ಮಳೆಗಾಲ ಎಂದರೆ ತಂಪಾದ ವಾತಾವರಣ, ಮಣ್ಣಿನ ಸುವಾಸನೆ ಮತ್ತು ಮಳೆಯಲ್ಲಿ ನೆನೆಯುವ ಖುಷಿ. ಆದರೆ ಮಳೆಗಾಲದಲ್ಲಿ ನಮ್ಮ ಆರೋಗ್ಯದ ಬಗ್ಗೆಯೂ ಸ್ವಲ್ಪ ಹೆಚ್ಚು ಕಾಳಜಿ ವಹಿಸಬೇಕು. ಮಳೆ ಬಂದಾಗ ವಾತಾವರಣದಲ್ಲಿ ತೇವಾಂಶ ಹೆಚ್ಚಾಗುವುದರಿಂದ ಶೀತ, ಕೆಮ್ಮು, ಜ್ವರ, ಗಂಟಲು ನೋವು ಸೇರಿದಂತೆ ಹಲವು ಸಣ್ಣಪುಟ್ಟ ಆರೋಗ್ಯ ಸಮಸ್ಯೆಗಳು ಕಾಣಿಸಿಕೊಳ್ಳಬಹುದು.
ಮಳೆಗಾಲದಲ್ಲಿ ಹೊರಗಡೆ ಸಿಗುವ ಜಂಕ್ ಫುಡ್ಡ ತಿನ್ನುವಾಗ ಎಚ್ಚರಿಕೆ ವಹಿಸುವುದು ಒಳ್ಳೆಯದು. ರಸ್ತೆಯ ಬದಿಯಲ್ಲಿ ತೆರೆದಿಟ್ಟಿರುವ ತಿಂಡಿ, ಕತ್ತರಿಸಿದ ಹಣ್ಣುಗಳು ಮತ್ತು ಸ್ವಚ್ಛತೆ ಬಗ್ಗೆ ಅನುಮಾನ ಇರುವ ಆಹಾರವನ್ನು ಸಾಧ್ಯವಾದಷ್ಟು ತಪ್ಪಿಸಬೇಕು. ಮನೆಯಲ್ಲಿ ತಯಾರಿಸಿದ ಬಿಸಿ ಮತ್ತು ಸ್ವಚ್ಛವಾದ ಆಹಾರ ಸೇವಿಸುವುದು ಉತ್ತಮ.
ಕುಡಿಯುವ ನೀರಿನ ಬಗ್ಗೆಯೂ ಗಮನ ಕೊಡಬೇಕು. ಸ್ವಚ್ಛವಾದ ನೀರನ್ನು ಮಾತ್ರ ಕುಡಿಯಬೇಕು. ನೀರನ್ನು ಕುದಿಸಿ ಕುಡಿಯುವುದರಿಂದ ಹಲವು ಸಮಸ್ಯೆಗಳನ್ನು ತಪ್ಪಿಸಬಹುದು. ಊಟ ಮಾಡುವ ಮೊದಲು ಮತ್ತು ಹೊರಗಿನಿಂದ ಮನೆಗೆ ಬಂದ ನಂತರ ಕೈಗಳನ್ನು ಸಾಬೂನಿನಿಂದ ಚೆನ್ನಾಗಿ ತೊಳೆಯುವ ಅಭ್ಯಾಸ ಮಾಡಿಕೊಳ್ಳಬೇಕು.
ಮಳೆಗಾಲದಲ್ಲಿ ಸೊಳ್ಳೆಗಳ ಕಾಟವೂ ಹೆಚ್ಚಾಗುತ್ತದೆ. ಮನೆಯ ಸುತ್ತಮುತ್ತ ನೀರು ನಿಲ್ಲದಂತೆ ನೋಡಿಕೊಳ್ಳಬೇಕು. ಹೂವಿನ ಕುಂಡ, ಬಕೆಟ್, ಟೈರ್ ಅಥವಾ ಇತರ ವಸ್ತುಗಳಲ್ಲಿ ನೀರು ನಿಂತಿದ್ದರೆ ಅದನ್ನು ಖಾಲಿ ಮಾಡಬೇಕು.
ಮಳೆಯಲ್ಲಿ ನೆನೆಯದರೆ ಮನೆಗೆ ಬಂದ ತಕ್ಷಣ ಒದ್ದೆಯಾದ ಬಟ್ಟೆ ಬದಲಿಸಿ ದೇಹವನ್ನು ಮತ್ತು ತಲೆಯನ್ನು ಒಣಗಿಸಿಕೊಳ್ಳಬೇಕು. ದಿನದಲ್ಲಿ ಹೆಚ್ಚು ನೀರು ಕುಡಿಯುವುದು, ಪೌಷ್ಟಿಕ ಆಹಾರ ಸೇವಿಸುವುದು ಮತ್ತು ಸರಿಯಾಗಿ ನಿದ್ರೆ ಮಾಡುವುದು ಕೂಡ ಮುಖ್ಯ.
ಮಳೆಗಾಲವನ್ನು ಸಂತೋಷದಿಂದ ಆನಂದಿಸುವುದರ ಜೊತೆಗೆ ಆರೋಗ್ಯದ ಕಡೆಗೂ ಸ್ವಲ್ಪ ಗಮನ ಕೊಟ್ಟರೆ, ಈ ಋತುವನ್ನು ಯಾವುದೇ ತೊಂದರೆ ಇಲ್ಲದೆ ಖುಷಿಯಾಗಿ ಕಳೆಯಬಹುದು.






















