ಹುಬ್ಬಳ್ಳಿ: ಮೈಸೂರು ವಿಭಾಗದ ಯಡಕುಮರಿ-ಶ್ರೀವಗಿಲು ನಡುವೆ ಶನಿವಾರ ರಾತ್ರಿ ಸಂಭವಿಸಿದ ಭೂಕುಸಿತದಿಂದಾಗಿ ಕಾರವಾರದಿಂದ ಬೆಂಗಳೂರಿಗೆ ಬರುವ ರೈಲಿನ ಮಾರ್ಗವನ್ನು ತಾತ್ಕಾಲಿಕವಾಗಿ ಬದಲಾಯಿಸಲಾಗಿದೆ.
ಆ.1 ರಂದು ರಾತ್ರಿ 8.45ರ ಸುಮಾರಿಗೆ ಯಡಕುಮರಿ-ಶ್ರೀವಗಿಲು ನಿಲ್ದಾಣಗಳ ನಡುವೆ ರೈಲು ಹಳಿಯ ಮೇಲೆ ಮಣ್ಣು ಕುಸಿದಿದೆ.
ಈ ಹಿನ್ನೆಲೆಯಲ್ಲಿ ಆ.1 ರಂದು ಕಾರವಾರದಿಂದ ಹೊರಟಿದ್ದ ಕಾರವಾರ-ಕೆಎಸ್ಆರ್ ಬೆಂಗಳೂರು ಎಕ್ಸ್ಪ್ರೆಸ್ (16596*) ರೈಲನ್ನು ಮಂಗಳೂರು ಜಂಕ್ಷನ್, ಶೋರನೂರು ಜಂಕ್ಷನ್, ಪಾಲಕ್ಕಾಡ್ ಜಂಕ್ಷನ್, ಈರೋಡ್ ಜಂಕ್ಷನ್ ಮತ್ತು ಜೋಲಾರ್ಪೇಟೈ ಜಂಕ್ಷನ್ ಮಾರ್ಗದ ಮೂಲಕ ಸಂಚರಿಸುವಂತೆ ಮಾಡಲಾಗಿದೆ.
ರೈಲು ಹಳಿಯ ಪುನಃಸ್ಥಾಪನೆ ಕಾರ್ಯ ಪ್ರಗತಿಯಲ್ಲಿದೆ. ಪ್ರಯಾಣಿಕರ ಸುರಕ್ಷತೆಯನ್ನು ಗಮನದಲ್ಲಿಟ್ಟುಕೊಂಡು ಈ ನಿರ್ಧಾರ ಕೈಗೊಳ್ಳಲಾಗಿದೆ. ಪರಿಸ್ಥಿತಿಯನ್ನು ಅಧಿಕಾರಿಗಳು ನಿರಂತರವಾಗಿ ಮೇಲ್ವಿಚಾರಣೆ ಮಾಡುತ್ತಿದ್ದಾರೆ ಎಂದು ನೈಋತ್ಯ ರೈಲ್ವೆ ವಲಯ ಮುಖ್ಯ ಸಾರ್ವಜನಿಕ ಸಂಪರ್ಕಾಧಿಕಾರ ಮಂಜುನಾಥ ಕನಮಡಿ ತಿಳಿಸಿದ್ದಾರೆ.
ರೈಲು ಸೇವೆಯಲ್ಲಿ ಇನ್ನಷ್ಟು ಬದಲಾವಣೆಗಳಾಗುವ ಸಾಧ್ಯತೆ ಇದ್ದು, ಪ್ರಯಾಣಿಕರು ರೈಲು ನಿಲ್ದಾಣದ ವಿಚಾರಣಾ ಕೇಂದ್ರ ಅಥವಾ 139ಕ್ಕೆ ಕರೆ ಮಾಡಿ ಮಾಹಿತಿ ಪಡೆಯಬಹುದು ಎಂದು ಪ್ರಕಟಣೆಯಲ್ಲಿ ತಿಳಿಸಲಾಗಿದೆ.





















