Home Advertisement
Home ಸಿನಿ ಮಿಲ್ಸ್ ​ನಾಟಕದ ಸೆಟ್‌ನಲ್ಲಿ ಶುರುವಾದ ಪ್ರೀತಿ, 15 ವರ್ಷದ ದಾಂಪತ್ಯ: ಪ್ರಿಯತಮೆಯ ಕೈಬಿಟ್ಟು ಬಾರದ ಲೋಕಕ್ಕೆ; ದಿಲೀಪ್...

​ನಾಟಕದ ಸೆಟ್‌ನಲ್ಲಿ ಶುರುವಾದ ಪ್ರೀತಿ, 15 ವರ್ಷದ ದಾಂಪತ್ಯ: ಪ್ರಿಯತಮೆಯ ಕೈಬಿಟ್ಟು ಬಾರದ ಲೋಕಕ್ಕೆ; ದಿಲೀಪ್ ರಾಜ್

0
92

ಬೆಂಗಳೂರು: ಸಿನಿ ಸ್ಯಾಂಡಲ್‌ವುಡ್‌ನ ಕಿರುತೆರೆಯ ಜನಪ್ರಿಯ ನಟ, ಯಶಸ್ವಿ ನಿರ್ಮಾಪಕ ದಿಲೀಪ್ ರಾಜ್ (47) ಬುಧವಾರ ವಿಧಿವಶರಾಗಿದ್ದಾರೆ. ಮನೆಯಲ್ಲಿದ್ದಾಗ ಸಂಭವಿಸಿದ ಏಕಾಏಕಿ ಹೃದಯಾಘಾತದಿಂದ ಕುಸಿದು ಬಿದ್ದಿದ್ದು, ತಕ್ಷಣ ಆಸ್ಪತ್ರೆಗೆ ದಾಖಲಿಸಿದರೂ ಚಿಕಿತ್ಸೆ ಫಲಕಾರಿಯಾಗದೆ ಕೊನೆಯುಸಿರೆಳೆದಿದ್ದಾರೆ. ಕೇವಲ 47 ವರ್ಷ ವಯಸ್ಸಿನಲ್ಲೇ ದಿಲೀಪ್‌ ಅಗಲಿಕೆ ಕನ್ನಡ ಚಿತ್ರರಂಗದಲ್ಲಿ ಮತ್ತು ಅವರ ಅಪಾರ ಅಭಿಮಾನಿ ಬಳಗಕ್ಕೆ ಅರಗಿಸಿಕೊಳ್ಳಲಾಗದ ದುಃಖ ತಂದಿದೆ.

ಸಿನಿಮಾ ಹಾಗೂ ಕಿರುತೆರೆಯ ಪಯಣ: ದಿಲೀಪ್ ರಾಜ್ 2005ರಲ್ಲಿ ‘ಬಾಯ್ ಫ್ರೆಂಡ್’ ಮತ್ತು 2009ರಲ್ಲಿ ‘ಲವ್ ಗುರು’ ಚಿತ್ರಗಳ ಮೂಲಕ ಬೆಳ್ಳಿತೆರೆಗೆ ಪಾದಾರ್ಪಣೆ ಮಾಡಿದ್ದರು. ಪವರ್ ಸ್ಟಾರ್ ಪುನೀತ್ ರಾಜ್‌ಕುಮಾರ್ ಅಭಿನಯದ ‘ಮಿಲನ’ ಸಿನಿಮಾದಲ್ಲಿನ ಅಭಿನಯ ಸಿನಿಪ್ರೇಕ್ಷಕರ ಮನಗೆಲ್ಲುವಲ್ಲಿ ಯಶಸ್ವಿಯಾಗಿತ್ತು. ನಂತರ ‘ಯು-ಟರ್ನ್’ ಸೇರಿದಂತೆ ಹಲವು ಚಿತ್ರಗಳಲ್ಲಿ ವಿಭಿನ್ನ ಪಾತ್ರಗಳ ಮೂಲಕ ಗಮನ ಸೆಳೆದಿದ್ದರು. ಇನ್ನು ಕಿರುತೆರೆಯಲ್ಲಿ ‘ಹಿಟ್ಲರ್ ಕಲ್ಯಾಣ’ ಧಾರಾವಾಹಿಯ ಎಜೆ ಪಾತ್ರದ ಮೂಲಕ ಮನೆಮಾತಾಗಿದ್ದ ನಟ, ನಾಯಕ ನಟನಾಗಿ ಮಾತ್ರವಲ್ಲದೆ ನಿರ್ದೇಶಕನಾಗಿಯೂ ಸೈ ಎನಿಸಿಕೊಂಡಿದ್ದರು.

