Home Advertisement
Home ಅಂಕಣ ಅಂಕಣ ಬರಹ: ಮಿತವ್ಯಯ ಕರೆ ಪ್ರಧಾನಿಗೆ ಈಗ `ಲಿಟ್ಮಸ್ ಟೆಸ್ಟ್’

ಅಂಕಣ ಬರಹ: ಮಿತವ್ಯಯ ಕರೆ ಪ್ರಧಾನಿಗೆ ಈಗ `ಲಿಟ್ಮಸ್ ಟೆಸ್ಟ್’

0
2

ಗುರುವಾರ ಸಂಯುಕ್ತ ಕರ್ನಾಟಕ ದಿನಪತ್ರಿಕೆಯಲ್ಲಿ ಪ್ರಕಟವಾದ ಮೋಹನ ಹೆಗಡೆ ಅವರ ಅಂಕಣ

ಒಂದು ವರ್ಷಗಳ ಕಾಲ ಚಿನ್ನ ಖರೀದಿಸಬೇಡಿ. ಸಾರ್ವಜನಿಕ ಸಾರಿಗೆ ಬಳಸಿ. ಇಂಧನ ಮಿತವ್ಯಯ ಮಾಡಿ.ವರ್ಕ್ ಫ್ರಂ ಹೋಮ್’ ಹೆಚ್ಚಲಿ. ಅಡುಗೆ ಎಣ್ಣೆ ಮತ್ತು ರಸಾಯನಿಕ ಗೊಬ್ಬರದ ಬಳಕೆಯನ್ನು ಮಿತಿಗೊಳಿಸಿ. ಇದು ದೇಶಕ್ಕಾಗಿ, ದೇಶದ ಅಭಿವೃದ್ಧಿಗಾಗಿ, ಆರ್ಥಿಕ ಸದೃಢತೆಗಾಗಿ … !

ಪ್ರಧಾನಿ ನರೇಂದ್ರ ಮೋದಿಯವರು ಸೋಮವಾರ ಸಂಜೆ ನೀಡಿದ ಈ ಕರೆ ಈಗ ದೇಶಾದ್ಯಂತ, ಅಷ್ಟೇ ಅಲ್ಲ, ಜಾಗತಿಕ ಮಟ್ಟದಲ್ಲೂ ಸದ್ದು ಮಾಡುತ್ತಿದೆ. ಹಾಗೇ ಜಿಜ್ಞಾಸೆಗಳನ್ನೂ ಹುಟ್ಟು ಹಾಕಿದೆ.

ಪ್ರಧಾನಿ ಮಾಡಿದ ಮನವಿ ಅಂದರೆ, ಜನತೆ ಮತ್ತು ದೇಶದ ಬಗ್ಗೆ ಅಭಿಮಾನ ಇಟ್ಟುಕೊಂಡ ಎಲ್ಲರೂ ಪಕ್ಷಾತೀತವಾಗಿ, ರಾಜಕೀಯರಹಿತವಾಗಿ ಬೆಂಬಲಿಸಬೇಕು. ಇಂತಹ ಅಪೇಕ್ಷೆಯನ್ನು ಕೇಂದ್ರ ಸರ್ಕಾರ, ವಿಶೇಷವಾಗಿ ಪ್ರಧಾನಿ ಹೊಂದಿದ್ದಾರೆ. ಇರಾನ್, ಇಸ್ರೆಲ್, ಅಮೇರಿಕ ಯುದ್ಧ ಕೇವಲ ಭಾರತಕ್ಕಷ್ಟೇ ಅಲ್ಲ; ಜಾಗತಿಕವಾಗಿ ಸಾಕಷ್ಟು ಹಾನಿ ಮಾಡಿದೆ. ವಿಶ್ವದ ಜನರ ಭವಿಷ್ಯತ್ತಿನ ಬಗ್ಗೆ, ವಿಶ್ವ ಒಕ್ಕೂಟದ ವ್ಯವಸ್ಥೆಯ ಬಗ್ಗೆ, ಪರಿಸರ ಅಸಮತೋಲನದ ಬಗ್ಗೆ ವ್ಯಾಪಕವಾಗಿ ಆತಂಕ ಮೂಡಿಸಿದೆ. ಈ ಯುದ್ಧ ಹಲವಾರು ದುಷ್ಪರಿಣಾಮಗಳನ್ನು ವಿಶ್ವದೆಲ್ಲೆಡೆ ಬೀರಿದೆ ಕೂಡ.

