ಗ್ರಾಮದಲ್ಲಿ ಮಂಗಳವಾರ ಭಾರಿ ಗುಡುಗು ಸಿಡಿಲಿನ ಜೊತೆ ಬಿರುಗಾಳಿ ಬೀಸಿದ್ದು ಅಪಾರ ಪ್ರಮಾಣದಲ್ಲಿ ಹಾನಿ ಮಾಡಿದೆ. ಸಂಜೆ 4 ರಿಂದ ವಿದ್ಯುತ್ ಸಂಪರ್ಕ ಕಡಿತಗೊಂಡಿದೆ.
ಬಿರುಗಾಳಿಗೆ ಅನೇಕ ಅಂಗಡಿ, ಮನೆಗಳ ಮೇಲ್ಛಾವಣಿಯ ತಗಡುಗಳು, ತಗಡಿನ ಶೆಡ್ಡು ಹಾರಿ ಹೋಗಿವೆ. ಅಂಗಡಿಗಳಲ್ಲಿ ಮಾರಾಟಕ್ಕೆ ನೇತು ಬಿಟ್ಟಿದ್ದ ಸಾಮಗ್ರಿಗಳು ರಸ್ತೆ ಪಾಲಾಗಿವೆ.
ಧೂಳಿನಿಂದ ಕೂಡಿದ ಬಿರುಗಾಳಿಗೆ ಬೈಕ್ ಸವಾರರು ಪರದಾಡುವಂತಾಗಿತ್ತು. ಕೆಲ ಸಮಯ ಹೆದ್ದಾರಿ ಸಂಚಾರ ಸ್ಥಗಿತವಾಗಿತ್ತು. ಜೋರಾಗಿ ಬೀಸಿದ ಬಾರಿ ಬಿರುಗಾಳಿಗೆ ಅಲ್ಲಲ್ಲಿ 20ಕ್ಕೂ ಹೆಚ್ಚು ಗಿಡ-ಮರಗಳು ಧರೆಗುರುಳಿವೆ.
ಹಾಗನೂರ ಗ್ರಾಮದಲ್ಲಿ ಸುಮಾರು 40ಕ್ಕೂ ಹೆಚ್ಚು ವಿದ್ಯುತ್ ಕಂಬಗಳು ನೆಲಕಚ್ಚಿದ ವರದಿಯಾಗಿದೆ. ಕಾಕನೂರ ಗ್ರಾಮಕ್ಕೆ ಸಂಪರ್ಕ ಕಲ್ಪಿಸುವ ಎಫ್-6 ಲೈನ್ನಲ್ಲಿ ಸಾಲಾಗಿ 36 ವಿದ್ಯುತ್ ಕಂಬಗಳು ನೆಲಕ್ಕುರುಳಿವೆ ಎಂದು ಶಾಖಾಧಿಕಾರಿ ಕೊಳ್ಳಿ ಮಾಹಿತಿ ನೀಡಿದ್ದಾರೆ. ಅದೖಷ್ಟವಶಾತ್ ಯಾವುದೆ ಪ್ರಾಣಹಾನಿ ಸಂಭವಿಸಿಲ್ಲ ಎಂದು ಹೇಳಲಾಗುತ್ತಿದೆ.























