ಹಾವೇರಿ: ಮುಂಗಾರು ಮಳೆ ದುರ್ಬಲವಾಗಿರುವ ಹಿನ್ನೆಲೆಯಲ್ಲಿ ಜಿಲ್ಲೆಯಲ್ಲಿ ಸೋಮವಾರದಿಂದ ಆರಂಭವಾಗಿರುವ ಮೋಡ ಬಿತ್ತನೆ ಕಾರ್ಯ ಮಂಗಳವಾರವೂ ಯಶಸ್ವಿಯಾಗಿ ನಡೆಯಿತು.
ಶಾಸಕ ಪ್ರಕಾಶ ಕೋಳಿವಾಡ ಅವರ ರಾಣೆಬೆನ್ನೂರಿನ ಪಿಕೆಕೆ ಸಂಸ್ಥೆ ವತಿಯಿಂದ ಜಿಲ್ಲೆಯ ಶಾಸಕರೇ ವಂತಿಕೆ ಹಾಕಿ ಮೋಡ ಬಿತ್ತನೆ ಕೈಗೊಂಡಿದ್ದಾರೆ.
ನಾಲ್ಕು ತಾಲೂಕುಗಳಲ್ಲಿ ಮೋಡ ಬಿತ್ತನೆ: ಕೇಂದ್ರ ಸರ್ಕಾರದ ಡಿಜಿಸಿಎ ಹಾಗೂ ಹಾವೇರಿ ಜಿಲ್ಲಾಡಳಿತದ ಅನುಮತಿಯೊಂದಿಗೆ ಮಂಗಳವಾರ ಸವಣೂರು, ಹಾವೇರಿ, ಬ್ಯಾಡಗಿ ಹಾಗೂ ರಾಣೆಬೆನ್ನೂರ ತಾಲೂಕಿನಲ್ಲಿ ತಲಾ ಎರಡು ಬಾರಿ ಮೋಡ ಬಿತ್ತನೆ (ಕ್ಲೌಡ್ ಸೀಡಿಂಗ್) ಮಾಡಲಾಯಿತು.
ಮಧ್ಯಾಹ್ನ 2.40ಕ್ಕೆ ಹುಬ್ಬಳ್ಳಿ ವಿಮಾನ ನಿಲ್ದಾಣದಿಂದ ಇಬ್ಬರು ಪೈಲಟ್ಗಳನ್ನು ಹೊಂದಿರುವ ವಿಮಾನ ಅಗತ್ಯ ಪರಿಕರಗಳೊಂದಿಗೆ ಹಾವೇರಿ ಜಿಲ್ಲೆಯತ್ತ ಪ್ರಯಾಣ ಬೆಳೆಸಿ ಸುಮಾರು 2 ಗಂಟೆ 20ನಿಮಿಷ ಮೋಡ ಬಿತ್ತನೆ ನಡೆಸಿತು.
ಶಿಗ್ಗಾವಿ, ಹಾನಗಲ್ಲ, ಹಿರೇಕೆರೂರ, ರಟ್ಟೀಹಳ್ಳಿ ತಾಲೂಕುಗಳಲ್ಲಿ ಅಗತ್ಯ ಪ್ರಮಾಣದ ಮಳೆ ಮೋಡಗಳು ಕಂಡುಬರದ ಕಾರಣ ಮೋಡ ಬಿತ್ತನೆ ನಡೆಸಲು ಸಾಧ್ಯವಾಗಿಲ್ಲ. ಮುಂದಿನ ದಿನದಲ್ಲಿ ಅನುಕೂಲಕರ ಹವಾಮಾನ ಆಧರಿಸಿ ಕಾರ್ಯಾಚರಣೆ ನಡೆಸಲಾಗುತ್ತದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಹವಾಮಾನ ಇಲಾಖೆಯ ಮಾಹಿತಿ ಹಾಗೂ ರಾಡಾರ್ ಮೇಲ್ವಿಚಾರಣೆಯ ಆಧಾರದ ಮೇಲೆ ಪ್ರತಿದಿನ ಮೋಡಗಳ ಚಲನವಲನವನ್ನು ಪರಿಶೀಲಿಸಲಾಗುತ್ತಿದೆ. ಸೂಕ್ತ ಮೋಡಗಳು ಕಂಡುಬಂದರೆ ಬುಧವಾರವೂ ಮೋಡ ಬಿತ್ತನೆ ಕಾರ್ಯಾಚರಣೆ ಕೈಗೊಳ್ಳಲಾಗುವುದು ಎಂದು ಅಧಿಕಾರಿಗಳು ತಿಳಿಸಿದ್ದಾರೆ.






