ಕಳೆದ ಎರಡೂವರೆ ತಿಂಗಳಿನಿಂದ ನಡೆಯುತ್ತಿರುವ ಈ ಯುದ್ಧ ಪ್ರಸ್ತಾಪವಾದಾಗಲೆಲ್ಲ `ನಾವು ಸುರಕ್ಷಿತ; ಸುಭದ್ರ; ಸದೃಢ. ನಮಗ್ಯಾವ ಪರಿಣಾಮ ಆಗದು’ ಎಂದಿರುವ ಕೇಂದ್ರ ಸರ್ಕಾರದ ಮಾತನ್ನು ಜನ ಬಹುತೇಕ ನಂಬಿ ಖುಷಿ ಪಟ್ಟಿದ್ದರು. ಆಗಾಗ, ಪೆಟ್ರೋಲ್, ಸಿಎನ್‌ಜಿ, ಅಡುಗೆ ಅನಿಲ, ವಾಣಿಜ್ಯ ಅನಿಲ ಇತ್ಯಾದಿಗಳ ಸಮಸ್ಯೆಯಾದರೂ ಸಹಿಸಿಕೊಂಡಿದ್ದರು. ಆದಾಗ್ಯೂ ಕೂಡ ನಮ್ಮಲ್ಲಿ ಸಾಕಷ್ಟು ಇಂಧನ ಸಂಗ್ರಹವಿದೆ. ಒಂಬತ್ತು ತಿಂಗಳ ಕಾಲ ಯಾವ ಸಮಸ್ಯೆಯೂ ಉದ್ಭವಿಸದು ಎನ್ನುವ ಭರವಸೆಯನ್ನು ಸಂಸತ್ತಿನಲ್ಲಿ ಮತ್ತು ಹೊರಗೆ ಪ್ರಧಾನಿಯಾದಿಯಾಗಿ ಎಲ್ಲರೂ ನೀಡಿದ್ದರು. ಜನ ನಂಬಿದ್ದರು.

ಈಗ ಮಿತವ್ಯಯ ಮಾಡಿ. ಬಂಗಾರ ಖರೀದಿಸಬೇಡಿ. ಎಣ್ಣೆ ಬಳಕೆ ಕಡಿಮೆ ಮಾಡಿ. ವಿದೇಶಿ ವಿನಿಮಯ ನಿಯಂತ್ರಿಸಿ. ವಿದೇಶಿ ಪ್ರವಾಸ, ಅದ್ದೂರಿ ಮದುವೆಗಳು ಎಲ್ಲವನ್ನೂ ನಿಲ್ಲಿಸಿ ಎಂದು ಪ್ರಧಾನಿ ಮನವಿ ಮಾಡಿಕೊಂಡಿದ್ದಾರೆ!

