ರಾಯಚೂರು: ಕಾರ್ಯಕ್ರಮದ ವೇದಿಕೆಯಿಂದ ನಿರ್ಗಮಿಸುವ ಮೆಟ್ಟಿಲುಗಳ ಪಕ್ಕದಲ್ಲಿ ವಿದ್ಯುತ್ ಶಾರ್ಟ್ ಸರ್ಕ್ಯೂಟ್ ಸಂಭವಿಸಿದ್ದು, ಕೆಲ ಅಂತರದಲ್ಲಿಯೇ ಉಪ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ ಮತ್ತು ಈಶ್ವರ ಖಂಡ್ರೆ ಬೆಂಕಿ ಅನಾಹುತದಿಂದ ಪಾರಾದ ಘಟನೆ ನಡೆದಿದೆ.
ಸಿಂಧನೂರು ತಾಲೂಕು ಕ್ರೀಡಾಂಗಣದಲ್ಲಿ ಬಸನಗೌಡ ಬಾದರ್ಲಿ ಫೌಂಡೇಶನ್ ವತಿಯಿಂದ ಬಸನಗೌಡ ಬಾದರ್ಲಿ ವಿಧಾನ ಪರಿಷತ್ ಸದಸ್ಯರಾಗಿ ಆಯ್ಕೆಯಾಗಿ ಒಂದು ವರ್ಷ ಪೂರೈಸಿದ ಹಿನ್ನೆಲೆಯಲ್ಲಿ ರವಿವಾರ ಆಯೋಜಿಸಿದ್ದ ಜನಪರ ಕಾರ್ಯಕ್ರಮಗಳ ಕೈಪಿಡಿ, 151 ಸಾಮೂಹಿಕ ವಿವಾಹ ಹಾಗೂ 5001 ಮಾತೆಯರಿಗೆ ಉಡಿ ತುಂಬವ ಕಾರ್ಯಕ್ರಮದ ವೇದಿಕೆ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿತ್ತು.
ವೇದಿಕೆ ಕಾರ್ಯಕ್ರಮ ಮುಗಿಸಿಕೊಂಡು ಉಪ ಮುಖ್ಯಮಂತ್ರಿ ಡಿಕೆ ಶಿವಕುಮಾರ ಮತ್ತು ಸಚಿವ ಈಶ್ವರ ಖಂಡ್ರೆ ವೇದಿಕೆಯಿಂದ ನಿರ್ಗಮಿಸುವ ವೇಳೆ ವಿದ್ಯುತ್ ಅವಘಡ ಸಂಭವಿಸಿ ಬೆಂಕಿ ಹತ್ತಿಕೊಂಡಿತು. ತಕ್ಷಣ ಅಲ್ಲಿದ್ದ ಅವರ ಬೆಂಬಲಿಗರು ಅವರನ್ನು ಬಚಾವ್ ಮಾಡಿದರು.
ನಗರದ ತಾಲೂಕು ಕ್ರೀಡಾಂಗಣದಲ್ಲಿ ನಡೆದ ಕಾರ್ಯಕ್ರಮದಲ್ಲಿ ಬೃಹತ್ ವೇದಿಕೆಯನ್ನು ಹಾಕಲಾಗಿತ್ತು. ವೇದಿಕೆಗೆ ಬೇಕಾಗುವ ವಿದ್ಯುತ್ ಸರಬರಾಜಿಗೆ ಬಳಸುವ ವಿದ್ಯುತ್ ವೈರ್ಗಳಿಂದ ಈ ಅವಘಡ ಸಂಭವಿಸಿದೆ ಎನ್ನಲಾಗಿದೆ.