ಸಾಧನೆಯ ಹಾದಿಯಲ್ಲಿ ನಿರ್ಮಾಪಕ: ಕೇವಲ ನಟನೆಗೆ ಸೀಮಿತವಾಗದ ದಿಲೀಪ್ ರಾಜ್, ‘ಡಿ2ಆರ್ ಮೀಡಿಯಾ’ ಸಂಸ್ಥೆಯ ಮೂಲಕ ನಿರ್ಮಾಣ ಕ್ಷೇತ್ರಕ್ಕೂ ಕಾಲಿಟ್ಟಿದ್ದರು. ‘ಪಾರು’, ‘ಬ್ರಹ್ಮಗಂಟು’, ‘ಕೃಷ್ಣ ರುಕ್ಕು’ ಸೇರಿದಂತೆ ಹಲವಾರು ಸೂಪರ್ ಹಿಟ್ ಧಾರಾವಾಹಿಗಳನ್ನು ನಿರ್ಮಿಸಿ, ಕಿರುತೆರೆಯ ಯಶಸ್ವಿ ನಿರ್ಮಾಪಕರಲ್ಲಿ ಒಬ್ಬರಾಗಿ ಗುರುತಿಸಿಕೊಂಡಿದ್ದರು. ಸದಾ ಒಂದಿಲ್ಲೊಂದು ಹೊಸ ಪ್ರಾಜೆಕ್ಟ್‌ಗಳಲ್ಲಿ ತೊಡಗಿಸಿಕೊಳ್ಳುತ್ತಿದ್ದ ʻಹಿಟ್ಲರ್‌ʼ ಕೆಲಸದ ವಿಚಾರದಲ್ಲಿ ಅತ್ಯಂತ ಕಟ್ಟುನಿಟ್ಟಿನ ಶಿಸ್ತು ಪಾಲಿಸುತ್ತಿದ್ದರು.

ಪತ್ನಿಯೇ ಬೆನ್ನೆಲುಬು: ದಿಲೀಪ್ ರಾಜ್ ವೈಯಕ್ತಿಕ ಜೀವನ ಸಿನಿಮಾ ಕಥೆಯಷ್ಟೇ ಸುಂದರವಾಗಿತ್ತು. ತಮ್ಮ ಪತ್ನಿ ವಿದ್ಯಾಶ್ರೀನ್ನು ಪ್ರೀತಿಸಿ ಮದುವೆಯಾಗಿದ್ದರು. ಇವರಿಬ್ಬರ ಮೊದಲ ಭೇಟಿಯಾಗಿದ್ದು ಒಂದು ನಾಟಕದ ಸೆಟ್‌ನಲ್ಲಿ. ವಿದ್ಯಾಶ್ರೀ ಕೂಡ ಕಲಾ ಹಿನ್ನೆಲೆಯುಳ್ಳವರಾಗಿದ್ದರಿಂದ ಇವರ ಸ್ನೇಹ ಸುಲಭವಾಗಿ ಪ್ರೀತಿಗೆ ತಿರುಗಿತ್ತು. ಸುಮಾರು 5-6 ವರ್ಷಗಳ ಕಾಲ ಪ್ರೀತಿಸಿದ ಈ ಜೋಡಿ ನಂತರ ದಾಂಪತ್ಯ ಜೀವನಕ್ಕೆ ಕಾಲಿಟ್ಟಿದ್ದರು. ದಿಲೀಪ್ ನಟನೆಯಿಂದ ನಿರ್ಮಾಣಕ್ಕೆ ಇಳಿದಾಗ ವಿದ್ಯಾಶ್ರೀ ಬೆನ್ನೆಲುಬಾಗಿ ನಿಂತು ಪ್ರತಿ ಹಂತದಲ್ಲೂ ಸಾಥ್ ನೀಡಿದ್ದರು.

ಸದಾ ಲವಲವಿಕೆಯಿಂದ ಇರುತ್ತಿದ್ದ ಈ ದಂಪತಿಯ ಸುಖೀ ಸಂಸಾರದಲ್ಲಿ ಅಕಾಲಿಕ ಸಾವು ಕತ್ತಲು ಆವರಿಸುವಂತೆ ಮಾಡಿದೆ. ಪ್ರತಿಭಾವಂತ ಕಲಾವಿದನ ಅಕಾಲಿಕ ನಿರ್ಗಮನಕ್ಕೆ ಚಿತ್ರರಂಗದ ಗಣ್ಯರು ತೀವ್ರ ಸಂತಾಪ ಸೂಚಿಸಿದ್ದಾರೆ.