ಇಲ್ಲಿ ಪ್ರಮುಖವಾದ ಪ್ರಶ್ನೆ ಎಂದರೆ, ದೇಶದ ಜನತೆ ಪ್ರಧಾನಿ ಮೋದಿಯವರ ಈ ಮನವಿಯನ್ನು ಎಷ್ಟು ಪಾಲಿಸಿಯಾರು? ಎಷ್ಟು ಬೆಂಬಲಿಸಿಯಾರು ಎಂಬುದು. ಎರಡನೆಯದ್ದು ಯುದ್ಧ ಆರಂಭವಾದ ಎರಡು ತಿಂಗಳ ನಂತರ ಈ ಕರೆ ಏಕೆ? ಪಂಚರಾಜ್ಯ ಚುನಾವಣೆ ಕಾರಣಕ್ಕೆ ಜನರಿಗೆ ಸತ್ಯಾಂಶವನ್ನು ಮುಚ್ಚಿಡಲಾಗಿತ್ತೇ? ಅಥವಾ ಬೆಲೆ ಏರಿಕೆ ಮುನ್ಸೂಚನೆಯೇ? ಇದಕ್ಕಾಗಿ ಇಂಥದ್ದೊಂದು ಪೂರ್ವ ಪ್ರಸ್ತಾಪವನ್ನು ಪ್ರಧಾನಿ ಮಾಡಿದರೇ? ವಿದೇಶಿ ವಿನಿಮಯ, ಬಂಡವಾಳ ಸಂರಕ್ಷಿಸಬೇಕಾದ ಕಾರಣ ವಿದೇಶಗಳಿಂದ ಆಮದಾಗುವ ಸರಕಗಳನ್ನು ಕಡಿತಗೊಳಿಸುವ ಅಗತ್ಯತೆ ಈಗ ಅನಿವಾರ್ಯ ಎನ್ನುವುದನ್ನು ಒಪ್ಪಿಕೊಂಡರೂ, ಎರಡು ತಿಂಗಳ ಹಿಂದೆಯೇ ಏಕೆ ನಿಯಂತ್ರಿಸಿಲ್ಲ?

ಈಗ ಪ್ರಧಾನಿ ನರೇಂದ್ರ ಮೋದಿಯವರ ಈ ಮಿತವ್ಯಯ ಬಳಕೆಯ ಕರೆ, ಅವರ ಜನಪ್ರಿಯತೆ ಮತ್ತು ಭರವಸೆಯ ಅಳತೆಗೋಲಾಗಿರುವುದು. ಒಬ್ಬ ಸ್ವಾಭಿಮಾನಿ, ಜನಪ್ರಿಯ, ಅತ್ಯಂತ ಗಂಭೀರ ಪ್ರಧಾನಿಯನ್ನು ಪಡೆದಿದ್ದೇವೆ. ದೇಶದ ಆರ್ಥಿಕತೆ ವಿಶ್ವದಲ್ಲಿ ಮೂರನೇ ಸ್ಥಾನಕ್ಕೆ ಶೀಘ್ರವೇ ಏರಲಿದೆ. ಸದೃಢ ಭಾರತ, `ಸಬ್ ಕಾ ಸಾಥ್… ಸಬ್ ಕಾ ವಿಕಾಸ್’ ನಮ್ಮದು ಎಂದು ಹೆಮ್ಮೆ ಪಡುತ್ತಿದ್ದವರು ದೇಶವಾಸಿಗಳು. ಪ್ರಜಾಪ್ರಭುತ್ವದ ರಕ್ಷಣೆ, ವಿದೇಶಿ ನೀತಿ ಕಳೆದ ಎಪ್ಪತ್ತು ವರ್ಷಗಳಿಗಿಂತ ಈ ಹತ್ತು ವರ್ಷಗಳಲ್ಲಿ ಉತ್ತಮವಾಗಿದೆ ಎನ್ನುತ್ತೇವೆ. ವಿಶ್ವ ಮಟ್ಟದಲ್ಲಿ ಭಾರತ ವಿಶ್ವಗುರುವಾಗಿದೆ ಎಂದು ಬಿಂಬಿಸಿಕೊಂಡು ಬೀಗುತ್ತಿದ್ದೇವೆ. ಹಾಗಾಗಿ ದೇಶದ ಪ್ರಧಾನಿ ಕೊಟ್ಟ ಕರೆಯನ್ನು ಈಗ ಅನುಸರಿಸಬೇಕಾದ ಹೊಣೆ ಎಲ್ಲರದ್ದೂ ಅಲ್ಲವೇ?

