ಬಾಗಲಕೋಟೆ: ಬಾಗಲಕೋಟೆ ಘಟಕದ ಕೆಎಸ್ಆರ್ಟಿಸಿ ಬಸ್ ಪಾಟಾ ಕಟ್ ಆಗಿ ಚಾಲಕನ ನಿಯಂತ್ರಣ ತಪ್ಪಿ ಜಮೀನಿನೊಳಗೆ ನುಗ್ಗಿದ ಘಟನೆ ಗೋವನಕೊಪ್ಪ ಹತ್ತಿರ ರಾಷ್ಟ್ರೀಯ ಹೆದ್ದಾರಿ 218ರಲ್ಲಿ ನಡೆದಿದೆ.
ಬಾಗಲಕೋಟೆ ಇಂದ ಹುಬ್ಬಳ್ಳಿ ಕಡೆಗೆ ಹೊರಟಿದ್ದ ತಡೆ ರಹಿತ ಸಾರಿಗೆ ಬಸ್ನಲ್ಲಿ 60ಕ್ಕೂ ಹೆಚ್ಚು ಪ್ರಯಾಣಿಕರು ಪ್ರಯಾಣಿಸುತ್ತಿದ್ದರು. ದಿಢೀರ್ ಪಾಟಾ ತುಂಡಾದ ಕಾರಣ ಏಕಾಏಕಿ ಹೆದ್ದಾರಿ ಪಕ್ಕದ ಜಮೀನಿಗೆ ನುಗ್ಗಿ ಈ ದುರ್ಘಟನೆ ಸಂಭವಿಸಿದೆ.
ಜಮೀನಿನ ಒಡ್ಡು ಹತ್ತಿದ ಬಸ್ ಎತ್ತರಕ್ಕೆ ಹಾರಿದ್ದರಿಂದ ಐದಾರು ಜನರಿಗೆ ಸಣ್ಣ-ಪುಟ್ಟ ಗಾಯಗಳಾಗಿದ್ದು, ಅದೃಷ್ಟವಶಾತ್ ಎಲ್ಲರೂ ಪ್ರಾಣಾಪಾಯದಿಂದ ಪಾರಾಗಿದ್ದಾರೆ. ಘಟನೆಯಲ್ಲಿ ಗಾಯಗೊಂಡವರನ್ನ ಆಂಬ್ಯುಲೆನ್ಸ್ ಮೂಲಕ ಜಿಲ್ಲಾಸ್ಪತ್ರೆಗೆ ಸೇರಿಸಲಾಗಿದ್ದು ಚಿಕಿತ್ಸೆ ನೀಡಲಾಗುತ್ತಿದೆ.
ಸ್ಥಳಕ್ಕೆ ಆಗಮಿಸಿದ ಪೊಲೀಸರು ಗಾಯಾಳುಗಳನ್ನ ಆಸ್ಪತ್ರೆಗೆ ಸೇರಿಸಿ ಪರಿಶೀಲನೆ ನಡೆಸಿದರು. ವಿಷಯ ತಿಳಿಯುತ್ತಿದ್ದಂತೆ ಬಾದಾಮಿ ಘಟಕದ ಎಪಿಎಸ್ ಬಿ.ಎಸ್. ಕವಡಿ, ಸ್ಥಳೀಯ ಸಾರಿಗೆ ನಿಯಂತ್ರಕ ಆರ್.ಎಚ್. ಭಜಂತ್ರಿ ಭೇಟಿ ನೀಡಿ ಚಾಲಕರಿಂದ ಮಾಹಿತಿ ಪಡೆದರು.





















