ಬೆಂಗಳೂರು: ಬಿಜೆಪಿಯ ಪ್ರಾಥಮಿಕ ಸದಸ್ಯತ್ವಕ್ಕೆ ರಾಜೀನಾಮೆ ನೀಡಿ ಹೊರಬಂದಿರುವ ತಮಿಳುನಾಡು ಮುಖ್ಯಸ್ಥ ಅಣ್ಣಾಮಲೈ ತಮ್ಮ ಜನ್ಮದಿನದಂದು ಮಹತ್ವದ ಘೋಷಣೆ ಮಾಡಲಿದ್ದಾರೆ ಎಂದು ತಿಳಿದುಬಂದಿದೆ.
ಈಗಾಗಲೇ ಬಿಜೆಪಿಯ ವರಿಷ್ಠರ ಮನವೊಲಿಕೆ ವಿಫಲವಾಗಿದ್ದು, ಪಕ್ಷ ನೀಡಿದ್ದ ಎಲ್ಲ ಆಫರ್ಗಳನ್ನೂ ನಿರಾಕರಿಸಿ ಹೊರಬಂದಿರುವ ಅಣ್ಣಾಮಲೈ ಮುಂದಿನ ನಿರ್ಧಾರವನ್ನು ಮಾತ್ರ ಇದುವರೆಗೂ ಎಲ್ಲಿಯೂ ಅಧಿಕೃತವಾಗಿ ಹೇಳಿಲ್ಲ.
ಮಾಹಿತಿಯ ಪ್ರಕಾರ ಅಣ್ಣಾಮಲೈ ಬಲಪಂಥೀಯ ಮಾದರಿಯಲ್ಲೇ ನೂತನ ಪಕ್ಷ ಸ್ಥಾಪನೆಗೆ ಮುಂದಾಗಿದ್ದಾರೆ. ಇದಕ್ಕೆ ರಜನಿಕಾಂತ್ ಬೆಂಬಲವನ್ನು ಪಡೆಯಲಿದ್ದು, ಜೂನ್ 4ರಂದು ತಮ್ಮ 42ನೇ ಜನ್ಮದಿನದಂದು ಘೋಷಣೆ ಮಾಡುವ ಸಾಧ್ಯತೆ ಇದೆ.
ಐಪಿಎಸ್ ಅಧಿಕಾರಿಯಾಗಿ ಸಾಕಷ್ಟು ಹೆಸರು ಮಾಡಿದ್ದ ಅಣ್ಣಾಮಲೈ 2020 ರಲ್ಲಿ ರಾಜೀನಾಮೆ ನೀಡಿ ರಾಜಕೀಯ ಪ್ರವೇಶ ಮಾಡಿದ್ದರು. ಬಳಿಕ 2021ರಲ್ಲಿ ತಮಿಳುನಾಡು ಬಿಜೆಪಿ ಅಧ್ಯಕ್ಷರಾದರು. ಈ ವೇಳೆ ಬಿಜೆಪಿಯನ್ನು ಅಧಿಕಾರಕ್ಕೆ ತರಲು ವಿವಿಧ ಕಾರ್ಯಕ್ರಮಗಳನ್ನ ಯೋಜಿಸಿದರು.
ಮುಖ್ಯವಾಗಿ ಎನ್ ಮಣ್ಣ್ ಎನ್ ಮಕ್ಕಳ್ (ನನ್ನ ಮಣ್ಣು – ನನ್ನ ಜನ) ಪಾದಯಾತ್ರೆ ಮೂಲಕ ರಾಜ್ಯದಲ್ಲಿ ಬಿಜೆಪಿ ಬಗ್ಗೆ ಜನರು ಹೆಚ್ಚಿನ ಒಲವು ತೋರುವಂತೆ ಮಾಡಿದರಾದರೂ ಚುನಾವಣೆಯ ಫಲಿತಾಂಶದ ಮೇಲೆ ಪರಿಣಾಮ ಬೀರಲಿಲ್ಲ.
ಈ ಹಿಂದೆಯೂ ಬಿಜೆಪಿಗೆ ಸೇರುವ ಮೊದಲು ವೃತ್ತಿಗೆ ರಾಜೀನಾಮೆ ನೀಡಿ ನಟ ರಜನಿಕಾಂತ್ ಅವರನ್ನು ಭೇಟಿ ಮಾಡಿದ್ದ ಅಣ್ಣಾಮಲೈ ಇನ್ನು ಮುಂದೆ ಅವರ ಬೆಂಬಲದೊಂದಿಗೆ ಮುಂದಿನ ಹೆಜ್ಜೆ ಇಡಲಿದ್ದಾರೆ ಎನ್ನುವ ಮಾತುಗಳು ಸದ್ಯ ತಮಿಳುನಾಡು ರಾಜೀಕಿಯ ವಲಯದಲ್ಲಿ ಕೇಳಿಬರುತ್ತಿವೆ.




