ಇದುವೇ ಈಗ ಮೋದಿಯವರ ನಿಜವಾದ ಪರೀಕ್ಷಾ ಕಾಲ. 14 ವರ್ಷಗಳ ಆಳ್ವಿಕೆ ಕಂಡ ನಂತರ ಅವರ ಮಾತಿಗೆ ಜನರ ಸ್ಪಂದನೆ, ಮನ್ನಣೆ ಹೇಗಿದೆ… ಹಿಂದೆ ನೋಟು ಅಮಾನ್ಯೀಕರಣವಾಯಿತು. 2016 ನವೆಂಬರ್ 8ರ ಸಂಜೆ ಮೋದಿ ರಾಷ್ಟ್ರೀಯ ಲೈವ್ ಆಗಮಿಸಿ, ಐದು ನೂರು ಮತ್ತು ಸಾವಿರ ರೂಪಾಯಿ ಮುಖಬೆಲೆ ನೋಟುಗಳನ್ನು ಅಮಾನ್ಯಗೊಳಿಸಿದ ಘೋಷಣೆ ಮಾಡಿದರು. ಇಡೀ ದೇಶ ಸಾಥ್ ಕೊಟ್ಟಿತು. ಎಷ್ಟೇ ಸಂಕಷ್ಟವಾದರೂ, ಕಪ್ಪು ಹಣ ನಿರ್ಮೂಲನವಾಗುತ್ತದೆ; ಖೋಟಾ ನೋಟುಗಳ ಚಲಾವಣೆ ತಪ್ಪುತ್ತದೆ; ದೇಶದ ಆರ್ಥಿಕತೆ ಪುಟಿದೇಳುತ್ತದೆ ಎಂದು ಜನ ಸಾಥ್ ಕೊಟ್ಟರಲ್ಲವೇ? ಕಾಶ್ಮೀರ ತುದಿಯಿಂದ ಕನ್ಯಾಕುಮಾರಿವರೆಗೆ ದೇಶವಾಸಿಗಳು ನೋಟ್‌ಬಂದಿಗೆ ಸಹಕಾರ ನೀಡಿದರಲ್ಲ…!

ಕೋವಿಡ್ ಸಾಂಕ್ರಾಮಿಕ ರೋಗದ ಕಾಲದಲ್ಲಿ ಪ್ರಧಾನಿಯವರು ದೇಶವನ್ನು ಲಾಕ್‌ಡೌನ್ ಮಾಡಿದರು. ಹಾಗೇ ಕೋವಿಡ್ ಓಡಿಸಲು ಜಾಗಟೆ ಬಾರಿಸಿ, ಪೂಜೆ ಮಾಡಿ, ಚಪ್ಪಾಳೆ ತಟ್ಟಿ ಎಂದರು. ಇಡೀ ದೇಶದ ಜನರು, ವಿಜ್ಞಾನಿಗಳಿಂದ ಹಿಡಿದು, ದಂಡಕಾರಣ್ಯದ ಪಕ್ಕದ ಗುಡ್ಡಗಾಡು ವ್ಯಕ್ತಿಯವರೆಗೆ ಜಾಗಟೆ ಬಾರಿಸಿದರು. ನೋಡಿ ಪ್ರಧಾನಿ ಮೋದಿ ದೇಶಕ್ಕೆ ನೀಡಿದ ಕರೆ ಯಾವ ರೀತಿ ಸ್ಪಂದನೆಯನ್ನು ಪಡೆಯಿತು ಎಂದು…!? ನಾವು ಹೆಮ್ಮೆ ಪಟ್ಟುಕೊಂಡೆವು. ಅದೇ ವೇಳೆ `ಪಿಎಂ ಕೇರ್’ ತೆರೆದರು. ಪ್ರಧಾನಿಯೇ ಇದರ ನಿಯಂತ್ರಕ, ನನ್ನ ಮೇಲೆ ವಿಶ್ವಾಸವಿಡಿ, ಕೋವಿಡ್ ಸಂತ್ರಸ್ತರಿಗೆ ಬದುಕು ಕಟ್ಟಿಕೊಡುತ್ತೇವೆ ಎಂದು ಪ್ರಧಾನಿ ಹೇಳಿದರು. ಸರಿ. ಜನ ಇದನ್ನು ಒಪ್ಪಿ, ಉದ್ಯಮಿಯಿಂದ ಹಿಡಿದು ಸಾಮಾನ್ಯರವರೆಗೆ, ವಿದೇಶಗಳಲ್ಲಿ ನೆಲೆಸಿದವರಿಂದ ಹಿಡಿದು ಇಲ್ಲಿ ಕೂಲಿ ನಾಲಿ ಮಾಡುವ ಜನರವರೆಗೆ ಎಲ್ಲರೂ ಪಿಎಂ ಮಾತಿಗೆ ಓಗೋಟ್ಟರು.

