ಧಾರವಾಡ: ಬಾಗಲಕೋಟೆ ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ನಂಜಯ್ಯನಮಠ ಹಾಗೂ ಶಾಸಕ ಆರ್.ಬಿ. ತಿಮ್ಮಾಪುರ ಅವರ ಮಧ್ಯೆ ನಡೆದಿದೆ ಎನ್ನಲಾದ ಆಡಿಯೋ ಸಂಭಾಷಣೆ ವೈರಲ್ ಆಗಿದೆ. ಆದರೆ, ಆ ಆಡಿಯೋ ನನ್ನದಲ್ಲ ಎಂದು ಶಾಸಕ ಆರ್.ಬಿ. ತಿಮ್ಮಾಪುರ ಸ್ಪಷ್ಟಪಡಿಸಿದರು.
ಧಾರವಾಡದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿ, ಆಡಿಯೋದಲ್ಲಿ ನನ್ನ ಹೆಸರು ಇರಬಹುದು. ಆದರೆ, ನಾನು ಆ ರೀತಿ ಮಾತನಾಡಿಲ್ಲ. ಹೈಕಮಾಂಡ್ಗಾಗಲಿ ಸಿಎಂಗಾಗಲಿ ಟಾರ್ಗೆಟ್ ಮಾಡಿ ಮಾತನಾಡಿಲ್ಲ. ಇದರಲ್ಲಿ ಯಾಕೆ ನನ್ನನ್ನು ಎಳೆದು ತರ್ತೀದ್ದಾರೆ ಎನ್ನುವುದು ತಿಳಿಯುತ್ತಿಲ್ಲ ಎಂದರು.
ವಿಜಯಾನಂದ ಕಾಶಪ್ಪನವರ ಬಗ್ಗೆ ಚರ್ಚೆ ನಡೆಯುತ್ತಿತ್ತು. ಜಿಲ್ಲಾ ಮಂತ್ರಿ ಬಗ್ಗೆ ಚರ್ಚೆ ಮಾಡುತ್ತಿದ್ದೆವು. ವಿಜಯಾನಂದ ಕಾಶಪ್ಪನವರಗೆ ಸಚಿವ ಸ್ಥಾನ ಕೊಟ್ಟಿದ್ದು ಖುಷಿ ಇದೆ. ನಾನು ಮೂರು ವರ್ಷ ಸಚಿವನಾಗಿ ಕೆಲಸ ಮಾಡಿದ್ದೇನೆ. ಆದರೆ, ಕಾಶಪ್ಪನವರ ಮೇಲೆ ಇರುವ ಕೇಸ್ ಬಗ್ಗೆ ನಾನು ಮಾತನಾಡಿಲ್ಲ. ಆಡಿಯೋದಲ್ಲಿ ನಾನು ಆ ರೀತಿ ಮಾತನಾಡಿಲ್ಲ. ಯಾರು ಆ ರೀತಿ ಮಾತನಾಡಿದ್ದಾರೋ ಅವರನ್ನೇ ಕೇಳಬೇಕು. ನಾನು ಯಾವುದೇ ಪಕ್ಷದ ನಾಯಕರ ಬಗ್ಗೆ ಮಾತನಾಡಿಲ್ಲ. ಜಿಲ್ಲಾಧ್ಯಕ್ಷರು ಮಾತನಾಡಿದ ಬಗ್ಗೆ ನನಗೆ ಗೊತ್ತಿಲ್ಲ. ಜಿಲ್ಲಾಧ್ಯಕ್ಷರನ್ನೇ ಕೇಳಬೇಕು. ನಾನು ಅದಕ್ಕೆ ಪ್ರತಿಕ್ರಿಯೆ ನೀಡುವುದಿಲ್ಲ. ನಾನು ತಪ್ಪು ಮಾಡಿದ್ದರೆ ನನ್ನನ್ನು ಪ್ರಶ್ನೆ ಮಾಡಬೇಕು ಎಂದರು.
ಸಚಿವ ಸ್ಥಾನಕ್ಕೆ ಶೇ. 80ರಷ್ಟು ಕಮೀಷನ್ ಆರೋಪ ವಿಚಾರವಾಗಿ ಮಾತನಾಡಿ, ನಮ್ಮ ಪಕ್ಷದಲ್ಲಿ ಇಂತದ್ದಕ್ಕೆ ಅವಕಾಶವಿಲ್ಲ ಎಂದರು. ಸಚಿವ ಸ್ಥಾನ ಸಿಗದಿದ್ದಕ್ಕೆ ಬೇಸರವಿದೆಯೇ ಎಂಬ ಪ್ರಶ್ನೆಗೆ ಪ್ರತಿಕ್ರಿಯಿಸಿ, ಸಹಜವಾಗಿ ಅಸಮಾಧಾನ ಇದೆ. ನಮ್ಮ ಸಮುದಾಯ ಕೇಳುತ್ತಿದೆ. ಸಮುದಾಯದ ಕೆಲಸ ಮಾಡೋರು ಯಾರು ಎಂದು ಕೇಳುತ್ತಿದ್ದಾರೆ. ನನ್ನನ್ನು ಸಚಿವ ಸ್ಥಾನದಿಂದ ಯಾಕೆ ತೆಗೆದರು ಎಂದು ನನಗೆ ಹೇಳಲಿ. ಬೇರೆಯವರ ಬಗ್ಗೆ ನಾನ್ಯಾಕೆ ಹೇಳಲಿ…? ಹೈಕಮಾಂಡ್ ತೀರ್ಮಾನಕ್ಕೆ ನಾನು ಬದ್ಧ ಎಂದರು.






















