ಉತ್ತರ ಕನ್ನಡ(ದಾಂಡೇಲಿ): ದಾಂಡೇಲಿ ತಾಲೂಕಿನ ಆಲೂರು ಗ್ರಾಮ ಪಂಚಾಯತ್ ವ್ಯಾಪ್ತಿಯ ಹಾಳಮಡ್ಡಿ ಮಜರೆಯ ದಾಂಡೇಲಪ್ಪಾ ದೇವಸ್ಥಾನದ ಸಮೀಪ ಯಾವುದೇ ಪರವಾನಗಿ ಇಲ್ಲದೆ ಹೋಟೆಲ್ ಹಾಗೂ ಹೋಂಸ್ಟೇ ನಿರ್ಮಾಣ ಮಾಡಲಾಗುತ್ತಿದೆ ಎಂದು ಆರೋಪಿಸಿ ಸ್ಥಳೀಯರು ಮಾಜಿ ಗ್ರಾ.ಪಂ. ಸದಸ್ಯ ಸುಭಾಸ್ ಭೋವಿ ವಡ್ಡರ್ ನೇತೃತ್ವದಲ್ಲಿ ಪ್ರತಿಭಟನೆ ನಡೆಸಿದರು.
ಈ ಕುರಿತು ತಹಶೀಲ್ದಾರರು, ತಾ.ಪಂ. ಇಒ ಹಾಗೂ ಗ್ರಾಮೀಣ ಪೊಲೀಸ್ ಠಾಣೆಗೆ ಮನವಿ ಸಲ್ಲಿಸಿ, ನಿರ್ಮಾಣ ಕಾರ್ಯ ತಕ್ಷಣ ಸ್ಥಗಿತಗೊಳಿಸಿ ಕ್ರಮ ಕೈಗೊಳ್ಳುವಂತೆ ಒತ್ತಾಯಿಸಿದರು. ನಿರ್ಮಾಣ ನಡೆಯುತ್ತಿರುವ ಜಾಗೆಗೆ ಸಂಬಂಧಿಸಿದ ಪ್ರಕರಣ ನ್ಯಾಯಾಲಯದಲ್ಲಿ ವಿಚಾರಣೆಯಲ್ಲಿದ್ದು, ಕಾಮಗಾರಿ ನ್ಯಾಯಾಲಯದ ಆದೇಶ ಉಲ್ಲಂಘನೆಯಾಗಿದೆ ಎಂದು ಮನವಿಯಲ್ಲಿ ಆರೋಪಿಸಲಾಗಿದೆ.
ಹಿಂದೆ ಎಸಿಎಫ್ ಮದನ ನಾಯಕ ಹತ್ಯೆ ಪ್ರಕರಣ ನಡೆದಿದ್ದ ಪ್ರದೇಶ ಇದಾಗಿರುವುದರಿಂದ ದೇವಸ್ಥಾನದ ಸುರಕ್ಷತೆ ಹಾಗೂ ಪಾವಿತ್ರ್ಯ ಕಾಪಾಡಲು ಯಾವುದೇ ಅನುಮತಿ ಅಥವಾ ನಿರಕ್ಷೇಪಣಾ ಪತ್ರ ನೀಡಬಾರದು ಎಂದು ಸಾರ್ವಜನಿಕರು ಆಗ್ರಹಿಸಿದ್ದಾರೆ.





