ಲಕ್ಷಾಂತರ ಕೋಟಿ ರೂ. ಸಂಗ್ರಹವಾಯಿತು. ಸೂಕ್ತ ಚಿಕಿತ್ಸೆ, ಸರಿಯಾದ ವೈದ್ಯಕೀಯ ನೆರವು ದೊರೆಯಿತೋ ಅದು ಇನ್ನೂ ವಿವಾದಲ್ಲಿಯೇ ಇದೆ. ಕೋವಿಡ್ ಪ್ರಕರಣ ಬಂದಾಗೆಲ್ಲ ಆರೋಪಗಳ ಸರಮಾಲೆಯೇ ಹೊರಬರುತ್ತಿದೆ. ಎಲ್ಲಕ್ಕೂ ಹೆಚ್ಚಾಗಿ ಈಗ ಪ್ರಧಾನಿ ಕೇರ್ ಫಂಡ್‌ಅನ್ನು ಸಾರ್ವಜನಿಕವಾಗಿ ಬಹಿರಂಗಪಡಿಸಲಾಗದು ಎಂದು ಪ್ರಧಾನಿ ಕಾರ್ಯಾಲಯ ಸುಪ್ರೀಂ ಕೋರ್ಟಿಗೂ ಮುಚ್ಚಳಿಕೆಯಲ್ಲಿ ಬರೆದುಕೊಟ್ಟಿದೆ. ದೇಶದ ಜನಕ್ಕೆ ಕೇರ್ ಫಂಡ್ ಬಗ್ಗೆ ತಿಳಿಯುವ ಅವಶ್ಯಕತೆ ಇಲ್ಲ ಎಂದಿದೆ !!

ರೈತರ ವಿಮಾ ಯೋಜನೆ, ಕೃಷಿ ಮಾರುಕಟ್ಟೆಗಳ ಹಾಗೂ ಬೆಲೆ ನೀತಿ ಕುರಿತ ಯೋಜನೆ, ಬ್ಯಾಂಕ್‌ಗಳ ವಿಲಿನೀಕರಣ, ಮೀಸಲಾತಿ, ಸಬಲೀಕರಣ, ಹತ್ತಾರು ಕಾರ್ಯಕ್ರಮಗಳಿಗೆ ಪ್ರಧಾನಿ ದೂರದರ್ಶನದ ಮೂಲಕ ಜನತೆಗೆ ಕರೆ ನೀಡಿದ್ದಾರೆ. ಹೀಗೆ ಆದಾಗಲೆಲ್ಲ ವಿರೋಧಗಳ ಮಧ್ಯೆಯೂ ಆಗಾಗ ಜನ ಸ್ಪಂದಿಸಿದ್ದು ಇದ್ದೇ ಇದೆ. ಎಲ್ಲಕ್ಕೂ ಪ್ರಮುಖವಾಗಿ ಪುಲ್ವಾಮಾ, ಪೆಹಲ್ಗಾಮ್ ಭಯೋತ್ಪಾದಕ ದಾಳಿಯಾದಾಗ `ಭಯೋತ್ಪಾದಕರನ್ನು ಹುಟ್ಟಡಗಿಸುತ್ತೇವೆ. ಜನತೆಗೆ ನ್ಯಾಯ ಕೊಡುವವರೆಗೆ ವಿಶ್ರಮಿಸಲ್ಲ’ ಎಂದು ಪ್ರಮಾಣ ಮಾಡಿದ್ದರು.. ಜನ ವಿಶ್ವಾಸವಿಟ್ಟರು. ಆಪರೇಶನ್ ಸಿಂದೂರ ಆರಂಭಿಸಿದಾಗ ಮೋದಿ ಧೈರ್ಯಕ್ಕೆ ಹೆಮ್ಮೆ ಪಟ್ಟರು… ಹಟಾತ್ ಆಪರೇಷನ್ ಸಿಂಧೂರ ಸ್ಥಗಿತವಾಯಿತು..! ಕಾರಣ ಕೇಳಿದ ಜನತೆ ಮುಂದೆ ಪ್ರಧಾನಿ ಬಂದಿಲ್ಲ..

