ಚಿತ್ರದುರ್ಗ: ಎಂಎಲ್ಸಿ ಚುನಾವಣೆಯಲ್ಲಿ ಶಾಸಕರು ಅಡ್ಡಮತದಾನ ಸಂಬಂಧ ಆಣೆ ಪ್ರಮಾಣ ಮಾಡಲು ಧರ್ಮಸ್ಥಳ ಕ್ಷೇತ್ರವನ್ನು ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ. ವಿಜಯೇಂದ್ರ ಆಯ್ಕೆ ಮಾಡಿಕೊಂಡಿರುವುದು ಸರಿಯಿದೆ ಎಂದು ಹೊಳಲ್ಕೆರೆ ಶಾಸಕ ಎಂ. ಚಂದ್ರಪ್ಪ ತಿಳಿಸಿದರು.
ಚಿತ್ರದುರ್ಗದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ವಿಜಯೇಂದ್ರ ಅವರ ತೀರ್ಮಾನ ಸಮಂಜಸವಾಗಿದೆ. ಧರ್ಮಸ್ಥಳ ಮಂಜುನಾಥಸ್ವಾಮಿ ಮೇಲೆ ಅಪಾರ ನಂಬಿಕೆಯಿದೆ. ಬಿಜೆಪಿ ಅಧ್ಯಕ್ಷರು ಎಲ್ಲಿಗೆ ಕರೆದರೂ ನಾವೆಲ್ಲ ಹೋಗಿ ಪ್ರಮಾಣ ಮಾಡುತ್ತೇವೆ ಎಂದರು.
2011ರಲ್ಲಿ ಜನಾರ್ದನರೆಡ್ಡಿ ಬಂಡಾಯ ಎದ್ದಿದ್ದರು. ಬಿಜೆಪಿ ಶಾಸಕರನ್ನು ಹೈದರಾಬಾದ್ ರೆಸಾರ್ಟ್ಗೆ ಕರೆದೊಯ್ದಿದ್ದರು. ಆಗ ಶಾಸಕರಿಗೆ 5, 10, 15 ಕೋಟಿ ಆಮಿಷ ತೋರಿಸಿದ್ದರು. ರೇಣುಕಾಚಾರ್ಯ ಸೇರಿ ಅನೇಕರು ರೆಡ್ಡಿ ಜತೆ ಹೋಗಿದ್ದರು. ನನಗೆ ಜನಾರ್ಧನರೆಡ್ಡಿ, ಕರುಣಾಕರರೆಡ್ಡಿ ಒತ್ತಡ ಹಾಕಿದ್ದರು. ಆದರೆ, ನಾನು ಆಮಿಷಕ್ಕೆ ಒಳಗಾಗದೆ ಪಕ್ಷ ನಿಷ್ಠೆ ಪ್ರದರ್ಶಿಸಿದೆ ಎಂದರು.






















