ಶಿವಮೊಗ್ಗ: ತೀರ್ಥಹಳ್ಳಿ ತಾಲೂಕಿನ ಮಹಿಷಿ ಗ್ರಾಮದಲ್ಲಿರುವ ಅತ್ಯಂತ ಪುರಾತನ ಉತ್ತರಾದಿ ಮಠದಲ್ಲಿ ಸುಮಾರು 1 ಕೋಟಿ ರೂಪಾಯಿ ಮೌಲ್ಯದ ಚಿನ್ನದ ವಸ್ತುಗಳು ಕಣ್ಮರೆಯಾಗಿರುವುದು ಬೆಳಕಿಗೆ ಬಂದಿದೆ.
ಮಠದ ಗರ್ಭಗುಡಿಯಲ್ಲಿದ್ದ 750 ಗ್ರಾಂ ತೂಕದ ಚಿನ್ನದ ವಸ್ತುಗಳು ಸೇರಿದಂತೆ ಪಂಚಲೋಹದ ಪೂಜಾ ಪರಿಕರಗಳು ನಿಗೂಢವಾಗಿ ಕಳುವಾಗಿವೆ. ಕಳೆದ ಮೂರು ದಿನಗಳಿಂದ ಮಠದಲ್ಲಿ ಗುರುವಂದನೆ ಕಾರ್ಯಕ್ರಮ ನಡೆಯುತ್ತಿತ್ತು. ಈ ಕಾರ್ಯಕ್ರಮದ ನಿಮಿತ್ತ ಬುಧವಾರ ಮಧ್ಯಾಹ್ನದ ವೇಳೆ ಮಠದಲ್ಲಿ ಪೂಜಾ ವಿಧಿವಿಧಾನಗಳು ನಡೆಯುತ್ತಿರುವಾಗಲೇ ಚಿನ್ನದ ವಸ್ತುಗಳು ಕಳುವಾಗಿರುವುದು ಗೊತ್ತಾಗಿದೆ.
ಕಳುವಾದ ವಸ್ತುಗಳ ಪೈಕಿ ದೇವರ ಪೂಜೆಗೆ ಬಳಸಲಾಗಿದ್ದ ಚಿನ್ನದ ದೀಪಾರತಿಗಳು, ಚಿನ್ನದ ದೀಪಗಳು ಹಾಗೂ ಪಂಚಲೋಹದಿಂದ ಮಾಡಲ್ಪಟ್ಟ 15ಕ್ಕೂ ಹೆಚ್ಚು ವಸ್ತುಗಳು ಇದ್ದವು ಎನ್ನಲಾಗಿದೆ. ಘಟನಾ ಸಮಯದಲ್ಲಿ ಮಠದ ಆವರಣದಲ್ಲಿ ಕೇವಲ ಮಠಕ್ಕೆ ಸಂಬಂಧಿಸಿದವರು ಮಾತ್ರ ಇದ್ದರು ಎಂದು ಹೇಳಲಾಗುತ್ತಿದ್ದು, ಮಾಳೂರು ಠಾಣೆ ಪೊಲೀಸರು ಈ ಬಗ್ಗೆ ತನಿಖೆ ನಡೆಸಿದ್ದಾರೆ.






















