ಮುಂಬೈ: ಬಾಲಿವುಡ್ ಹಿರಿಯ ನಟ ಅನುಪಮ್ ಖೇರ್ ಅವರು ತಮ್ಮ ಬಹುನಿರೀಕ್ಷಿತ ‘ಶ್ರೀ ರಾಮ ಭೂಮಿ’ ಚಿತ್ರದ ಹೊಸ ಪಾತ್ರವನ್ನು ಸಾಮಾಜಿಕ ಜಾಲತಾಣದ ಮೂಲಕ ಅಭಿಮಾನಿಗಳಿಗೆ ಪರಿಚಯಿಸಿದ್ದಾರೆ. ಈ ಚಿತ್ರದಲ್ಲಿ ಅವರು ಶ್ರೀ ರಾಮ ಜನ್ಮಭೂಮಿ ಚಳುವಳಿಯ ಪ್ರಮುಖ ನಾಯಕರಾದ ಅಶೋಕ್ ಸಿಂಘಾಲ್ ಅವರ ಪಾತ್ರದಲ್ಲಿ ಕಾಣಿಸಿಕೊಳ್ಳಲಿದ್ದಾರೆ.
ಸಾಮಾಜಿಕ ಜಾಲತಾಣದಲ್ಲಿ ಚಿತ್ರದ ಕೆಲವು ಫೋಟೋಗಳನ್ನು ಹಂಚಿಕೊಂಡಿರುವ ಅನುಪಮ್ ಖೇರ್, “ನಾನು ನಿರ್ವಹಿಸುತ್ತಿರುವ ಪಾತ್ರದ ಕೆಲವು ಚಿತ್ರಗಳು ಈಗಾಗಲೇ ಮಾಧ್ಯಮಗಳಲ್ಲಿ ಕಾಣಿಸಿಕೊಂಡಿವೆ. ಆದ್ದರಿಂದ ನನ್ನ ಪಾತ್ರವನ್ನು ನಿಮ್ಮೆಲ್ಲರೊಂದಿಗೆ ಹಂಚಿಕೊಳ್ಳಲು ಬಯಸಿದ್ದೇನೆ. ‘ಶ್ರೀ ರಾಮ ಭೂಮಿ’ ಚಿತ್ರದಲ್ಲಿ ನಾನು ಶ್ರೀ ಅಶೋಕ್ ಸಿಂಘಾಲ್ ಪಾತ್ರದಲ್ಲಿ ನಟಿಸುತ್ತಿದ್ದೇನೆ” ಎಂದು ತಿಳಿಸಿದ್ದಾರೆ.
ಇದನ್ನೂ ಓದಿ: ಶಿಕ್ಷಣ ಕ್ಷೇತ್ರ ನಿರ್ಲಕ್ಷ್ಯಕ್ಕೆ ಒಳಗಾಗಿದೆ: ರಾಜ್ಯ ಸರ್ಕಾರದ ವಿರುದ್ಧ ಕೇಂದ್ರ ಸಚಿವರ ಆಕ್ರೋಶ
ಅಶೋಕ್ ಸಿಂಘಾಲ್ ಅವರು ಶ್ರೀ ರಾಮ ಜನ್ಮಭೂಮಿ ಚಳುವಳಿಯ ಪ್ರಮುಖ ಮುಖಂಡರಲ್ಲಿ ಒಬ್ಬರಾಗಿದ್ದು, ತಮ್ಮ ಅಚಲ ಭಕ್ತಿ, ದೃಢನಿಶ್ಚಯ ಮತ್ತು ಸಮರ್ಪಣಾಭಾವದ ಮೂಲಕ ಚಳುವಳಿಗೆ ಹೊಸ ಶಕ್ತಿ ತುಂಬಿದ್ದರು ಎಂದು ಅನುಪಮ್ ಖೇರ್ ಬಣ್ಣಿಸಿದ್ದಾರೆ.
