ಜರ್ಮನಿ, ಜಪಾನ್ ಸಾಲಿಗೆ ಭಾರತ; ಹೈಡ್ರೋಜನ್ ರೈಲು ತಂತ್ರಜ್ಞಾನಕ್ಕೆ ಚಾಲನೆ
ನವದೆಹಲಿ: ಹಸಿರು ಮತ್ತು ಸುಸ್ಥಿರ ಸಾರಿಗೆ ವ್ಯವಸ್ಥೆಯತ್ತ ಮಹತ್ವದ ಹೆಜ್ಜೆಯಾಗಿ ಭಾರತೀಯ ರೈಲ್ವೆಯು ದೇಶದ ಮೊದಲ ಹೈಡ್ರೋಜನ್ ಇಂಧನ ಕೋಶ ಆಧಾರಿತ ರೈಲು ಯೋಜನೆಗೆ ಅನುಮೋದನೆ ನೀಡಿದೆ. ಉತ್ತರ ರೈಲ್ವೆಯ ಜಿಂದ್-ಸೋನಿಪತ್ ವಿಭಾಗದಲ್ಲಿ 10 ಬೋಗಿಗಳ ಹೈಡ್ರೋಜನ್ ರೈಲು ಶೀಘ್ರದಲ್ಲೇ ಕಾರ್ಯಾಚರಣೆ ಆರಂಭಿಸಲಿದೆ.
ಈ ರೈಲು 1200 KW ಸಾಮರ್ಥ್ಯದ ಹೈಡ್ರೋಜನ್ ಫ್ಯೂಲ್ ಸೆಲ್ ಪ್ರೊಪಲ್ಷನ್ ವ್ಯವಸ್ಥೆಯಿಂದ ಕಾರ್ಯನಿರ್ವಹಿಸಲಿದ್ದು, ಗರಿಷ್ಠ 75 ಕಿಲೋಮೀಟರ್ ವೇಗದಲ್ಲಿ ಸಂಚರಿಸಲಿದೆ.
ಹೈಡ್ರೋಜನ್ ತಂತ್ರಜ್ಞಾನದ ವಿಶೇಷತೆ ಏನು? : ಹೈಡ್ರೋಜನ್ ಇಂಧನ ಕೋಶ ತಂತ್ರಜ್ಞಾನವು ರಾಸಾಯನಿಕ ಕ್ರಿಯೆಯ ಮೂಲಕ ಹೈಡ್ರೋಜನ್ನಿಂದ ವಿದ್ಯುತ್ ಉತ್ಪಾದಿಸುತ್ತದೆ. ಈ ಪ್ರಕ್ರಿಯೆಯಲ್ಲಿ ಹೊಗೆ ಅಥವಾ ಕಾರ್ಬನ್ ಅನಿಲ ಹೊರಬರುವುದಿಲ್ಲ; ಬದಲಾಗಿ ನೀರಿನ ಆವಿ ಮಾತ್ರ ಹೊರಸೂಸಲಾಗುತ್ತದೆ. ಹೀಗಾಗಿ ಇದು ಸಾಂಪ್ರದಾಯಿಕ ಡೀಸೆಲ್ ಮತ್ತು ಇತರೆ ಪಳೆಯುಳಿಕೆ ಇಂಧನ ಆಧಾರಿತ ರೈಲುಗಳಿಗೆ ಶುದ್ಧ ಹಾಗೂ ಪರಿಸರ ಸ್ನೇಹಿ ಪರ್ಯಾಯವಾಗಿ ಪರಿಗಣಿಸಲಾಗುತ್ತಿದೆ.
ಇದನ್ನೂ ಓದಿ: ಹೀಟ್ವೇವ್ ಸಂಕಷ್ಟ: ಜನರಿಗೆ ಪ್ರಧಾನಿ ಮೋದಿ ಮಹತ್ವದ ಸಲಹೆ
ಆಯ್ದ ರಾಷ್ಟ್ರಗಳ ಸಾಲಿಗೆ ಭಾರತ: ಈ ಯೋಜನೆಯೊಂದಿಗೆ ಭಾರತವು ಜರ್ಮನಿ, ಜಪಾನ್, ಚೀನಾ ಮತ್ತು ಯುನೈಟೆಡ್ ಸ್ಟೇಟ್ಸ್ ಸೇರಿದಂತೆ ಹೈಡ್ರೋಜನ್ ರೈಲು ತಂತ್ರಜ್ಞಾನವನ್ನು ಪರೀಕ್ಷಿಸುತ್ತಿರುವ ರಾಷ್ಟ್ರಗಳ ಪಟ್ಟಿಗೆ ಸೇರ್ಪಡೆಯಾಗಿದೆ. ಪ್ರಸ್ತುತ ಜಗತ್ತಿನಲ್ಲಿ ಕೆಲವೇ ರಾಷ್ಟ್ರಗಳು ಮಾತ್ರ ಈ ತಂತ್ರಜ್ಞಾನವನ್ನು ವಾಣಿಜ್ಯ ಮಟ್ಟದಲ್ಲಿ ಅಭಿವೃದ್ಧಿಪಡಿಸುತ್ತಿವೆ.
