ಬಾಗಲಕೋಟೆ: ಕೌಟುಂಬಿಕ ಕಲಹದಿಂದ ಬೇಸತ್ತು ಮಹಿಳೆಯೊಬ್ಬಳು ತನ್ನ ಮೂವರು ಮಕ್ಕಳನ್ನು ನೇಣು ಬಿಗಿದು ಕೊಲೆ ಮಾಡಿದ್ದಲ್ಲದೇ ತಾನೂ ಆತ್ಮಹತ್ಯೆಗೆ ಯತ್ನಿಸಿರುವ ಘಟನೆ ಬಾದಾಮಿ ತಾಲೂಕಿನ ಹಿರೇಮುಚ್ಚಳಗುಡ್ಡ ಗ್ರಾಮದಲ್ಲಿ ರವಿವಾರ ಜರುಗಿದೆ.
ಸಮೃದ್ಧಿ (5), ಪ್ರೀತಂ (4) ಹಾಗೂ ಸುಕ್ಷಿತ (2) ಮೃತ ದುರ್ದೈವಿಗಳು. ರೂಪಾ ಹನುಮಂತ ಗೌಡರ (27) ಕೃತ್ಯ ಎಸಗಿರುವ ಮಹಿಳೆ. ರವಿವಾರ ಬೆಳಗ್ಗೆ ಮನೆಯ ಜಂತಿಗೆ ನೇಣು ಬಿಗಿದು ಮಕ್ಕಳನ್ನು ಕೊಲೆ ಮಾಡಿರುವ ಆಕೆ ನಂತರ ತಾನೂ ಡೀಸೆಲ್ ಸೇವಿಸಿ ಆತ್ಮಹತ್ಯೆಗೆ ಯತ್ನಿಸಿದ್ದಾಳೆ.
ಆಕೆಯ ಪತಿ ಮಧ್ಯಾಹ್ನ ಕೆಲಸ ಮುಗಿಸಿ ವಾಪಸ್ಸಾದಾಗ ಮನೆ ಬಾಗಿಲು ತಟ್ಟಿದ್ದಾನೆ. ತೆರೆಯದಿದ್ದಾಗ ಬಾಗಿಲು ಒಡೆದು ಒಳಗೆ ನುಗ್ಗಿದ್ದು, ಆಗ ಮಕ್ಕಳು ಮೃತಪಟ್ಟಿರುವುದು ತಿಳಿದಿದೆ. ಡೀಸೆಲ್ ಸೇವಿಸಿದ್ದ ರೂಪಾಳನ್ನು ಕೂಡಲೇ ಬಾದಾಮಿ ಆಸ್ಪತ್ರೆಗೆ ದಾಖಲಿಸಲಾಗಿದ್ದು, ವೈದ್ಯರ ಸಲಹೆ ಮೇರೆಗೆ ಹೆಚ್ಚಿನ ಚಿಕಿತ್ಸೆಗಾಗಿ ಬಾಗಲಕೋಟೆಯ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿದೆ.