ಈಗ ವಿದೇಶಿ ವಿನಿಮಯದ ಮಿತವ್ಯಯದ ಹಿನ್ನೆಲೆಯಲ್ಲಿ ಪ್ರಧಾನಿ ಮಾಡಿದ ಮನವಿಗೆ ಜನ ಹೇಗೆ ಸ್ಪಂದಿಸುತ್ತಾರೆ? ಮೊದಲಿನಷ್ಟೇ ವಿಶ್ವಾಸ, ಭರವಸೆ ಪಾಲನೆಯಾಗುತ್ತವೆಯೇ?
ಈ ಹಿಂದೆ ನೆಹರೂ, ಇಂದಿರಾ, ಶಾಸ್ತ್ರಿ, ಮನಮೋಹನ ಸಿಂಗ್ ಎಲ್ಲರೂ ಹಲವು ಸಂದರ್ಭಗಳಲ್ಲಿ ರಾಷ್ಟ್ರವಾಸಿಗಳಿಗೆ ವಿವಿಧ ಕರೆಗಳನ್ನು ನೀಡಿ ಮನವಿ ಮಾಡಿಕೊಂಡಿರಲಿಲ್ಲವೇ. ಜನ ಸ್ಪಂದಿಸಿದ್ದರೂ ಕೂಡ. ಯಾವುದೇ ಪಕ್ಷ ರಾಜಕಾರಣ ಯಾವತ್ತೂ ಭಾರತದಲ್ಲಿ ನುಸುಳಿಲ್ಲ.

ಭಾರತ ಚೀನಾ ಯುದ್ಧದ ಸಂದರ್ಭದಲ್ಲಿ ನೆಹರೂ ಅವರ ಮನವಿಗೆ ದೇಶದ ಮಹಿಳೆಯರು ತಮ್ಮ ಆಭರಣಗಳನ್ನು ದಾನ ಮಾಡಿದ್ದರು. ಶಾಸ್ತ್ರಿಜಿ ದೇಶಕ್ಕಾಗಿ ಸೋಮವಾರ ಒಂದು ದಿನ ಊಟ ಬಿಡಿ' ಎಂದು ಕರೆ ಕೊಟ್ಟರು.ಜೈ ಜವಾನ್- ಜೈ ಕಿಸಾನ್’ ಎಂಬ ಘೋಷವಾಕ್ಯಕ್ಕೆ ಭಾರತೀಯರು ಪುಟಿದೆದ್ದು ಸ್ಪಂದಿಸಿದರು. ಕಾರ್ಗಿಲ್ ಯುದ್ಧದ ಸಂದರ್ಭದಲ್ಲಿ ವಾಜಪೇಯಿ ಮಾತುಗಳಿಗೆ ಸ್ಪಂದಿಸಿ, ಹಣ-ಧನ-ಕನಕಗಳನ್ನು ತ್ಯಾಗ ಮಾಡಿದ್ದರು. ಈಗ ಮೋದಿ ವಿದೇಶಿ ವಿನಿಮಯ, ಬಂಗಾರದ ಉಳಿತಾಯದ ಕರೆ ನೀಡಿದ್ದಾರೆ. ಅವರದ್ದೇ ಪಕ್ಷದ ಬಿಜೆಪಿ ಶಾಸಕರು, ಸಚಿವರು, ನೇತಾರರು ಮೊದಲು ಇದರ ಅನುಷ್ಟಾನ ಮಾಡಿ ಮಾದರಿಯಾಗಬೇಕಲ್ಲವೇ?

