ಚಿತ್ರದುರ್ಗ: ಕರ್ನಾಟಕ ಲೋಕಸೇವಾ ಆಯೋಗ (KPSC) ನೇಮಕಾತಿ ಹಗರಣಕ್ಕೆ ಸಂಬಂಧಿಸಿದಂತೆ ಜಾರಿ ನಿರ್ದೇಶನಾಲಯದ (ED) ಅಧಿಕಾರಿಗಳು ಚಿತ್ರದುರ್ಗ ಜಿಲ್ಲೆಯ ಹೊಳಲ್ಕೆರೆ ತಾಲೂಕಿನ ತಾಳಿಕಟ್ಟೆ ಗ್ರಾಮದಲ್ಲಿ ದಾಳಿ ನಡೆಸಿ ಪರಿಶೀಲನೆ ನಡೆಸಿದ್ದಾರೆ.
ಕೆಪಿಎಸ್ಸಿ ಹಗರಣ ಪ್ರಕರಣದಲ್ಲಿ ಎ13 ಆರೋಪಿಯಾಗಿರುವ ನವೀನ್ ಕುಮಾರ್, ತಂದೆ ನಾಗರಾಜಪ್ಪ ಅವರ ನಿವಾಸದ ಮೇಲೂ ಅಧಿಕಾರಿಗಳು ತಪಾಸಣೆ ನಡೆಸಿದ್ದಾರೆ. ಎರಡು ವಾಹನಗಳಲ್ಲಿ ಆಗಮಿಸಿದ ED ತಂಡದಲ್ಲಿ ಮೂವರು ಅಧಿಕಾರಿಗಳು ಹಾಗೂ ಇಬ್ಬರು CRPF ಸಿಬ್ಬಂದಿ ಇದ್ದರು.
ಪಶುವೈದ್ಯಾಧಿಕಾರಿ ಹುದ್ದೆ ಕೊಡಿಸುವುದಾಗಿ ಹೇಳಿ ₹70ರಿಂದ ₹80 ಲಕ್ಷ ಹಣ ಪಡೆದು ವಂಚನೆ ಮಾಡಲಾಗಿದೆ ಎಂಬ ಆರೋಪ ಪ್ರಕರಣಕ್ಕೆ ಸಂಬಂಧಿಸಿದೆ. ಈ ಕುರಿತು ಬೆಂಗಳೂರಿನ ವಿಧಾನಸೌಧ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಹಾಸನ ಮೂಲದ ಮಂಜುನಾಥ್ ಎಂಬವರು ದೂರು ನೀಡಿದ್ದರು.
ಈ ಪ್ರಕರಣದ ಭಾಗವಾಗಿ ಜುಲೈ 25, 2026ರಂದು ಒಟ್ಟು 29 ಮಂದಿ ವಿರುದ್ಧ ದೂರು ದಾಖಲಾಗಿತ್ತು ಎನ್ನಲಾಗಿದ್ದು, ತನಿಖೆಯ ಮುಂದುವರಿದ ಭಾಗವಾಗಿ ED ಅಧಿಕಾರಿಗಳು ನವೀನ್ ಕುಮಾರ್ ಅವರ ಮನೆಯಲ್ಲಿ ದಾಖಲೆಗಳು ಹಾಗೂ ಇತರ ಮಾಹಿತಿಗಳ ಪರಿಶೀಲನೆ ನಡೆಸಿದ್ದಾರೆ.
KPSC ನೇಮಕಾತಿ ಹಗರಣದ ಕುರಿತು ಈಗಾಗಲೇ ಚಿತ್ರದುರ್ಗದಲ್ಲೂ ತನಿಖೆಗೆ ಆಗ್ರಹಿಸಿ ಪ್ರತಿಭಟನೆಗಳು ನಡೆದಿವೆ.






















