ಭ್ರಷ್ಟಾಚಾರ ಆರೋಪಗಳ ಬೆನ್ನಲ್ಲೇ ಕ್ರಿಕೆಟ್ ಕೆನಡಾ ಮೇಲೆ ಐಸಿಸಿ ಕ್ರಮ : ಕ್ರಿಕೆಟ್ ಕೆನಡಾ ಅಮಾನತು – ಮರುಸ್ಥಾಪನೆಗೆ ಷರತ್ತು ವಿಧಿಸಿದ ICC
ನವದೆಹಲಿ: ಅಂತರರಾಷ್ಟ್ರೀಯ ಕ್ರಿಕೆಟ್ ಮಂಡಳಿ (ICC) ಕ್ರಿಕೆಟ್ ಕೆನಡಾ ವಿರುದ್ಧ ಮಹತ್ವದ ಶಿಸ್ತು ಕ್ರಮ ಕೈಗೊಂಡಿದ್ದು, ಸದಸ್ಯತ್ವ ಕಟ್ಟುಪಾಡುಗಳ ಗಂಭೀರ ಉಲ್ಲಂಘನೆ ಹಾಗೂ ಆಡಳಿತಾತ್ಮಕ ವೈಫಲ್ಯಗಳನ್ನು ಉಲ್ಲೇಖಿಸಿ ಕ್ರಿಕೆಟ್ ಕೆನಡಾವನ್ನು ತಕ್ಷಣದಿಂದ ಜಾರಿಗೆ ಬರುವಂತೆ ತನ್ನ ಸದಸ್ಯತ್ವದಿಂದ ಅಮಾನತುಗೊಳಿಸಿದೆ.
ಅಹಮದಾಬಾದ್ನಲ್ಲಿ ನಡೆದ ಐಸಿಸಿ ಮಂಡಳಿ ಸಭೆಯ ಬಳಿಕ ಈ ನಿರ್ಧಾರ ಪ್ರಕಟಿಸಲಾಗಿದ್ದು, ಕ್ರಿಕೆಟ್ ಕೆನಡಾದ ಆಡಳಿತದಲ್ಲಿ ಪಾರದರ್ಶಕತೆ ಮತ್ತು ಉತ್ತಮ ಆಡಳಿತದ ಕೊರತೆ ಇರುವ ಬಗ್ಗೆ ಹಲವು ತಿಂಗಳುಗಳಿಂದ ವ್ಯಕ್ತವಾಗಿದ್ದ ಆತಂಕಗಳ ಹಿನ್ನೆಲೆಯಲ್ಲಿ ಈ ಕ್ರಮ ಕೈಗೊಳ್ಳಲಾಗಿದೆ.
ಐಸಿಸಿ ಪ್ರಕಟಣೆ ಪ್ರಕಾರ, “ಸದಸ್ಯತ್ವ ಕಟ್ಟುಪಾಡುಗಳ ಗಂಭೀರ ಉಲ್ಲಂಘನೆಯಿಂದಾಗಿ ಕ್ರಿಕೆಟ್ ಕೆನಡಾವನ್ನು ತಕ್ಷಣದಿಂದ ಜಾರಿಗೆ ಬರುವಂತೆ ಅಮಾನತುಗೊಳಿಸಲು ಐಸಿಸಿ ಮಂಡಳಿ ನಿರ್ಧರಿಸಿದೆ” ಎಂದು ತಿಳಿಸಲಾಗಿದೆ.
ಭ್ರಷ್ಟಾಚಾರ ಆರೋಪಗಳ ಬಳಿಕ ಕ್ರಮ : ಈ ವರ್ಷದ ಏಪ್ರಿಲ್ನಲ್ಲಿ ಕೆನಡಿಯನ್ ಬ್ರಾಡ್ಕಾಸ್ಟಿಂಗ್ ಕಾರ್ಪೊರೇಷನ್ (CBC) ಪ್ರಸಾರ ಮಾಡಿದ ತನಿಖಾ ಸಾಕ್ಷ್ಯಚಿತ್ರದಲ್ಲಿ ಕ್ರಿಕೆಟ್ ಕೆನಡಾದ ಆಡಳಿತ ವ್ಯವಸ್ಥೆಯ ವಿರುದ್ಧ ಗಂಭೀರ ಆರೋಪಗಳು ಕೇಳಿಬಂದಿದ್ದವು. ಕೆಲವು ಅಧಿಕಾರಿಗಳು ಮತ್ತು ಆಟಗಾರರ ವಿರುದ್ಧ ಭ್ರಷ್ಟಾಚಾರ, ಪಂದ್ಯ ಫಿಕ್ಸಿಂಗ್ಗೆ ಸಂಬಂಧಿಸಿದ ಅನುಮಾನಗಳು ಹಾಗೂ ಬೆದರಿಕೆಗಳ ಆರೋಪಗಳು ಚರ್ಚೆಗೆ ಗ್ರಾಸವಾಗಿದ್ದವು.
