ಶಿವಮೊಗ್ಗ: ನನ್ನ ಹೃದಯ ಯಾವಾಗಲೂ ಬಿಜೆಪಿಯಲ್ಲೇ ಇದೆ, ಆದರೆ ದೇಹ ಮಾತ್ರ ಹೊರಗಿದೆ ಎಂದು ಹೇಳುವ ಮೂಲಕ ಮಾಜಿ ಉಪಮುಖ್ಯಮಂತ್ರಿ ಕೆ.ಎಸ್. ಈಶ್ವರಪ್ಪ ಅವರು ತಾವು ಮತ್ತೆ ಬಿಜೆಪಿಗೆ ಮರಳುವ ಕುರಿತಾದ ಚರ್ಚೆಯನ್ನು ಮುನ್ನೆಲೆಗೆ ತಂದಿದ್ದಾರೆ.
ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಇಂದಿಗೂ ಮನಸ್ಸು ಪೂರ್ತಿಯಾಗಿ ಬಿಜೆಪಿಯಲ್ಲೇ ಇದೆ. ಆದರೆ ಪ್ರಸ್ತುತ ಬಿಜೆಪಿಯಲ್ಲಿ ಅನೇಕ ಸಮಸ್ಯೆಗಳಿದ್ದು, ಇದನ್ನು ನಾನು ಬಹಳ ಬೇಸರದಿಂದ ಹೇಳುತ್ತಿದ್ದೇನೆ. ಈ ಹಿಂದೆ ಲೋಕಸಭಾ ಚುನಾವಣೆಯಲ್ಲಿ ನಾವು 25 ಸ್ಥಾನಗಳನ್ನು ಗೆದ್ದಿದ್ದೆವು, ಆದರೆ ನಂತರದ ದಿನಗಳಲ್ಲಿ ಆ ಸಂಖ್ಯೆ 17ಕ್ಕೆ ಇಳಿಯಿತು. ಇತ್ತೀಚೆಗೆ ನಡೆದ ಉಪ ಚುನಾವಣೆಯಲ್ಲೂ ಸೋಲಾಗಿದೆ. ರಾಜ್ಯದ ಜನರು ಪಕ್ಷದ ಸಿದ್ಧಾಂತವನ್ನು ನೋಡಿ ಮತ ಹಾಕುತ್ತಾರೆ ಎಂದರು.
ಸದ್ಯ ರಾಜ್ಯ ಬಿಜೆಪಿಯಲ್ಲಿ ಸಂಘಟನೆ ಸರಿಯಾಗಿಲ್ಲ. ಕುಟುಂಬ ರಾಜಕಾರಣವೂ ಇದೆ. ಈ ಹಿಂದೆ ಇದರ ಬಗ್ಗೆ ಪ್ರಸ್ತಾಪ ಮಾಡಿದ್ದೇನೆ. ಪಕ್ಷದಲ್ಲಿ ಎಲ್ಲವೂ ಸರಿಯಾದ ಬಳಿಕ, ಹಿರಿಯರೊಂದಿಗೆ ಚರ್ಚಿಸಿ ಮುಂದಿನ ನಿರ್ಧಾರ ತೆಗೆದುಕೊಳ್ಳುತ್ತೇನೆ ಎಂದರು.
ಪ್ರಿಯಾಂಕ್ ಖರ್ಗೆ ವಿರುದ್ಧ ಗರಂ: ಕಾನೂನು ಜ್ಞಾನ ಇಲ್ಲದ ಗೃಹಮಂತ್ರಿ ಕರ್ನಾಟಕದಲ್ಲಿ ಇರುವುದು ನಮ್ಮ ದುರಾದೃಷ್ಟ. ಪ್ರಚಾರಕ್ಕೋಸ್ಕರ ಆರ್ಎಸ್ಎಸ್ ಬಗ್ಗೆ ಮಾತನಾಡುತ್ತಿದ್ದಾರೆ. ತಾಕತ್ತು ಇದ್ದರೆ ಕಾನೂನು ಪ್ರಕಾರ ಕ್ರಮ ಕೈಗೊಳ್ಳಲಿ ಎಂದು ಸವಾಲ್ ಹಾಕಿದರು. ಆರ್ಎಸ್ಎಸ್ ಬಗ್ಗೆ ಮಾತನಾಡಿದವರು ನೆಲಕಚ್ಚಿ ಹೋಗಿದ್ದಾರೆ. ಪ್ರಿಯಾಂಕ್ ಖರ್ಗೆ ಕೂಡ ಅದೇ ಹಾದಿ ಹಿಡಿಯುತ್ತಾರೆ ಎಂದು ಹೇಳಿದರು.






















