ಕಾಕ್ರೋಚ್ ಜನತಾ ಪಕ್ಷ (CJP)ದ ಎಕ್ಸ್ ಖಾತೆಯನ್ನು ಮರುಸ್ಥಾಪಿಸಲು ದೆಹಲಿ ಹೈಕೋರ್ಟ್ ಆದೇಶಿಸಿದೆ. NEET ಮರುಪರೀಕ್ಷೆ ಹಿನ್ನೆಲೆ ಖಾತೆ ನಿರ್ಬಂಧಿಸಲಾಗಿತ್ತು ಎಂದು ಕೇಂದ್ರ ತಿಳಿಸಿದರೆ, ಪರೀಕ್ಷೆ ಮುಗಿದಿರುವುದರಿಂದ ನಿರ್ಬಂಧ ರದ್ದುಗೊಳಿಸಲಾಗಿದೆ ಎಂದು ನ್ಯಾಯಾಲಯ ಹೇಳಿದೆ.
ನವದೆಹಲಿ: ವ್ಯಂಗ್ಯಾತ್ಮಕ ಡಿಜಿಟಲ್ ವೇದಿಕೆಯಾಗಿ ಗುರುತಿಸಿಕೊಂಡಿರುವ ಕಾಕ್ರೋಚ್ ಜನತಾ ಪಕ್ಷ (CJP)ದ ಎಕ್ಸ್ (X) ಖಾತೆಯನ್ನು ಭಾರತದಲ್ಲಿ ತಡೆಹಿಡಿದಿದ್ದ ಕೇಂದ್ರ ಸರ್ಕಾರದ ಆದೇಶವನ್ನು ದೆಹಲಿ ಹೈಕೋರ್ಟ್ ರದ್ದುಗೊಳಿಸಿದ್ದು, ಖಾತೆಯನ್ನು ಮರುಸ್ಥಾಪಿಸಲು ಆದೇಶ ನೀಡಿದೆ.
ನ್ಯಾಯಮೂರ್ತಿ ಸ್ವರ್ಣ ಕಾಂತ ಶರ್ಮಾ ಅವರು ಈ ಮಹತ್ವದ ಆದೇಶ ಹೊರಡಿಸಿದ್ದು, ಸಿಜೆಪಿ ಸಂಸ್ಥಾಪಕ ಅಭಿಜೀತ್ ದೀಪ್ಕೆ ಸಲ್ಲಿಸಿದ್ದ ಅರ್ಜಿಯನ್ನು ಮಾನ್ಯಗೊಳಿಸಿದ್ದಾರೆ. ಇದರೊಂದಿಗೆ ಮೇ ತಿಂಗಳಿನಿಂದ ಭಾರತದಲ್ಲಿ ನಿರ್ಬಂಧಿಸಲಾಗಿದ್ದ ಎಕ್ಸ್ ಖಾತೆಯನ್ನು ಮರುಸಕ್ರಿಯಗೊಳಿಸುವ ದಾರಿ ಸುಗಮವಾಗಿದೆ.
ಇದನ್ನೂ ಓದಿ: ಪದ್ಮಶ್ರೀ ಪುರಸ್ಕೃತ, ‘ಬ್ರಿಡ್ಜ್ ಮ್ಯಾನ್’ ಖ್ಯಾತಿಯ ಗಿರೀಶ್ ಭಾರದ್ವಜ್ ನಿಧನ
ಏಕೆ ತಡೆಹಿಡಿಯಲಾಗಿತ್ತು? : ಕೇಂದ್ರ ಸರ್ಕಾರದ ಪರವಾಗಿ ಹಾಜರಾದ ಸಾಲಿಸಿಟರ್ ಜನರಲ್ ತುಷಾರ್ ಮೆಹ್ತಾ, ಜೂನ್ 21ರಂದು ನಡೆದ NEET ಮರುಪರೀಕ್ಷೆಗೂ ಮುನ್ನ ವಿದ್ಯಾರ್ಥಿಗಳು ಮತ್ತು ಪೋಷಕರಲ್ಲಿ ಗೊಂದಲ ಅಥವಾ ಅವ್ಯವಸ್ಥೆ ಉಂಟಾಗದಂತೆ ತಡೆಯುವ ಉದ್ದೇಶದಿಂದ ಖಾತೆಯನ್ನು ತಾತ್ಕಾಲಿಕವಾಗಿ ನಿರ್ಬಂಧಿಸಲಾಗಿತ್ತು ಎಂದು ನ್ಯಾಯಾಲಯಕ್ಕೆ ತಿಳಿಸಿದರು. ಆದರೆ, ಪರೀಕ್ಷಾ ಪ್ರಕ್ರಿಯೆ ಪೂರ್ಣಗೊಂಡಿರುವುದರಿಂದ ಆ ಕಾರಣ ಈಗ ಅನ್ವಯಿಸುವುದಿಲ್ಲ ಎಂದು ನ್ಯಾಯಾಲಯ ಅಭಿಪ್ರಾಯಪಟ್ಟಿತು.
