ಕಠ್ಮಂಡು: ನೇಪಾಳ ಪ್ರವಾಹದಲ್ಲಿ ಮೃತಪಟ್ಟವರ ಸಂಖ್ಯೆ 579ಕ್ಕೆ ಏರಿದೆ. ಮತ್ತೆ ಪ್ರವಾಹ ಸಂಭವಿಸಬಹುದು ಎನ್ನುವ ಎಚ್ಚರಿಕೆ ನಡುವೆಯೇ ಶೋಧ ಕಾರ್ಯಾಚರಣೆ ನಡೆ ಯುತ್ತಿದೆ. 1400ಕ್ಕೂ ಹೆಚ್ಚು ಜನ ಕಾಣೆಯಾಗಿದ್ದು, ಈ ಪೈಕಿ 320 ಭಾರತೀಯ ರಿದ್ದಾರೆ. ಕಾಣೆಯಾಗಿರುವ ಆಪ್ತರು ಮತ್ತು ಸಂಬಂಧಿಕರನ್ನು ಹುಡುಕಿಕೊಂಡು ಜನ ಅಲೆ ದಾಡುತ್ತಿದ್ದಾರೆ. ಎತ್ತರದ ಪ್ರದೇಶದಲ್ಲಿ ಕೊಚ್ಚಿಕೊಂಡು ಹೋಗಿರುವವರು ನೂರಾರು ಕಿ.ಮೀ. ದೂರ ಹರಿದು ಹೋಗಿರುವುದರಿಂದ ಕಾರ್ಯಾಚರಣೆಯೂ ಕಷ್ಟಕರವಾಗಿದೆ.
ರಾಜಧಾನಿ ಕಾಠ್ಮಂಡುವಿಗೆ ಅಗತ್ಯ ವಸ್ತುಗಳನ್ನು ಪೂರೈಸುವ ಪ್ರಮುಖ ಮಾರ್ಗ ಪೃಥ್ವಿ ಹೆದ್ದಾರಿ ಸಂಪೂರ್ಣ ಬಂದ್ ಆಗಿ ಮೂರು ದಿನ ಕಳೆದಿದ್ದು, ಕೊರತೆ ಎದುರಾಗುವ ಸಾಧ್ಯತೆ ಇದೆ. ಇನ್ನೂ ನಾಲ್ಕೈದು ದಿನಗಳಿಗಾಗುವಷ್ಟು ಪೆಟ್ರೋಲ್, ಡೀಸೆಲ್ ಇದೆ ಎಂದು ಅಧಿಕಾರಿಗಳು ಖಚಿತಪಡಿಸಿದ್ದಾರೆ. ತರಕಾರಿ, ಹಣ್ಣು ಕೂಡ ಇದೇ ಮಾರ್ಗದಲ್ಲೇ ಕಾಠ್ಮಂಡುವಿಗೆ ಬರಬೇಕಿದೆ.
ಈ ನಡುವೆ ಪ್ರವಾಹಕ್ಕೆ ಕಾರಣವಾದ ಪರ್ವತ ಪ್ರದೇಶದಲ್ಲಿ ಈಗ ಎರಡನೇ ಕೊಳ ನಿರ್ಮಾಣವಾಗಿರುವುದು ಕಂಡುಬಂದಿದೆ. ಯಾವುದೇ ಕ್ಷಣ ಇದು ಕಟ್ಟೆಯೊಡೆದುಕೊಂಡು ಪ್ರವಾಹರೂಪ ತಾಳುವ ಎಲ್ಲ ಸಾಧ್ಯತೆ ಇದೆ ಎನ್ನಲಾಗಿದೆ. ಈ ನಡುವೆ ನೇಪಾಳ-ಚೀನಾ ಪ್ರವಾಹ 93,000 ಜನರ ಮೇಲೆ ಪರಿಣಾಮ ಬೀರಿದೆ ಎಂದು ರೆಡ್ಕ್ರಾಸ್ ವರದಿ ಮಾಡಿದೆ.
ಶೋಧ ಕರ್ಯಾಚರಣೆ: ಒಟ್ಟು 4400 ಪೊಲೀಸ್ ಸಿಬ್ಬಂದಿ ಶೋಧ ಕಾರ್ಯಾಚರಣೆಯಲ್ಲಿ ತೊಡಗಿಕೊಂಡಿದ್ದಾರೆ. ಜೊತೆಗೆ ನೇಪಾಳದ ಆರ್ಮಿ ಮತ್ತು ಸಶಸ್ತ್ರ ಪೊಲೀಸ್ ಪಡೆಗಳೂ ಇದರಲ್ಲಿ ಸೇರಿವೆ. ನುವಾಕೋಟ್, ರಸುವಾ ಮತ್ತು ಧಾಡಿಂಗ್ ಪ್ರದೇಶಗಳಲ್ಲಿ 1473 ನೇಪಾಳಿಯರನ್ನು ಇವರು ರಕ್ಷಿಸಿದ್ದಾರೆ.






















