SK Home Ad
Home ನಮ್ಮ ಜಿಲ್ಲೆ ಗದಗ ಟೌನ್‌ಶಿಪ್ ಪ್ರತಿಷ್ಠೆ ಬಿಟ್ಟು ಸರ್ಕಾರಿ ಜಮೀನಿನಲ್ಲಿ ಯೋಜನೆ ರೂಪಿಸಿ

ಟೌನ್‌ಶಿಪ್ ಪ್ರತಿಷ್ಠೆ ಬಿಟ್ಟು ಸರ್ಕಾರಿ ಜಮೀನಿನಲ್ಲಿ ಯೋಜನೆ ರೂಪಿಸಿ

0
32

ಗದಗ: ಬಿಡದಿ ಟೌನ್‌ಶಿಪ್ ಮಾಡುವ ವಿಚಾರದಲ್ಲಿ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ ಪ್ರತಿಷ್ಠೆ ಮಾಡಿಕೊಳ್ಳದೆ ರೈತರಿಗೆ ಯಾವುದೇ ರೀತಿಯ ತೊಂದರೆಯಾಗದಂತೆ, ಸರ್ಕಾರಿ ಜಮೀನಿನಲ್ಲಿ ಸ್ಯಾಟಲೈಟ್ ಟೌನ್‌ಶಿಪ್ ಮಾಡಿ, ಎಲ್ಲಾ ವ್ಯವಸ್ಥೆಗಳನ್ನು ಮಾಡಿದರೆ ಆ ಒಳ್ಳೆಯ ನಿರ್ಧಾರ ಆಗುತ್ತದೆ ಎಂದು ಮಾಜಿ ಮುಖ್ಯಮಂತ್ರಿ ಹಾಗೂ ಸಂಸದ ಬಸವರಾಜ ಬೊಮ್ಮಾಯಿ ಅಭಿಪ್ರಾಯ ಪಟ್ಟಿದ್ದಾರೆ.

ಗದಗನಲ್ಲಿ ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, ಸರ್ಕಾರದ ಸಾಕಷ್ಟು ಜಮೀನುಗಳಿವೆ. ನಾವು ಕೂಡ ಸ್ಯಾಟಲೈಟ್ ಟೌನ್‌ಗಳನ್ನು ಮಾಡಬೇಕು ಅಂತ. ನಾವು ಕೋಲಾರ, ಚಿಕ್ಕಬಳ್ಳಾಪುರ ಏರಿಯಾದಲ್ಲಿ ಸುಮಾರು 2 ಸಾವಿರ ಎಕರೆ ಸರ್ಕಾರಿ ಭೂಮಿ ಇದೆ, ಅಲ್ಲಿ ಮಾಡಬೇಕು ಅಂತ ಯೋಚನೆ ನಡೀತಿದೆ. ಹಾಗಾಗಿ ಸರ್ಕಾರದ ಭೂಮಿ ಇರುವಂತಹ ಜಾಗದಲ್ಲಿ ಮಾಡಿ, ಅದಕ್ಕೆ ಸಕಲ ಲಾಜಿಸ್ಟಿಕ್ ವ್ಯವಸ್ಥೆಗಳನ್ನ ಮಾಡಬೇಕು, ಉದಾಹರಣೆಗೆ ಸಾಕಷ್ಟು ಕ್ಲಸ್ಟರ್‌ಗಳಿದೆ, ಕಾಲೇಜು, ಯೂನಿವರ್ಸಿಟಿಗಳೂ ಕೂಡ ಇವೆ. ಆ ಕೆಲಸ ಮಾಡಬೇಕು ಹೊರತಾಗಿ, ರೈತರ ಜಮೀನನ್ನು ತೆಗೆದುಕೊಳ್ಳುವುದು ಅಷ್ಟೊಂದು ಸಮಂಜಸ ಅಲ್ಲ ಎಂದರು.

