Home Advertisement
Home ನಮ್ಮ ಜಿಲ್ಲೆ ಧಾರವಾಡ ವಿದ್ಯಾರ್ಥಿ ಸಾವು ಪ್ರಚಾರಕ್ಕೆ ಸೀಮಿತವಾಯ್ತೆ….?

ವಿದ್ಯಾರ್ಥಿ ಸಾವು ಪ್ರಚಾರಕ್ಕೆ ಸೀಮಿತವಾಯ್ತೆ….?

0
8

ರವೀಶ ಪವಾರ
ಧಾರವಾಡ: ಪೊಲೀಸರ ಕಿರುಕುಳದಿಂದ ಇತ್ತೀಚೆಗೆ ವಿದ್ಯಾರ್ಥಿ ನೇಣಿಗೆ ಶರಣಾದ ಘಟನೆ ಇಡೀ ಧಾರವಾಡ ಜನತೆ ಮರೆಯುವಂತಿಲ್ಲ. ಆದರೆ, ವಿದ್ಯಾರ್ಥಿ ಸಾವಿಗೆ ಭುಗಿಲೆದ್ದ ಜನಾಕ್ರೋಶ, ರಾಜಕಾರಣಿಗಳ ಕೆಸೆರೆರೆಚಾಟ ಕೇವಲ ರಾಜಕೀಯ ಕಿತ್ತಾಟ ಹಾಗೂ ಪ್ರಚಾರಕ್ಕೆ ಮಾತ್ರವೇ ಸೀಮಿತವಾಯ್ತೆ ಎಂಬ ಪ್ರಶ್ನೆ ಪ್ರಜ್ಞಾವಂತರಲ್ಲಿ ಕಾಡತೊಡಗಿದೆ.

ಹೌದು… ಕಳೆದ ಏ. 27ರ ತಡರಾತ್ರಿ ಇಲ್ಲಿಯ ಗಿರಿನಗರದ ಮನೆಯಲ್ಲಿಯೇ ಬಾಗಲಕೋಟೆ ಜಿಲ್ಲೆ ಬಾದಾಮಿ ತಾಲೂಕಿನ ಬೇಲೂರ ಗ್ರಾಮದ ವಿದ್ಯಾರ್ಥಿ ಆದಿತ್ಯ ಮ್ಯಾಗೇರಿ ಆತ್ಮಹತ್ಯೆಗೆ ಶರಣಾಗಿದ್ದನು. ಗಾಂಜಾ ಸೇವನೆ ಪ್ರಕರಣದಲ್ಲಿ ಅನವಶ್ಯಕವಾಗಿ ಆದಿತ್ಯನನ್ನು ಬಂಧಿಸಿ ತಪಾಸಣೆಗೆ ಒಳಪಡಿಸಲಾಗಿತ್ತು. ಅಲ್ಲದೇ ನೆಗೆಟಿವ್ ರಿಪೋರ್ಟ್ ಬಂದರೂ ಪೊಲೀಸರು ಆತನನ್ನು ಹೆದರಿಸಿ ಹಣದ ಬೇಡಿಕೆ ಇಟ್ಟಿದ್ದರು ಎಂಬ ಆರೋಪ ಕೇಳಿಬಂದಿದ್ದವು.

ಆದಿತ್ಯ ಮೃತಪಟ್ಟ ಮರುದಿನವೇ ಬೃಹತ್ ಹೋರಾಟ ಸೇರಿದಂತೆ ಜನಾಕ್ರೋಶ ವ್ಯಕ್ತವಾದ ಹಿನ್ನೆಲೆಯಲ್ಲಿ ವಿದ್ಯಾಗಿರಿ ಪೊಲೀಸ್ ಠಾಣೆಯ ಮೂವರು ಪೇದೆಗಳು ಸೇರಿದಂತೆ ಇನ್ಸಪೆಕ್ಟರ್ ಅವರನ್ನೂ ಸಹ ಅಮಾನತು ಮಾಡಲಾಗಿತ್ತು. ಆದರೆ, ಇಂದಿನವರೆಗೆ ಸಾವಿಗೆ ಹೊಣೆ ಯಾರು ಎನ್ನುವುದೇ ತಿಳಿಯದಂತಾಗಿದೆ.

ರಾಜಕೀಯ ಬಲಾಬಲ ಪ್ರದರ್ಶನ…: ಪೊಲೀಸರು ಕಿರುಕುಳ ನೀಡುತ್ತಿದ್ದಾರೆ ಎನ್ನುವುದೇ ತಡ ಎಚ್ಚೆತ್ತುಕೊಂಡಿದ್ದ ಜಿಲ್ಲೆಯ ನಾಯಕರು ಸಾಕಷ್ಟು ಹೇಳಿಕೆಗಳನ್ನು ನೀಡಿದರು. ಇದಲ್ಲದೇ ಶಾಸಕ ಅರವಿಂದ ಬೆಲ್ಲದ ಅವರು ಪೊಲೀಸ್ ಆಯುಕ್ತರ ಕಚೇರಿಯೇ ಅಕ್ರಮ ನಡೆಯುವ ಹಾಗೂ ಮಧ್ಯವರ್ತಿಗಳ ಕೇಂದ್ರವಾಗಿದೆ. ಇದಕ್ಕೆ ನೇರವಾಗಿ ಆಯುಕ್ತರೇ ಜವಾಬ್ದಾರರಾಗಿದ್ದು, ಮೊದಲು ಅವರ ಮೇಲೆ ಕ್ರಮವಾಗಬೇಕು. ಇದಕ್ಕೆ ಮೂರು ದಿನಗಳ ಗಡುವು ನೀಡಲಾಗುವುದು. ಸರಕಾರ ಒಂದು ವೇಳೆ ಅಕ್ರಮ ಚಟುವಟಿಕೆಗಳ ವಿರುದ್ಧ ಕ್ರಮ ಕೈಗೊಳ್ಳದಿದ್ದರೆ ಬೀದಿಗಿಳಿದು ಹೋರಾಟ ಮಾಡುವ ಎಚ್ಚರಿಕೆ ನೀಡಿದ್ದರು. ಆದರೆ, ಗಡುವು ಮೀರಿದರೂ ಈ ವರೆಗೂ ಯಾವುದೇ ಕ್ರಮವಾಗಿಲ್ಲ, ಇತ್ತ ಶಾಸಕರೂ ಮೌನ ವಹಿಸಿರುವುದು ಯಾಕೆ ಎಂಬ ಪ್ರಶ್ನೆ ಜನರನ್ನು ಕಾಡುತ್ತಿದೆ.