ಈ ಬೆಳವಣಿಗೆಗಳ ನಂತರ ಐಸಿಸಿ ಆಡಳಿತ ವ್ಯವಸ್ಥೆಯ ಕಾರ್ಯವೈಖರಿಯನ್ನು ಪರಿಶೀಲಿಸಿ, ಅಂತಿಮವಾಗಿ ಅಮಾನತು ಕ್ರಮಕ್ಕೆ ಮುಂದಾಗಿದೆ.
ಆಟಗಾರರಿಗೆ ಯಾವುದೇ ಪರಿಣಾಮವಿಲ್ಲ: ಆದಾಗ್ಯೂ, ಕ್ರಿಕೆಟ್ ಕೆನಡಾದ ಆಡಳಿತ ಸಮಸ್ಯೆಗಳ ಪರಿಣಾಮ ಆಟಗಾರರ ಮೇಲೆ ಬೀಳದಂತೆ ವಿಶೇಷ ವ್ಯವಸ್ಥೆ ಮಾಡಲಾಗಿದೆ ಎಂದು ಐಸಿಸಿ ಸ್ಪಷ್ಟಪಡಿಸಿದೆ. ಅಮಾನತು ಅವಧಿಯಲ್ಲಿಯೂ ಕೆನಡಾದ ರಾಷ್ಟ್ರೀಯ ಪುರುಷ ಹಾಗೂ ಮಹಿಳಾ ತಂಡಗಳು ಐಸಿಸಿ ಆಯೋಜಿಸುವ ಅಂತರರಾಷ್ಟ್ರೀಯ ಟೂರ್ನಿಗಳಲ್ಲಿ ಭಾಗವಹಿಸಲು ಅರ್ಹತೆ ಹೊಂದಿರುತ್ತವೆ. ಆಟಗಾರರ ವೃತ್ತಿಜೀವನ ಮತ್ತು ಅಂತರರಾಷ್ಟ್ರೀಯ ಅವಕಾಶಗಳಿಗೆ ಧಕ್ಕೆಯಾಗದಂತೆ ಈ ನಿರ್ಧಾರ ಕೈಗೊಳ್ಳಲಾಗಿದೆ.
ಆರ್ಥಿಕ ನೆರವು ಮುಂದುವರಿಕೆ : ಕ್ರಿಕೆಟ್ ಕೆನಡಾಗೆ ಐಸಿಸಿ ನೀಡುವ ಆರ್ಥಿಕ ನೆರವು ಸಂಪೂರ್ಣ ಸ್ಥಗಿತಗೊಳ್ಳುವುದಿಲ್ಲ. ಆದರೆ ಇನ್ನು ಮುಂದೆ ಐಸಿಸಿ ಮೇಲ್ವಿಚಾರಣೆಯಲ್ಲಿರುವ ನಿಯಂತ್ರಿತ ಹಣಕಾಸು ವ್ಯವಸ್ಥೆಯ ಮೂಲಕವೇ ಅನುದಾನ ಬಿಡುಗಡೆ ಮಾಡಲಾಗುತ್ತದೆ. ಈ ನಿಧಿಯನ್ನು ರಾಷ್ಟ್ರೀಯ ತಂಡಗಳ ಕಾರ್ಯಕ್ರಮಗಳು, ಆಟಗಾರರ ಅಭಿವೃದ್ಧಿ ಮತ್ತು ಅನುಮೋದಿತ ಚಟುವಟಿಕೆಗಳಿಗೆ ಮಾತ್ರ ಬಳಸಬೇಕಾಗುತ್ತದೆ.