ಹೈದರಾಬಾದ್‌ನಲ್ಲಿ ಮಿತವ್ಯಯದ ಘೋಷಣೆ ಮಾಡಿದ ಪ್ರಧಾನಿ ಆ ನಂತರ ನೂರಾರು ವಾಹನಗಳ ಕಾನ್‌ವಾಯ್ ಜೊತೆ ರೋಡ್ ಶೋ ನಡೆಸಿದರು. ಜನ ಪ್ರಶ್ನಿಸಿದ್ದು ಇದನ್ನೇ. ನೀವು ಮೊದಲು ಮಾಡಿ ತೋರಿಸಿ, ಪ್ರಧಾನಿ ಮನೆಯಿಂದ ಮೊದಲು ಮಿತವ್ಯಯ ಆರಂಭವಾಗಲೆಂದು… (ಈಗ ತಮ್ಮ ಭದ್ರತಾ ಸಿಬ್ಬಂದಿಯನ್ನು ಶೇ. 50 ಕಡಿತಗೊಳಿಸಿದ್ದಾರೆ..)

ಈಗ ಹೇಳುವ ಪ್ರಧಾನಿ ಎರಡು ತಿಂಗಳ ಹಿಂದೆಯೇ ಏಕೆ ಮಾತನಾಡಲಿಲ್ಲ ಎನ್ನುವ ಪ್ರಶ್ನೆಯನ್ನು ದೇಶವಾಸಿಗಳು ಬದಿಗಿಟ್ಟರೂ ಕೂಡ, ಶ್ರೀಲಂಕಾ, ದಕ್ಷಿಣ ಕೋರಿಯಾ, ಮ್ಯಾನಮಾರ್, ಈಜಿಪ್ತ್, ಇಂಡೋನೇಷ್ಯಾ, ತಾಂಜೇನಿಯಾ ಎಲ್ಲೆಡೆ ತೈಲ ಮಿತವ್ಯಯ ಜಾರಿಗೆ ಬಂದಿತ್ತು. ವಿದೇಶಿ ಪ್ರವಾಸವನ್ನು ಆ ದೇಶಗಳು ನಿಷೇಧಿಸಿದವು.