ಜಿಂದ್ನಲ್ಲಿ ಹೈಡ್ರೋಜನ್ ಫಿಲ್ಲಿಂಗ್ ಸ್ಟೇಷನ್ : ಈ ಯೋಜನೆಗಾಗಿ ಹರಿಯಾಣದ ಜಿಂದ್-ಸೋನಿಪತ್ ಮಾರ್ಗವನ್ನು ಪೈಲಟ್ ಕಾರಿಡಾರ್ ಆಗಿ ಗುರುತಿಸಲಾಗಿದೆ. ರೈಲು ಕಾರ್ಯಾಚರಣೆಗೆ ಅಗತ್ಯವಾದ ಹೈಡ್ರೋಜನ್ ಸಂಗ್ರಹಣೆ ಮತ್ತು ಇಂಧನ ತುಂಬುವ ಸೌಲಭ್ಯವನ್ನು ಜಿಂದ್ನಲ್ಲಿ ನಿರ್ಮಿಸಲಾಗಿದೆ. Petroleum and Explosives Safety Organisation ಸ್ಥಳದಲ್ಲಿ ಸಂಕುಚಿತ ಹೈಡ್ರೋಜನ್ ಅನಿಲ ಸಂಗ್ರಹಣೆ ಮತ್ತು ವಿತರಣೆಗೆ ಅಗತ್ಯ ಅನುಮತಿ ನೀಡಿದೆ.
ಇದನ್ನೂ ಓದಿ: ಕೋಚಿಂಗ್ ಸೆಂಟರ್ ಜಾಲ ಬಯಲು?: NEET ಪ್ರಕರಣದಲ್ಲಿ CBI ಭರ್ಜರಿ ಆ್ಯಕ್ಷನ್
ಸುರಕ್ಷತೆಗೆ ವಿಶೇಷ ಒತ್ತು : ಹೈಡ್ರೋಜನ್ ಬಳಕೆಯ ಹಿನ್ನೆಲೆಯಲ್ಲಿ ಸುರಕ್ಷತಾ ಕ್ರಮಗಳಿಗೆ ಹೆಚ್ಚಿನ ಆದ್ಯತೆ ನೀಡಲಾಗಿದೆ. ಹೈಡ್ರೋಜನ್ ಸೋರಿಕೆ ಪತ್ತೆಕಾರಕಗಳು, ಜ್ವಾಲೆ ಪತ್ತೆ ಸಾಧನಗಳು ಹಾಗೂ ವಿವಿಧ ಸುರಕ್ಷತಾ ಸಂವೇದಕಗಳನ್ನು ಅಳವಡಿಸಲಾಗಿದ್ದು, ಅವುಗಳ ನಿಯಮಿತ ಪರಿಶೀಲನೆ ಮತ್ತು ನಿರ್ವಹಣೆ ನಡೆಯಲಿದೆ. ಇಂಧನ ತುಂಬುವ ವ್ಯವಸ್ಥೆಗೆ ವಿಶೇಷ ಹೈಡ್ರೋಜನ್ ಕಂಪ್ರೆಷನ್ ಸಿಸ್ಟಮ್ ಅಳವಡಿಸಲಾಗಿದೆ. ತುರ್ತು ಪರಿಸ್ಥಿತಿಗೆ ಸ್ಟ್ಯಾಂಡ್ಬೈ ಕಂಪ್ರೆಸರ್ ವ್ಯವಸ್ಥೆಯನ್ನೂ ಸಿದ್ಧಪಡಿಸಲಾಗಿದೆ.
ಪರಿಸರ ಸ್ನೇಹಿ ಭವಿಷ್ಯದತ್ತ ರೈಲ್ವೆ: ಭಾರತೀಯ ರೈಲ್ವೆಯ ಈ ಯೋಜನೆ ನವೀನ ತಂತ್ರಜ್ಞಾನ, ಇಂಧನ ದಕ್ಷತೆ ಮತ್ತು ಪರಿಸರ ಸ್ನೇಹಿ ಸಾರಿಗೆ ವ್ಯವಸ್ಥೆಯತ್ತದ ಬದ್ಧತೆಯನ್ನು ತೋರಿಸುತ್ತದೆ. ಈ ಯೋಜನೆ ದೇಶದ ಶುದ್ಧ ಇಂಧನ ಬಳಕೆ, ಕಾರ್ಬನ್ ಹೊರಸೂಸುವಿಕೆ ಕಡಿತ ಹಾಗೂ ‘ನೆಟ್-ಜೀರೋ’ ಗುರಿ ಸಾಧನೆಗೆ ಸಹಕಾರಿಯಾಗಲಿದೆ ಎಂದು ರೈಲ್ವೆ ಇಲಾಖೆ ವಿಶ್ವಾಸ ವ್ಯಕ್ತಪಡಿಸಿದೆ.




















