ಶಿವಮೊಗ್ಗ: ಈ ಹಿಂದೆ ಬಿಜೆಪಿಗೆ ಕಾಂಗ್ರೆಸ್ನ 17 ಶಾಸಕರು ಬಂದಿದ್ದು ನಿಜ, ಹಣಕೊಟ್ಟು ಕರೆದುಕೊಂಡಿದ್ದೂ ನಿಜ. ಮತ್ತೆ ಚುನಾವಣೆಗೆ ನಿಲ್ಲಿಸಿ ಹಣ ಖರ್ಚು ಮಾಡಿದ್ದೆವು. ಈ ರೀತಿ ಮಾಡಿದ್ದೇ ಚುನಾವಣೆಯಲ್ಲಿ ಬಿಜೆಪಿ ಸೋಲಿಗೆ ಕಾರಣವಾಯಿತು ಎಂದು ಮಾಜಿ ಸಚಿವ ಕೆ.ಎಸ್. ಈಶ್ವರಪ್ಪ ಹೇಳಿದರು.
ಶಿವಮೊಗ್ಗದಲ್ಲಿಂದು ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಮತದಾರರು ಭ್ರಷ್ಟಾಚಾರ ಒಪ್ಪುವುದಿಲ್ಲ ಎಂಬುದಕ್ಕೆ ಇದು ಉದಾಹರಣೆಯಾಗಿದೆ. ಇದೀಗ ವಿಧಾನ ಪರಿಷತ್ ಚುನಾವಣೆಯಲ್ಲಿ ಹಣ ಪಡೆದು ಅಡ್ಡಮತ ಹಾಕಿರುವುದು ಕೂಡ ಭ್ರಷ್ಟಾಚಾರದ ಭಾಗವೇ ಆಗಿದೆ. ಈ ಹಿಂದೆ ಬಿಜೆಪಿಗೆ ಆದ ದುಃಸ್ಥಿತಿ ಕಾಂಗ್ರೆಸ್ಗೂ ಆಗಲಿದೆ. ರಾಜ್ಯದ ಜನರು ಕಾಂಗ್ರೆಸ್ಗೆ ತಕ್ಕ ಪಾಠ ಕಲಿಸುತ್ತಾರೆ ಎಂದರು.
ಧರ್ಮಸ್ಥಳ ಭಕ್ತಿ ಮತ್ತು ಶಕ್ತಿಯ ಕೇಂದ್ರ. ಯಾವ ರಾಜಕಾರಣಿಗಳೂ ಇಲ್ಲಿ ಆಣೆಗೆ ಸಂಬಂಧಿಸಿದಂತೆ ತಮ್ಮ ಚಟುವಟಿಕೆ ವಿಸ್ತರಿಸಕೂಡದು. ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ. ವಿಜಯೇಂದ್ರ ಅವರು ಶಾಸಕರನ್ನು ಧರ್ಮಸ್ಥಳಕ್ಕೆ ಕರೆಯುವುದರಿಂದ ಹಿಂದೆ ಸರಿಯಬೇಕು. ಧರ್ಮಸ್ಥಳ ಭಕ್ತಿಯ ಕೇಂದ್ರವಾಗಿದ್ದು, ಈ ರೀತಿ ಮಾಡುವುದು ಸರಿಯಲ್ಲ. ವಿಜಯೇಂದ್ರ ಅವರು ಹಿಂದೆ ಸರಿಯುತ್ತಾರೆ ಎಂಬ ವಿಶ್ವಾಸವಿದೆ ಎಂದು ಕೆ.ಎಸ್. ಈಶ್ವರಪ್ಪ ಹೇಳಿದರು.





















