ಬೆಂಗಳೂರು: ದೇಶದ 80ನೇ ಸ್ವಾತಂತ್ರ್ಯ ದಿನಾಚರಣೆಯ ಮುನ್ನ ಕೇಂದ್ರ ಗೃಹ ಸಚಿವಾಲಯವು ಪೊಲೀಸ್ ಇಲಾಖೆಯಲ್ಲಿ ಅತ್ಯುತ್ತಮ ಹಾಗೂ ಶ್ಲಾಘನೀಯ ಸೇವೆ ಸಲ್ಲಿಸಿದ ಅಧಿಕಾರಿಗಳು ಮತ್ತು ಸಿಬ್ಬಂದಿಗೆ ನೀಡಲಾಗುವ ‘ರಾಷ್ಟ್ರಪತಿ ಪದಕ-2026’ ಪ್ರಶಸ್ತಿಗಳನ್ನು ಘೋಷಿಸಿದೆ.
ಈ ಬಾರಿ ಕರ್ನಾಟಕ ಪೊಲೀಸ್ ಇಲಾಖೆಯ ಒಟ್ಟು 17 ಮಂದಿ ಪ್ರತಿಷ್ಠಿತ ಸೇವಾ ಪದಕಕ್ಕೆ ಆಯ್ಕೆಯಾಗಿದ್ದಾರೆ. ಸಿಸಿಬಿಯ ಸಹಾಯಕ ಪೊಲೀಸ್ ಆಯುಕ್ತ ಹೆಚ್.ಎನ್. ಧರ್ಮೇಂದ್ರ ಅವರಿಗೆ ರಾಷ್ಟ್ರಪತಿ ವಿಶಿಷ್ಟ ಸೇವಾ ಪದಕ (President’s Medal for Distinguished Service) ಲಭಿಸಿದೆ.
ಇನ್ನು 16 ಮಂದಿ ಪೊಲೀಸ್ ಅಧಿಕಾರಿಗಳು ಮತ್ತು ಸಿಬ್ಬಂದಿಗೆ ಪೊಲೀಸ್ ಪದಕ ಫಾರ್ ಮೆರಿಟೋರಿಯಸ್ ಸರ್ವಿಸ್ (Medal for Meritorious Service) ಗೌರವ ದೊರೆತಿದೆ.
ಶ್ಲಾಘನೀಯ ಸೇವಾ ಪದಕಕ್ಕೆ ಆಯ್ಕೆಯಾದವರಲ್ಲಿ ಸಾರಾ ಫಾತಿಮಾ, ಥಾಮಸ್ ಮ್ಯಾಥ್ಯೂ, ಮಹಾದೇವ್, ಪರಮಾನಂದ್, ಷಣ್ಮುಗವರ್ಮಾ, ಭಾವುದ್ದೀನ್ ರುಕ್ಮುದ್ದೀನ್, ಗುರುಪ್ರಸಾದ್ ಗೋಪಾಲ್ ನಾಯಕ್, ನಯೀಂ, ಶ್ರೀನಿವಾಸ, ಜ್ಞಾನದೇವ್ ನವಲ ತರಾಸೆ, ಮಹದೇವಸ್ವಾಮಿ, ಮಾರಿಯಾ ಜೋಸೆಫ್ ದಿನೇಶ್ ಕುಮಾರ್, ಚಂದ್ರಶೇಖರ ಚಿಕ್ಕಣ್ಣನವರ್, ಅಬ್ದುಲ್ ಕಮಾಲ್, ನಾಗೇಶ್ ಮಚ್ಚಯ್ಯ ಹಾಗೂ ಮನೋಹರ್ ಸೇರಿದ್ದಾರೆ.
ಇವರಲ್ಲಿ ಪೊಲೀಸ್ ಅಧೀಕ್ಷಕ, ಕಮಾಂಡೆಂಟ್, ಎಸಿಪಿ, ಡಿವೈಎಸ್ಪಿ, ಪೊಲೀಸ್ ಇನ್ಸ್ಪೆಕ್ಟರ್, ಪಿಎಸ್ಐ ಸೇರಿದಂತೆ ವಿವಿಧ ಹಂತದ ಅಧಿಕಾರಿಗಳು ಮತ್ತು ಸಿಬ್ಬಂದಿ ಇದ್ದಾರೆ. ಬೆಂಗಳೂರು, ಮೈಸೂರು, ಬೆಳಗಾವಿ, ರಾಯಚೂರು, ಹುಣಸೂರು ಸೇರಿದಂತೆ ರಾಜ್ಯದ ವಿವಿಧ ಘಟಕಗಳಲ್ಲಿ ಸೇವೆ ಸಲ್ಲಿಸುತ್ತಿರುವ ಸಿಬ್ಬಂದಿಗೆ ಈ ಗೌರವ ಸಂದಿದೆ.
ದೀರ್ಘಕಾಲದ ಶ್ಲಾಘನೀಯ ಸೇವೆ, ಕರ್ತವ್ಯನಿಷ್ಠೆ ಹಾಗೂ ಪೊಲೀಸ್ ಇಲಾಖೆಗೆ ನೀಡಿದ ಕೊಡುಗೆಯನ್ನು ಪರಿಗಣಿಸಿ ಈ ಪ್ರತಿಷ್ಠಿತ ಪದಕಗಳನ್ನು ನೀಡಲಾಗುತ್ತದೆ.




