“ಅವರು ಕೇವಲ ನಾಯಕನಾಗಿರಲಿಲ್ಲ, ಭಗವಾನ್ ಶ್ರೀ ರಾಮನ ಸಮರ್ಪಿತ ಸೇವಕರಾಗಿದ್ದರು. ಅವರ ನಂಬಿಕೆ, ಸೂಕ್ಷ್ಮತೆ ಮತ್ತು ಅಚಲ ವಿಶ್ವಾಸ ಈ ಚಳುವಳಿಯ ಯಶಸ್ಸಿಗೆ ಕಾರಣವಾಗಿತ್ತು. ಅಂತಹ ಐತಿಹಾಸಿಕ ವ್ಯಕ್ತಿತ್ವವನ್ನು ತೆರೆಯ ಮೇಲೆ ಜೀವಂತಗೊಳಿಸುವುದು ನನ್ನ ಪಾಲಿಗೆ ದೊಡ್ಡ ಜವಾಬ್ದಾರಿ. ಈ ಪಾತ್ರಕ್ಕೆ ನ್ಯಾಯ ಒದಗಿಸಲು ಸಂಪೂರ್ಣ ಸಮರ್ಪಣೆಯಿಂದ ಕೆಲಸ ಮಾಡುತ್ತಿದ್ದೇನೆ” ಎಂದು ಅವರು ಹೇಳಿದ್ದಾರೆ.
ಇದನ್ನೂ ಓದಿ: ಉಡುಪಿಯಲ್ಲಿ ಖಾಸಗಿ ಶಾಲಾ ಬಸ್ ಪಲ್ಟಿ: ಏಳು ಮಂದಿಗೆ ಗಾಯ
ಇದೇ ವೇಳೆ, ಈ ಪಾತ್ರಕ್ಕಾಗಿ ಅಭಿಮಾನಿಗಳ ಆಶೀರ್ವಾದ ಮತ್ತು ಶುಭಾಶಯಗಳನ್ನು ಕೋರಿ “ಜೈ ಶ್ರೀ ರಾಮ್” ಎಂಬ ಸಂದೇಶವನ್ನೂ ಹಂಚಿಕೊಂಡಿದ್ದಾರೆ. ಅನುಪಮ್ ಖೇರ್ ಹಂಚಿಕೊಂಡಿರುವ ಹೊಸ ಲುಕ್ಗೆ ಸಾಮಾಜಿಕ ಜಾಲತಾಣಗಳಲ್ಲಿ ವ್ಯಾಪಕ ಮೆಚ್ಚುಗೆ ವ್ಯಕ್ತವಾಗಿದ್ದು, ಚಿತ್ರದ ಕುರಿತು ಸಿನಿಪ್ರಿಯರಲ್ಲಿ ಕುತೂಹಲ ಮತ್ತಷ್ಟು ಹೆಚ್ಚಾಗಿದೆ.
‘ಶ್ರೀ ರಾಮ ಭೂಮಿ’ ಚಿತ್ರವು ಶ್ರೀ ರಾಮ ಜನ್ಮಭೂಮಿ ಚಳುವಳಿಯ ಹಿನ್ನೆಲೆಯ ಕಥೆಯನ್ನು ಒಳಗೊಂಡಿರುವುದರಿಂದ ಈಗಾಗಲೇ ಸಾಕಷ್ಟು ನಿರೀಕ್ಷೆ ಮೂಡಿಸಿದೆ. ಚಿತ್ರದ ಬಿಡುಗಡೆ ದಿನಾಂಕ ಮತ್ತು ಇತರ ಕಲಾವಿದರ ಕುರಿತು ಚಿತ್ರತಂಡ ಇನ್ನಷ್ಟೇ ಹೆಚ್ಚಿನ ಮಾಹಿತಿಯನ್ನು ಪ್ರಕಟಿಸಬೇಕಿದೆ.






