​ನಾನು ಮುಖ್ಯಮಂತ್ರಿಗಳಿಗೆ ಸಲಹೆ ಮಾಡುವುದು ಇಷ್ಟೇ, ಪ್ರತಿಷ್ಠೆ ಮಾಡಿಕೊಳ್ಳದೆ ರೈತರಿಗೆ ಯಾವುದೇ ರೀತಿಯ ತೊಂದರೆಯಾಗದಂತೆ, ತಮ್ಮದೇ ಆದಂತಹ ಒಂದು ವ್ಯವಸ್ಥೆ ಮಾಡಿಕೊಂಡು ಸರ್ಕಾರಿ ಜಮೀನಿನಲ್ಲಿ ಸ್ಯಾಟಲೈಟ್ ಟೌನ್‌ಶಿಪ್‌ ಮಾಡಿ, ಎಲ್ಲಾ ವ್ಯವಸ್ಥೆಗಳನ್ನು ಮಾಡಿದರೆ ಆ ಒಳ್ಳೆಯ ನಿರ್ಧಾರ ಆಗುತ್ತದೆ ಎಂದರು.

ಸಿಎಂ ಡಿ.ಕೆ. ಶಿವಕುಮಾರ್ ವಿಧಾನಸೌಧದಲ್ಲಿ ಚರ್ಚೆಗೆ ಬನ್ನಿ ಎಂದು ನೀಡಿರುವ ಆಹ್ವಾನದ ಕುರಿತು ಕೇಳಿದ ಪ್ರಶ್ನೆಗೆ ಪ್ರತಿಕ್ರಿಯಿಸಿದ ಅವರು, ಇವೆಲ್ಲ ಪ್ರತಿಷ್ಠೆಗಳು ಮಾಡೋದು, ಎಲ್ಲಿ ಚರ್ಚೆ ಮಾಡಿದರೇನು ವಿಷಯ ಅದೇ ತಾನೇ? ಪ್ರತಿಷ್ಠೆಗಳನ್ನು ಬಿಟ್ಟರೆ ಅದಕ್ಕೊಂದು ಪರಿಹಾರ ಇದೆ. ಎಂದರು.

ಬರ ಘೊಷಿಸಲಿ: ​ರಾಜ್ಯದಲ್ಲಿ ಮುಂಗಾರು ಮಳೆ ಕೊರತೆಯಾಗಿರುವ ಕುರಿತು ಕೇಳಿದ ಪ್ರಶ್ನೆಗೆ ಪ್ರತಿಕ್ರಿಯಿಸಿದ ಅವರು, ರಾಜ್ಯದಲ್ಲಿ ಮುಂಗಾರು ಮಳೆ ಕೊರತೆಯಾಗಿದೆ, ಇದು ಸಂಪೂರ್ಣವಾಗಿ ಬರಗಾಲದ ಪರಿಸ್ಥಿತಿಯನ್ನ ತೋರಿಸುತ್ತಿದೆ. ಮೊದಲು ಬರಗಾಲ ಘೋಷಣೆ ಮಾಡಿದರೆ ಮುಂದಿನ ಪ್ರಕ್ರಿಯೆ ಪ್ರಾರಂಭವಾಗುತ್ತದೆ. ನನ್ನ ಮೊದಲನೇ ಆಗ್ರಹ ರಾಜ್ಯ ಸರ್ಕಾರಕ್ಕೆ, ಮೊದಲೇ ಒಂದು ಸರ್ವೆಯನ್ನು ಮಾಡಿ ಅದಕ್ಕೆ ಬರಗಾಲದ ಘೋಷಣೆಯನ್ನು ಮಾಡಬೇಕು. ಮುಂದೆ ಪರಿಹಾರ ಕೊಡುವುದಕ್ಕೆ ಕೇಂದ್ರದ ಅನುದಾನ ಏನೇ ವ್ಯವಸ್ಥೆ ಇದ್ದರೂ, ಮುಂಗಾರು ಮಳೆಗೆ ಈಗ ಬೆಳೆ ನಷ್ಟ ಉಂಟಾದಾಗ ಅದಕ್ಕೂ ಕೂಡ ಪರಿಹಾರ ಕೊಡುವುದಕ್ಕೆ ಬರ ಘೋಷಣೆ ಮಾಡಿದರೆ ತಾನೇ ಇದೆಲ್ಲ ಮಾಡೋಕೆ ಸಾಧ್ಯ ಎಂದರು.

​ಮಾಧ್ಯಮದವರು ಕೃಷಿ ಸಚಿವರೇ ಇಲ್ಲದಿರುವ ಕುರಿತು ಕೇಳಿದ ಪ್ರಶ್ನೆಗೆ ರೈತರ ಗೋಳು ಕೇಳುವವರೇ ಇಲ್ಲ. ಅಧಿಕಾರಿಗಳು, ಕೃಷಿ ಸಚಿವರು ಏನು ಕೆಲಸ ಮಾಡುತ್ತಿದ್ದಾರೆ ಅನ್ನೋದು ಇಡೀ ರಾಜ್ಯದ ಜನತೆ ನೋಡುತ್ತಿದ್ದಾರೆ.