ಇನ್ನೊಂದೆಡೆ ಶಾಸಕ ಪ್ರಸಾದ ಅಬ್ಬಯ್ಯ ಅವರು ಸಂತ್ರಸ್ತ ಕುಟುಂಬಸ್ಥರಿಗೆ ಭೇಟಿ ಮಾಡಿ ಸಾಂತ್ವನ ಹೇಳಿ ಪರಿಹಾರವನ್ನೂ ನೀಡಿದ್ದಲ್ಲದೇ ಇದರಲ್ಲಿ ಯಾರ‍್ಯಾರು ಶಾಮೀಲಾಗಿದ್ದಾರೆ ಅವರ ವಿರುದ್ಧ ಕ್ರಮ ಕೈಗೊಳ್ಳುವಂತೆ ಗೃಹ ಸಚಿವರಿಗೆ ಮನವಿ ಮಾಡಲಾಗುವುದು, ಸರಕಾರ ನಿಮ್ಮ ಪರವಾಗಿದೆ ಎಂದೆಲ್ಲ ಹೇಳಿದ್ದರು. ಆದರೆ, ಇತ್ತ ಸರಕಾರದಿಂದಲೂ ಈ ವರೆಗೆ ಯಾವುದೇ ಕಠಿಣ ಕ್ರಮ ಆಗದಿರುವುದು ಶಾಸಕರ ಹೇಳಿಕೆ ಬರೀ ಸಂತೈಸುವುದಕ್ಕೆ ಮಾತ್ರ ಸೀಮಿತವಾಯ್ತೆ ಎಂದು ಅನುಮಾನಕ್ಕೀಡು ಮಾಡಿದೆ.

ಅಮಾನತಿಗೆ ಮಾತ್ರ ಸೀಮಿತವೇ…?: ಹು-ಧಾ ಅವಳಿನಗರದಲ್ಲಿ ಅಕ್ರಮ ಚಟುವಟಿಕೆ ದಿನದಿಂದ ದಿನಕ್ಕೆ ಹೆಚ್ಚುತ್ತಿದೆ. ಗಾಂಜಾ ಸೇರಿದಂತೆ ಇನ್ನಿತರೆ ಮಾದಕ ವಸ್ತುಗಳ ಹಾವಳಿ ಹೆಚ್ಚಾಗುತ್ತಲೇ ಸಾಗುತ್ತಿದೆ. ಆದರೆ, ಈ ರೀತಿಯ ಘಟನೆಗಳು ಆದಾಗ ಮಾತ್ರವೇ ಎಚ್ಚೆತ್ತುಕೊಳ್ಳುವ ಜನಪ್ರತಿನಿಧಿಗಳು ಮತ್ತು ಮೇಲಧಿಕಾರಿಗಳು ಭುಗಿಲೆದ್ದ ಆಕ್ರೋಶ ತಣ್ಣಗಾಗುತ್ತಿದ್ದಂತೆ ಅವರೂ ತಣ್ಣಗೆ ಕೂಡುತ್ತಿರುವುದು ನೋವಿನ ಸಂಗತಿ ಎಂದು ಸಮಾಜಮುಖಿ ಹಿತಚಿಂತಕರು ವಿಷಾದ ವ್ಯಕ್ತಪಡಿಸುತ್ತಿದ್ದಾರೆ.

ಪೊಲೀಸ್ ಆಯುಕ್ತರು ಅವಳಿನಗರವನ್ನು ಗಾಂಜಾ ಮುಕ್ತ ಮಾಡುವ ಶಪಥವನ್ನು ತೊಟ್ಟಿದ್ದರು. ಆದರೆ, ಅದು ಆಗಿದೆಯೇ…? ಅವಳಿನಗರದಲ್ಲಿ ಗಾಂಜಾ ಮಾರಾಟ ಸಂಪೂರ್ಣ ನಿಂತಿದೆಯೇ…? ಮಾರಾಟ ಮಾಡುವವರೆಲ್ಲರ ವಿರುದ್ಧ ಕಠಿಣ ಕ್ರಮ ಕೈಗೊಳ್ಳಲಾಗಿದೆಯೇ… ಎಂಬ ಪ್ರಶ್ನೆಗಳು ಜನರಲ್ಲಿ ಮೂಡುತ್ತಿವೆ. ಆದರೆ, ಇದೆಲ್ಲದಕ್ಕೂ ತಾರ್ಕಿಕ ಅಂತ್ಯ ಯಾವಾಗ ಎನ್ನುವುದು ಮಾತ್ರ ಸ್ಪಷ್ಟವಾಗಬೇಕಿದೆ.