ಬಾಗಲಕೋಟೆ: ಇಲ್ಲಿನ ಪಟ್ಟಣ ಅಭಿವೃದ್ಧಿ ಪ್ರಾಧಿಕಾರದ ಸಿಬ್ಬಂದಿಯೊಬ್ಬರಿಗೆ ರೈತ ಬಸವರಾಜ ದೊಡ್ಡಮನಿ ಹೊಡೆದ ಪ್ರಕರಣಕ್ಕೀಗ ಲೋಕಾಯುಕ್ತರು ಎಂಟ್ರಿ ಕೊಟ್ಟಿದ್ದಾರೆ. 20 ವರ್ಷವಾದರೂ ರೈತನಿಗೆ ಪರಿಹಾರ, ನಿವೇಶನ ನೀಡದ ಬಗ್ಗೆ ವಿವರಣೆ ಕೇಳಿ ಅಧಿಕಾರಿಗಳ ವಿರುದ್ಧ ಸುಮೋಟೋ ಪ್ರಕರಣವನ್ನೂ ದಾಖಲಿಸಿಕೊಂಡಿದ್ದಾರೆ.
ಈ ಬಗ್ಗೆ ಮಾಧ್ಯಮಗಳಲ್ಲಿ ಪ್ರಕಟಗೊಂಡಿರುವ ವರದಿ ಗಮನಿಸಿ ಉಪಲೋಕಾಯುಕ್ತ ನ್ಯಾ. ಬಿ. ವೀರಪ್ಪ ಅವರು ಸುಮೋಟೊ ಪ್ರಕರಣ ದಾಖಲಿಸಿಕೊಳ್ಳುವಂತೆ ಸೂಚಿಸಿದ್ದು, ಬಿಟಿಡಿಎ ಪುನರ್ವಸತಿ ವಿಭಾಗ, ಭೂ ಪರಿಹಾರ ವಿತರಣೆ ವಿಭಾಗ, ವಿಶೇಷ ಭೂಸ್ವಾಧೀನಾಧಿಕಾರಿ, ಪುನರ್ವಸತಿ ಅಧಿಕಾರಿ ಹಾಗೂ ತಹಶೀಲ್ದಾರ್ಗಳ ವಿರುದ್ಧ ದೂರು ದಾಖಲಿಸಿಕೊಂಡಿದ್ದಾರೆ.
ರೈತ ಬಸವರಾಜ ದೊಡ್ಡಮನಿಗೆ 20 ವರ್ಷಗಳಿಂದ ಹಂತ, ಹಂತವಾಗಿ ನೀಡಬೇಕಾದ ಪರಿಹಾರವನ್ನು ನೀಡದೆ ಸತಾಯಿಸುತ್ತಿರುವ ಬಗ್ಗೆ ವರದಿಯಾಗಿರುವ ಹಿನ್ನೆಲೆಯಲ್ಲಿ ಸ್ವಂಯ ಪ್ರೇರಿತ ದೂರು ದಾಖಲಾಗಿದೆ. ಈ ಸಂಬಂಧ ಉಲ್ಲೇಖಿಸಿರುವ ಐವರು ಅಧಿಕಾರಿಗಳು ಜುಲೈ 27ರಂದು ಖುದ್ದು ಹಾಜರಾಗಿ ವಿವರಣೆ ನೀಡುವಂತೆ ಸೂಚಿಸಿದ್ದಾರೆ.





