ಕೇಂದ್ರದ ಯೋಜನೆ ಕಾಪಿ: ​ಉದ್ಯೋಗ ಮತ್ತು ಜಿಐಪಿಆರ್ ಜಿಆರ್ ಯೋಜನೆ ಕುರಿತು ಕೇಳಿದ ಪ್ರಶ್ನೆಗೆ ಪ್ರತಿಕ್ರಿಯಿಸಿದ ಅವರು, ಮುಖ್ಯಮಂತ್ರಿಗಳು ಇದೊಂದು ತಮ್ಮದೇ ಕಾರ್ಯಕ್ರಮ ಅಂತ ಬಹಳ ದೊಡ್ಡ ಪ್ರಚಾರ ತೆಗೆದುಕೊಳ್ಳುತ್ತಿದ್ದಾರೆ. ರಾಷ್ಟ್ರೀಯ ವಲಯದಲ್ಲಿ ರಿಜಿಸ್ಟ್ರೇಶನ್ ಮಾಡುವಂತಹ ಕೆಲಸ, ಅದೇನು ಅದರಿಂದ ಏನು ಸರ್ಕಾರ ಏನು ಎಂಪ್ಲಾಯ್ಮೆಂಟ್ ಕೊಡೋದಕ್ಕೆ ಆಗಲ್ಲ.

​ಆದರೆ, ಇದು ಇಡೀ ರಾಷ್ಟ್ರದಲ್ಲೇ ಮೊದಲು ಅಂತ ಏನು ಕ್ಲೈಮ್ ಮಾಡ್ತಾರೋ, ರಾಷ್ಟ್ರದಲ್ಲಿ ಮೊದಲು ಅಲ್ಲ. ಕೇಂದ್ರ ಸರ್ಕಾರ ಈಗಾಗಲೇ ಅಂತಹ ಪೋರ್ಟಲ್ ಅನ್ನು ಮಾಡಿದೆ. ʻಜಾಬ್ ಸೀಕರ್ಸ್ʼ ಮತ್ತು ʻಜಾಬ್ ಪ್ರೊವೈಡರ್ಸ್ʼ ಯಾರಿಗೆ ಕೆಲಸ ಬೇಕು ಮತ್ತು ಯಾರು ಕೆಲಸ ಕೊಡ್ತಾರೆ, ಅವರ ಮಧ್ಯೆ ಒಂದಕ್ಕೊಂದು ಎಕ್ಸ್‌ಚೇಂಜ್ ಮಾಡಿ ಈಗಾಗಲೇ ಆ ಪೋರ್ಟಲ್‌ನಿಂದ 45 ಲಕ್ಷ ಜನರಿಗೆ ಕೆಲಸ ಸಿಕ್ಕಿದೆ.

​ಇದು ಕೇಂದ್ರ ಸರ್ಕಾರವೇ ಮಾಡಿದೆ. ಇದೇನು ಹೊಸದೇನಲ್ಲ, ಹೊಸ ಕಾರ್ಯಕ್ರಮ ಏನಲ್ಲ. ಕೇಂದ್ರ ಸರ್ಕಾರದ ಕಾಪಿಯನ್ನು ರಾಜ್ಯ ಸರ್ಕಾರ ಮಾಡುತ್ತಿದೆ. ಆದ್ದರಿಂದ, ನಾವೇ ಮೊದಲು ಮಾಡ್ತಾ ಇದ್ದೀವಿ ಅನ್ನುವಂತದ್ದು ಸತ್ಯಕ್ಕೆ ದೂರವಾಗಿದೆ ಎಂದರು.

