ಹಾವೇರಿ (ರಾಣೇಬೆನ್ನೂರು): ನಗರದಲ್ಲಿ ಶನಿವಾರ ಸಂಜೆ ಸುರಿದ ಭಾರೀ ಮಳೆಯಿಂದ ಜನಜೀವನ ಸಂಪೂರ್ಣ ಅಸ್ತವ್ಯಸ್ತಗೊಂಡ ಘಟನೆ ನಡೆದಿದೆ.
ಸುಮಾರು ಸಂಜೆ 5 ಗಂಟೆ ಸುಮಾರಿಗೆ ಗುಡುಗು ಸಹಿತವಾಗಿ ಸುರಿದ ಮಳೆಯಿಂದ ನಗರದ ಪ್ರಮುಖ ಪ್ರದೇಶಗಳಾದ ಎಮ್.ಜಿ. ರಸ್ತೆ, ದರ್ಗಾ ಸರ್ಕಲ್, ಹಲಗೇರಿ ರಸ್ತೆ ಹಾಗೂ ಹಳೇ ಪಿ.ಬಿ. ರಸ್ತೆಯಲ್ಲಿ ಕಾಲುವೆಗಳು ತುಂಬಿ ಹರಿದ ಪರಿಣಾಮ ಮಳೆ ನೀರು ರಸ್ತೆಗಳಲ್ಲಿ ಸಾಗರದಂತೆ ಹರಿಯಿತು. ವಾಹನ ಸಂಚಾರಕ್ಕೂ ಅಡಚಣೆ ಉಂಟಾಗಿ ಜನರು ತೀವ್ರ ಸಂಕಷ್ಟ ಅನುಭವಿಸಿದರು.
ವಿಶೇಷವಾಗಿ ನೆಹರು ಮಾರುಕಟ್ಟೆ ವ್ಯಾಪ್ತಿಯ ದುರ್ಗಾ ಸರ್ಕಲ್ ಪ್ರದೇಶದಲ್ಲಿರುವ ಫುಟ್ಪಾತ್ ಅಂಗಡಿಗಳಿಗೆ ಮಳೆನೀರು ನುಗ್ಗಿ, ವ್ಯಾಪಾರಸ್ಥರ ಸಾಮಾನುಗಳು ನೀರಿನಲ್ಲಿ ತೇಲಿ ಹೋದವು. ಇದರಿಂದ ವ್ಯಾಪಾರಿಗಳು ತಮ್ಮ ವಸ್ತುಗಳನ್ನು ರಕ್ಷಿಸಲು ಹರಸಾಹಸ ಪಡಬೇಕಾದ ಪರಿಸ್ಥಿತಿ ನಿರ್ಮಾಣವಾಯಿತು.
ಹಠಾತ್ ಸುರಿದ ಭಾರೀ ಮಳೆಯ ಪರಿಣಾಮ ನಗರದಲ್ಲಿ ಕೆಲಕಾಲ ಗೊಂದಲದ ವಾತಾವರಣ ಉಂಟಾಗಿದ್ದು, ನೀರು ಸರಾಗವಾಗಿ ಹರಿಯುವಂತೆ ಕಾಲುವೆಗಳ ನಿರ್ವಹಣೆಗೆ ಸಂಬಂಧಪಟ್ಟ ನಗರಸಭೆ ಅಧಿಕಾರಿಗಳು ಕ್ರಮ ಕೈಗೊಳ್ಳಬೇಕೆಂದು ಸಾರ್ವಜನಿಕರು ಆಗ್ರಹಿಸಿದ್ದಾರೆ.





