ಮರುಸ್ಥಾಪನೆಗೆ ಷರತ್ತು: ಕ್ರಿಕೆಟ್ ಕೆನಡಾ ಸದಸ್ಯತ್ವವನ್ನು ಮರುಪಡೆಯಲು ಕೆಲವು ನಿರ್ದಿಷ್ಟ ಷರತ್ತುಗಳನ್ನು ಐಸಿಸಿ ವಿಧಿಸಿದೆ. ಆಡಳಿತ ಸುಧಾರಣೆ, ಹಣಕಾಸು ಪಾರದರ್ಶಕತೆ ಮತ್ತು ಸಂಘಟನಾ ವ್ಯವಸ್ಥೆಯ ಪುನರ್ರಚನೆ ಸೇರಿದಂತೆ ಹಲವು ಅಂಶಗಳಲ್ಲಿ ಪ್ರಗತಿ ಸಾಧಿಸಬೇಕಾಗಿದೆ. ಈ ಪ್ರಕ್ರಿಯೆಯನ್ನು ಐಸಿಸಿ ಸಾಮಾನ್ಯೀಕರಣ ಸಮಿತಿ ಹಾಗೂ ಐಸಿಸಿ ನಿರ್ವಹಣಾ ತಂಡ ಮೇಲ್ವಿಚಾರಣೆ ಮಾಡಲಿದ್ದು, ಎಲ್ಲ ಷರತ್ತುಗಳನ್ನು ಸಮರ್ಪಕವಾಗಿ ಪೂರೈಸಿದ ನಂತರ ಮಾತ್ರ ಸದಸ್ಯತ್ವವನ್ನು ಮರುಸ್ಥಾಪಿಸಲಾಗುವುದು.
ಐಸಿಸಿ ಸಭೆಯಲ್ಲಿ ಇತರೆ ಮಹತ್ವದ ನಿರ್ಧಾರಗಳು: ಕ್ರಿಕೆಟ್ ಕೆನಡಾ ಅಮಾನತು ಜೊತೆಗೆ ಐಸಿಸಿ ಮಂಡಳಿ ಕೆಲವು ಹೊಸ ಪ್ರಾಯೋಗಿಕ ಕ್ರಮಗಳಿಗೂ ಅನುಮೋದನೆ ನೀಡಿದೆ.
ಗುಲಾಬಿ ಚೆಂಡಿಗೆ ಪ್ರಾಯೋಗಿಕ ಅನುಮತಿ : ಕೆಟ್ಟ ಬೆಳಕಿನಿಂದಾಗಿ ಟೆಸ್ಟ್ ಪಂದ್ಯಗಳಲ್ಲಿ ಉಂಟಾಗುವ ವ್ಯತ್ಯಯ ಕಡಿಮೆ ಮಾಡಲು ಉಭಯ ತಂಡಗಳ ಒಪ್ಪಿಗೆಯ ಮೇರೆಗೆ ಗುಲಾಬಿ ಚೆಂಡಿನ ಬಳಕೆಗೆ ಪ್ರಾಯೋಗಿಕ ಅನುಮತಿ.
ಶಂಕಿತ ಅಕ್ರಮ ಬೌಲಿಂಗ್ ಶೈಲಿಗಳನ್ನು ಪರಿಶೀಲಿಸುವ ವೇಳೆ ಪಂದ್ಯಾಧಿಕಾರಿಗಳಿಗೆ ಹಾಕ್-ಐ ಡೇಟಾ ಬಳಕೆಗೆ ಅವಕಾಶ. ಟಿ20 ಅಂತರರಾಷ್ಟ್ರೀಯ ಪಂದ್ಯಗಳಲ್ಲಿ ಕಡ್ಡಾಯ 15 ನಿಮಿಷಗಳ ಮಧ್ಯಂತರ. ಪಾನೀಯ ವಿರಾಮದ ವೇಳೆ ಮುಖ್ಯ ಕೋಚ್ ಅಥವಾ ಅವರ ಪ್ರತಿನಿಧಿಗೆ ಆಟಗಾರರೊಂದಿಗೆ ಸಮಾಲೋಚನೆ ನಡೆಸಲು ಅನುಮತಿ.
ಐಸಿಸಿ ತೆಗೆದುಕೊಂಡಿರುವ ಈ ಕ್ರಮಗಳು ಜಾಗತಿಕ ಕ್ರಿಕೆಟ್ ಆಡಳಿತದಲ್ಲಿ ಪಾರದರ್ಶಕತೆ ಹೆಚ್ಚಿಸುವ ಮತ್ತು ಆಟದ ಗುಣಮಟ್ಟವನ್ನು ಸುಧಾರಿಸುವ ನಿಟ್ಟಿನಲ್ಲಿ ಮಹತ್ವದ ಹೆಜ್ಜೆಯಾಗಿ ಪರಿಗಣಿಸಲಾಗುತ್ತಿದೆ.






