ಜಿಬಿ ರಾಮ್ ಜಿ ಜಾರಿ ಮಾಡಲಿ: ​ಉದ್ಯೋಗ ಖಾತ್ರಿ ದಿನಗಳ ಹೆಚ್ಚಳದ ಕುರಿತು ಕೇಳಿದ ಪ್ರಶ್ನೆಗೆ ಪ್ರತಿಕ್ರಿಯಿಸಿದ ಅವರು, ​”ಆ ಯೋಜನೆ ನಿರಂತರವಾಗಿ ಆಗುವುದಕ್ಕೆ ಬದಲಾವಣೆ, ಶೇ 60-40 ಮಾಡಿದೆ ಮತ್ತು 125 ದಿನಗಳಿಗೆ ಹೆಚ್ಚು ಮಾಡಿದ್ದೇವೆ. ಆ ಹೆಚ್ಚಾದ ದಿನಗಳನ್ನು ನೀವು ಕೊಡ್ರಿ ಈಗಲೂ ಕೂಡ, 100 ದಿನಗಳದ್ದು ಎಷ್ಟು ದುಡ್ಡಿದೆ ಅದನ್ನು ಕೇಂದ್ರ ಸರ್ಕಾರನೇ ಕೊಡುತ್ತದೆ. ಮೇಲಿನ 25 ದಿವಸದ್ದು ನೀವು ಕೊಡ್ರಿ ಅಂತ ಕೇಳ್ತಾ ಇದ್ದೀವಿ. ಅದನ್ನು ಕೊಡೋಕೆ ಆಗದೇ ಈಗ ಸುಮ್ನೆ 80ಕ್ಕೆ ಏರಿಸಬೇಕು, 90ಕ್ಕೆ ಏರಿಸಬೇಕು ಅಂತ ಹೇಳಿಕೆಗಳನ್ನು ಕೊಡುತ್ತಿದ್ದಾರೆ. ​ಬೇರೆ ರಾಜ್ಯಗಳು ಒಪ್ಪಿಕೊಂಡು ಈಗಾಗಲೇ ಕಾರ್ಯಗತ ಪ್ರಾರಂಭ ಮಾಡಿದೆ, ಯೋಜನೆಗಳನ್ನು ಸಿದ್ಧ ಮಾಡ್ತಾ ಇದೆ. ಕೇಂದ್ರ ಸರ್ಕಾರ ನರೇಗಾ ಯೋಜನೆಯನ್ನು ಗ್ರಾಮೀಣ ಪ್ರದೇಶದಲ್ಲಿ, ಅದೂ ಬರಗಾಲ ಇರುವಂತಹ ಸಂದರ್ಭದಲ್ಲಿ ಕೂಲಿ ಕಾರ್ಮಿಕರ ಹಿತದೃಷ್ಟಿಯಿಂದ ಜಿಬಿ ರಾಮ್ ಜಿ ಯೋಜನೆಯನ್ನು ಕೂಡಲೇ ಅನುಷ್ಠಾನ ಮಾಡೋದಕ್ಕೆ ಎಲ್ಲಾ ಕ್ರಮವನ್ನು, ಪ್ರಾರಂಭ ಮಾಡಬೇಕು ಎಂದರು.

