ದಾವಣಗೆರೆ: ಮಾಧ್ಯಮಗಳಲ್ಲಿ ಮತ್ತು ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿರುವ ಆಡಿಯೋ ಸತ್ಯಕ್ಕೆ ದೂರವಾಗಿದೆ ಎಂದು ಜಮೀರ್ ಅಹಮ್ಮದ್ ಆಡಿಯೋದಲ್ಲಿ ಅವರೊಂದಿಗೆ ಮಾತನಾಡಿದ್ದಾರೆ ಎನ್ನಲಾದ ಕಾಂಗ್ರೆಸ್ ಮುಖಂಡ ಹಾಗೂ ವಕ್ಫ್ ಮಂಡಳಿ ಮಾಜಿ ಜಿಲ್ಲಾಧ್ಯಕ್ಷ ಸಿರಾಜ್ ಅಹಮ್ಮದ್ ಸ್ಪಷ್ಟಪಡಿಸಿದ್ದಾರೆ.
ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, ತಾವು ಮತ್ತು ಜಮೀರ್ ಅಹ್ಮದ್ ಖಾನ್ ಅವರು ಫೋನ್ ಮುಖಾಂತರ ಆ ತರಹದ ಯಾವುದೇ ಮಾತುಕತೆ ನಡೆಸಿಲ್ಲ. ಜಮೀರ್ ಸಾಹೇಬರು ಯಾವಾಗಲೂ ಪಕ್ಷದ ಗೆಲುವಿನ ಬಗ್ಗೆಯೇ ಮಾತನಾಡಿದ್ದರು ಎಂದು ತಿಳಿಸಿದರು.
ಇದು, ಡಿ.ಕೆ. ಶಿವಕುಮಾರ್ ನೇತೃತ್ವದಲ್ಲಿ ಹೊಸ ಸರ್ಕಾರ ರಚನೆ ಆಗುತ್ತಿರುವ ಸಂದರ್ಭದಲ್ಲಿ ಜಮೀರ್ ಅಹ್ಮದ್ ಖಾನ್ ಅವರಿಗೆ ದೊಡ್ಡ ಮಟ್ಟದಲ್ಲಿ ಹಿನ್ನಡೆ ಉಂಟು ಮಾಡಲು ಮತ್ತು ಅವರಿಗೆ ಸೂಕ್ತ ಸ್ಥಾನ ಸಿಗಬಾರದು ಎಂದು ರೂಪಿಸಲಾಗಿರುವ ಸ್ಪಷ್ಟ ಷಡ್ಯಂತ್ರವಾಗಿದೆ. ಹಿಂದೆ ನಸೀರ್ ಸಾಹೇಬರು ಹಾಗೂ ಜಬ್ಬಾರ್ ಸಾಹೇಬರ ವಿಷಯದಲ್ಲೂ ಇದೇ ರೀತಿ ಮಾಡಲಾಗಿತ್ತು ಎಂದು ಆರೋಪಿಸಿದರು.
ಆಡಿಯೋ ಎಡಿಟ್ ಮಾಡಲಾಗಿದೆ?: ಈ ಆಡಿಯೋವನ್ನು 100% ಎಡಿಟ್ ಮಾಡಿ ಸೃಷ್ಟಿಸಲಾಗಿದೆ. ಇದನ್ನು ಯಾರು ಮಾಡಿದ್ದಾರೆ ಮತ್ತು ಎಲ್ಲಿಂದ ಇದು ಹರಿದಾಡಿದೆ ಎಂಬುದನ್ನು ಪತ್ತೆ ಹಚ್ಚಬೇಕಿದೆ ಎಂದು ಹೇಳಿದರು.
ಶ್ರೀನಿವಾಸ್ ದಾಸಕರಿಯಪ್ಪ ಜೊತೆ ಮಾತುಕತೆ ನಡೆಸಿಲ್ಲ: ಶ್ರೀನಿವಾಸ್ ದಾಸಕಯರಿಪ್ಪ ಅವರು ತಮಗೆ ಆಪ್ತರಾಗಿದ್ದರೂ, ಮತದಾನ ದಿನ ಬೂತ್ನಲ್ಲಿ ಭೇಟಿಯಾಗಿದ್ದು ಬಿಟ್ಟರೆ, ಈವರೆಗೂ ಅವರ ಜೊತೆ ಯಾವುದೇ ಫೋನ್ ಸಂಭಾಷಣೆ ನಡೆಸಿಲ್ಲ ಎಂದು ಪ್ರಶ್ನೆಗೆ ಉತ್ತರಿಸಿದರು.
ಇತ್ತೀಚೆಗೆ ಜಮೀರ್ ಅವರೊಂದಿಗೆ ಮಾತನಾಡಿಲ್ಲ: ಬಕ್ರೀದ್ ದಿನ ಜಮೀರ್ ಅವರಿಗೆ ಶುಭ ಹಾರೈಸಿದ್ದು ಬಿಟ್ಟರೆ, ಕಳೆದ ಒಂದು ತಿಂಗಳಿನಿಂದ ಅವರೊಂದಿಗೆ ಯಾವುದೇ ಸಂಪರ್ಕ ಅಥವಾ ಮಾತುಕತೆ ನಡೆದಿಲ್ಲ. ಆಡಿಯೋ ವೈರಲ್ ಆಗಿರುವುದು ಮತ್ತು ನಮ್ಮ ವಿರುದ್ಧ ಷಡ್ಯಂತ್ರ ನಡೆಸಿರುವವರ ವಿರುದ್ಧ ಕಾನೂನು ಹೋರಾಟ ನಡೆಸಲಾಗುವುದು. ಈ ಕುರಿತು ಕಾನೂನು ತಜ್ಞರೊಂದಿಗೆ ಚರ್ಚಿಸಿ, ಮುಂದಿನ ಕ್ರಮ ಕೈಗೊಳ್ಳುವುದಾಗಿ ಅವರು ತಿಳಿಸಿದರು.





















