ಕಲಬುರಗಿ: ಕರ್ನಾಟಕ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ ನೇತೃತ್ವದ ಸಚಿವ ಸಂಪುಟದಲ್ಲಿ ಏನೇ ಬದಲಾವಣೆಗಳಿದ್ದರೂ ಎಐಸಿಸಿ ಅಧ್ಯಕ್ಷರ ಗಮನಕ್ಕೆ ತರಲೇಬೇಕು. ಆದರೆ ಸಚಿವ ಸಂಪುಟದ ಬದಲಾವಣೆ ಸುದ್ದಿ ಬಂದಿಲ್ಲ ಎಂದು ಎಐಸಿಸಿ ಅಧ್ಯಕ್ಷ ಹಾಗೂ ರಾಜ್ಯಸಭೆ ವಿರೋಧ ಪಕ್ಷದ ನಾಯಕ ಮಲ್ಲಿಕಾರ್ಜುನ ಖರ್ಗೆ ಹೇಳಿದರು.
ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ ದೆಹಲಿಗೆ ಭೇಟಿ ವಿಚಾರ ಬಗ್ಗೆ ಕಲಬುರಗಿ ವಿಮಾನ ನಿಲ್ದಾಣದಲ್ಲಿ ಗುರುವಾರ ಪ್ರತಿಕ್ರಿಯಿಸಿದ ಎಐಸಿಸಿ ಅಧ್ಯಕ್ಷ ಖರ್ಗೆ, ಸದ್ಯ ಸಿಎಂ ಡಿ.ಕೆ. ಶಿವಕುಮಾರ ದೆಹಲಿಗೆ ಹೋಗಿರುವ ಮಾಹಿತಿ ಇಲ್ಲ, ಸದ್ಯ ಈಗ ಕಲಬುರಗಿಯಲ್ಲಿದ್ದೇನೆ. ಅವರು ಯಾರ ಹತ್ತಿರವಾಗಲಿ, ಯಾರ ಹತ್ತಿರ ಹೋಗಿದ್ದರೂ ಸಹ ನನ್ನ ಬಳಿ ಬರಬೇಕು. ಹೀಗಾಗಿ ಇದುವರೆಗೆ ನನ್ನ ಹತ್ತಿರ ಬಂದಿಲ್ಲ. ಸಂಪುಟದಲ್ಲಿ ಕೆಲ ಸಚಿವರ ಬದಲಾವಣೆಗೆ ಅಂಕಿತ ಮುದ್ರೆ ಬೀಳಬೇಕಾಗುತ್ತದೆ ಎಂದರು.
ಜೀವಹಾನಿಗೊಂಡವರಿಗೆ ಪರಿಹಾರ ನೀಡಲಿ: ಕರ್ನಾಟಕ ಸೇರಿ ದೇಶದಲ್ಲಿ ಪ್ರಾಣ ಕಳೆದುಕೊಂಡವರ ಕುಟುಂಬಸ್ಥರಿಗೆ ಪರಿಹಾರ ಕೊಡಬೇಕು. ಈ ದಿಸೆಯಲ್ಲಿ ತಾವು ಪ್ರಧಾನಿ ನರೇಂದ್ರ ಮೋದಿ ಅವರಿಗೆ ಪತ್ರ ಬರೆಯುವುದಲ್ಲದೆ, ನೇಪಾಳ ದೇಶದ ಜತೆ ನಿಲ್ಲುವಂತೆ ಪತ್ರ ಬರೆಯುವುದಾಗಿ ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಹೇಳಿದರು. ನೇಪಾಳ ದೇಶದ ಪ್ರವಾಹ ಪರಿಸ್ಥಿತಿಯಲ್ಲಿ ಕರ್ನಾಟಕ ಮಾತ್ರವಲ್ಲ, ದೇಶದ ಅನೇಕ ಜನ ಸಿಲುಕಿ ಪ್ರಾಣ ಕಳೆದುಕೊಂಡಿದ್ದಾರೆ. ಇದಕ್ಕಾಗಿ ನಾನೂ ಶ್ರದ್ಧಾಂಜಲಿ ಸಲ್ಲಿಸುತ್ತೇನೆ ಎಂದರು.






