ನೀಟ್ ತಪ್ಪಿತಸ್ಥರಿಗೆ ಶಿಕ್ಷೆ: ​ನೀಟ್ ಪರೀಕ್ಷೆ ವಿವಾದದ ಕುರಿತು ಕೇಳಿದ ಪ್ರಶ್ನೆಗೆ ಪ್ರತಿಕ್ರಿಯಿಸಿದ ಅವರು, ನೀಟ್ ಪ್ರಶ್ನೆ ಪತ್ರಿಕೆ ಮೊದಲು ಲೀಕ್ ಆಗುತ್ತಿರಲಿಲ್ಲ. ಆಯಾ ರಾಜ್ಯಗಳಲ್ಲಿ ಸಿಇಟಿ ಇತ್ತು. ಮೊದಲು, ಉತ್ತರ ಪ್ರದೇಶದಲ್ಲಿ ಸಮಾಜವಾದಿ ಪಾರ್ಟಿ ಇದ್ದಾಗ ಎರಡು, ಮೂರು ಬಾರಿ ಲೀಕ್ ಆಗಿತ್ತು, ಕೇಂದ್ರದಲ್ಲಿ ಯುಪಿಎ ಸರ್ಕಾರ ಇದ್ದಾಗ ಎಲ್ಲಾ ರಾಜ್ಯಗಳಲ್ಲಿ ಲೀಕ್ ಆಗಿತ್ತು. ​ಈಗ ಕೇಂದ್ರದಿಂದ ತಪ್ಪಾಗಿಲ್ಲ. ಕೆಲವೇ ಕೆಲವು ಜನಗಳು ತಮ್ಮ ಆಸೆಗಾಗಿ ಇದನ್ನು ಮಾಡಿದ್ದಾರೆ. ಈಗಾಗಲೇ ಅವರೆಲ್ಲರನ್ನು ಒಳಗಡೆ ಹಾಕಿದ್ದಾರೆ. ಆಫೀಸರ್ಸ್ ಒಳಗಡೆ ಹಾಕಿದ್ದಾರೆ, ಮಾಡಿದಂತಹ ಏಜೆನ್ಸಿಗಳನ್ನು ಕೂಡ ಒಳಗಡೆ ಹಾಕಿದ್ದಾರೆ. ಮೊದಲ ಬಾರಿಗೆ ಇಷ್ಟು ಬೇಗ ಕ್ರಮ ತೆಗೆದುಕೊಳ್ಳೋದು ಮತ್ತು ವ್ಯವಸ್ಥೆಯಲ್ಲೂ ಕೂಡ ಸುಧಾರಣೆಯನ್ನು ಮಾಡ್ತಾ ಇದ್ದೀವಿ, ​ಮೊನ್ನೆ ಮಾಕ್ ನೀಟ್ ಅನ್ನುವಂತದ್ದು ಕೂಡ ಬಹಳ ಯಶಸ್ವಿಯಾಗಿದೆ. ಸರಿ ದಾರಿ ಆಗ್ತಾ ಇದೆ. ತಪ್ಪನ್ನು ಸರಿ ಮಾಡುವಂತದ್ದು, ತಪ್ಪು ಮಾಡಿದವರಿಗೆ ಶಿಕ್ಷೆ ಮಾಡುವಂತಹ ಕೆಲಸ ಪ್ರಥಮ ಬಾರಿಗೆ ಯಾರಾದರೂ ಮಾಡಿದ್ದರೆ, ಅದು ನಮ್ಮ ಬಿಜೆಪಿ ಕೇಂದ್ರ ಸರ್ಕಾರ ಎಂದು ಸಮರ್ಥಿಸಿಕೊಂಡರು.

ನಿಲುಗಡೆಗೆ ಒತ್ತಡ: ಹುಬ್ಬಳ್ಳಿ ಗದಗ ಬೈಪಾಸ್ ಮೂಲಕ ಪ್ಯಾಸೆಂಜರ್ ರೈಲು ಹಾದು ಹೋಗುತ್ತಿರುವ ಕುರಿತು ಕೇಳಿದ ಪ್ರಶ್ನೆಗೆ ಪ್ರತಿಕ್ರಿಯಿಸಿದ ಅವರು, ಗೂಡ್ಸ್ ಗಾಡಿ ಬೈಪಾಸ್ ಮೂಲಕ ಹೋಗಲು ನಮ್ಮದೇನು ತಕರಾರಿಲ್ಲ, ಪ್ಯಾಸೆಂಜರ್ ಟ್ರೈನ್ ಐದರಿಂದ ಹತ್ತು ನಿಮಿಷ ಅಲ್ಲಿ ನಿಂತರೆ ಏನು ಅಂತದ್ದೇನು ಆಲಸ್ಯ ಆಗಲ್ಲ. ಅದರಿಂದ ಇದನ್ನ ಬೈಪಾಸ್ ಅನ್ನ ಮಾಡಿ, ನಿಲ್ಲಿಸದೇ ಇರೋದು ಸರಿಯಲ್ಲ. ಇದರ ವಿರುದ್ದ ​ನಾವು ಹೋರಾಟ ಮಾಡಲು ಸಿದ್ಧರಿದ್ದೇವೆ ಮತ್ತು ಕೇಂದ್ರದ ಸಚಿವರಿಗೆ ಪತ್ರವನ್ನು ಬರೆದು, ಈ ಆದೇಶವನ್ನು ವಾಪಸ್ ಪಡೆಯುವಂತೆ ಎಲ್ಲಾ ಪ್ರಯತ್ನಗಳನ್ನು ಮಾಡುತ್ತೇವೆ. ಈಗಾಗಲೇ ಕೇಂದ್ರ ಸಚಿವರಿಗೆ ನಾನು ಮಾತನಾಡಿದ್ದೇನೆ, ಪತ್ರವನ್ನು ಕೂಡ ಕೊಟ್ಟಿದ್ದೇನೆ. ಅದನ್ನು ಸರಿಪಡಿಸುತ್ತೇವೆ ಅನ್ನುವಂತಹ ವಿಶ್ವಾಸವನ್ನು ಕೂಡ ಕೊಟ್ಟಿದ್ದಾರೆ ಎಂದರು.