ಈಗ ಮೋದಿ ಕರೆಯ ಮರುದಿನ ರಾಜ್ಯದ ಷೇರು ಮಾರುಕಟ್ಟೆಯಲ್ಲಿ `ರಕ್ತಪಾತ’ವಾಗಿದೆ. ಎರಡೇ ದಿನದಲ್ಲಿ 16.27 ಲಕ್ಷ ಕೋಟಿ ರೂಪಾಯಿ ಹೂಡಿಕೆದಾರರಿಗೆ ನಷ್ಟವಾಗಿದೆ. ಬೆಳ್ಳಿಯ ಬೆಲೆಯಲ್ಲಿ 12 ಸಾವಿರ ರೂಪಾಯಿ ಏರಿಕೆಯಾಗಿದೆ. ಚಿನ್ನದ ದರವೂ ಹೆಚ್ಚಿದೆ. ಎಲ್ಲಕ್ಕೂ ವಿಶೇಷವೆಂದರೆ ರೂಪಾಯಿ ಮೌಲ್ಯ ಡಾಲರ್ ಎದಿರು 95.63 ರೂಗೆ ಕುಸಿದಿದೆ. 2014ರ ಪೂರ್ವ ಮತ್ತು ಆ ನಂತರವೂ ಮೋದಿ ಭರವಸೆಗಳು, ರೂಪಾಯಿ ಮೌಲ್ಯದ ಬಗ್ಗೆ, ಹಿಂದಿನ ಸರ್ಕಾರಗಳ ವಿದೇಶಿ ನೀತಿ ಧೋರಣೆಗಳ ಬಗ್ಗೆ ಅವರು ಆಡಿರುವ ಟೀಕೆಗಳು ಈಗ ವೈರಲ್ ಆಗುತ್ತಿವೆ. ಚಿನ್ನ ಖರೀದಿಸದಿರಿ ಎಂದಾಗ ಚಿನ್ನೋದ್ಯಮಿಗಳು, ವರ್ಕ್ ಫ್ರಂ ಹೋಮ್ ಮಾಡಿ ಎಂದಾಗ ಸಾರಿಗೆ, ಟ್ಯಾಕ್ಸಿ- ಕ್ಯಾಬ್ ನಿರ್ವಾಹಕರು ಹಾಗೂ ನೌಕರಿ ಎಂಬ ಬೃಹತ್ ವ್ಯವಸ್ಥೆಯನ್ನು ಅವಲಂಬಿಸಿ ನಡೆಯುವ ಪೂರಕ

ವಹಿವಾಟುಗಳು ಮತ್ತು ಉದ್ಯೋಗ ವಲಯದ ಲಕ್ಷಾಂತರ ಜನರ ಹೊಟ್ಟೆ ಪಾಡಿನ ಗತಿ ಏನು? ಎನ್ನುವ ಪ್ರಶ್ನೆ ಉದ್ಭವವಾಗುತ್ತದೆ. ರಸಾಯನಿಕ ಗೊಬ್ಬರದ ಬಳಕೆ ಕಡಿಮೆ ಮಾಡಿ ಎನ್ನುವಾಗ ಮೊದಲೇ ಪ್ರಕೃತಿ ವಿಕೋಪದಿಂದ ಬಸವಳಿದಿರುವ ರೈತ ಮುಂದಿನ ಬೆಳೆಯ ಸಂರಕ್ಷಣೆ ಬಗ್ಗೆ ಚಿಂತೆ ಹೇಗೆ? ಎಂಬ ಪ್ರಶ್ನೆ ಬರುತ್ತದೆ. ಇನ್ನು, ವಿದೇಶಗಳಲ್ಲಿ ಅದ್ದೂರಿ ಮದುವೆ ನಡೆಸುವವರು ಜನಸಾಮಾನ್ಯರಲ್ಲ. ಇಂಥವರು ಸಿನಿ ಉದ್ಯಮಿಗಳು, ಕೋಟ್ಯಂತರ ರೂಪಾಯಿ ಕಪ್ಪು ಹಣ ಸಂಗ್ರಹಿಸಿದವರು, ಉದ್ಯಮಿಗಳು ಮತ್ತು ರಾಜಕಾರಣಿಗಳ ಮಕ್ಕಳು, ನಿಯತ್ತಾಗಿ ತೆರಿಗೆ ಪಾವತಿಸದೇ ವಂಚಿಸಿದವರ ಮಕ್ಕಳೇ !

ಒಟ್ಟಾರೆ, ಪ್ರಧಾನಿ ಮಾಡಿರುವ ಮನವಿಯನ್ನು `ಮೋದಿ ಗ್ಯಾರಂಟಿ, ಮೋದಿ ಭರವಸೆ’ ಎಂದು ನಂಬಿ ಪಾಲಿಸುತ್ತಾರೆಯೇ? ಪ್ರಸಕ್ತ ಪ್ರಧಾನಿಗೆ ಈಗ ಲಿಟ್ಮಸ್ ಟೆಸ್ಟ್’ ಎದುರಾಗಿದೆ!!