ನ್ಯಾಯಾಲಯದ ಮಹತ್ವದ ಅಭಿಪ್ರಾಯ : ವಿಚಾರಣೆ ವೇಳೆ ನ್ಯಾಯಮೂರ್ತಿ ಸ್ವರ್ಣ ಕಾಂತ ಶರ್ಮಾ, “NEET ಪರೀಕ್ಷೆ ಈಗಾಗಲೇ ಮುಗಿದಿರುವುದರಿಂದ ಕೇಂದ್ರ ಸರ್ಕಾರ ವ್ಯಕ್ತಪಡಿಸಿದ್ದ ಮುಖ್ಯ ಕಾಳಜಿ ಇನ್ನು ಮುಂದೆ ಉಳಿದಿಲ್ಲ. ಹೀಗಾಗಿ ಖಾತೆ ನಿರ್ಬಂಧಿಸಿದ ಆದೇಶವನ್ನು ರದ್ದುಗೊಳಿಸಲಾಗುತ್ತಿದೆ” ಎಂದು ಹೇಳಿದ್ದಾರೆ. ಇದರೊಂದಿಗೆ ಅರ್ಜಿಯನ್ನು ನ್ಯಾಯಾಲಯ ಅನುಮೋದಿಸಿ, ಎಕ್ಸ್ ಖಾತೆ ಮರುಸ್ಥಾಪನೆಗೆ ಆದೇಶ ನೀಡಿದೆ.
ಇದನ್ನೂ ಓದಿ: ಬರಗಾಲ, ರೈತರ ಸಂಕಷ್ಟದತ್ತ ಸರ್ಕಾರದ ಗಮನ: CM ಡಿ.ಕೆ. ಶಿ ಭರವಸೆ
ವಿವಾದದ ಹಿನ್ನೆಲೆ : ಸಿಜೆಪಿಯ ಮೂಲ ಎಕ್ಸ್ ಖಾತೆಯನ್ನು ಮೇ 21ರಂದು ಭಾರತದಲ್ಲಿ ನಿರ್ಬಂಧಿಸಲಾಗಿತ್ತು. ಅದಕ್ಕೂ ಮುನ್ನ ಮೇ 15ರಂದು ಈ ಡಿಜಿಟಲ್ ವೇದಿಕೆ ಅಧಿಕೃತವಾಗಿ ಆರಂಭವಾಗಿತ್ತು. ಈ ಬೆಳವಣಿಗೆಯ ಬಳಿಕ ಸಿಜೆಪಿ “Cockroach Is Back” ಹೆಸರಿನ ಹೊಸ ಎಕ್ಸ್ ಖಾತೆಯನ್ನು ಆರಂಭಿಸಿತ್ತು. ಈ ಹೊಸ ಖಾತೆಗೆ ಈಗಾಗಲೇ 2.27 ಲಕ್ಷಕ್ಕೂ ಹೆಚ್ಚು ಅನುಯಾಯಿಗಳು ಸೇರಿದ್ದಾರೆ.
ಯುವಜನರ ಚಳುವಳಿಯಾಗಿ ಸಿಜೆಪಿ : ಕಾಕ್ರೋಚ್ ಜನತಾ ಪಕ್ಷವು ಸಾಂಪ್ರದಾಯಿಕ ರಾಜಕೀಯ ಪಕ್ಷವಲ್ಲ. ಯುವಜನರ ಸಮಸ್ಯೆಗಳು, ಶಿಕ್ಷಣ ಕ್ಷೇತ್ರದ ವೈಫಲ್ಯಗಳು ಹಾಗೂ ಆಡಳಿತದ ಉತ್ತರದಾಯಿತ್ವದ ಬಗ್ಗೆ ಧ್ವನಿ ಎತ್ತುವ ಡಿಜಿಟಲ್ ಚಳುವಳಿಯಾಗಿ ಇದು ಗುರುತಿಸಿಕೊಂಡಿದೆ. ತಮ್ಮ ವಿಭಿನ್ನ ಸಂಕೇತ ಹಾಗೂ ಸಾಮಾಜಿಕ ಜಾಲತಾಣಗಳ ಮೂಲಕ ಜನರನ್ನು ಸಂಘಟಿಸುವ ವಿಧಾನದಿಂದ ಈ ವೇದಿಕೆ ರಾಷ್ಟ್ರದ ಗಮನ ಸೆಳೆದಿದೆ.
ಇದನ್ನೂ ಓದಿ: ‘PDO ಕಿರುಕುಳದಿಂದ ಬೇಸತ್ತು ಆತ್ಮಹತ್ಯೆ’– ಡೆತ್ನೋಟ್ನಲ್ಲಿ ಆರೋಪ
NEET ಪ್ರಶ್ನೆಪತ್ರಿಕೆ ಸೋರಿಕೆ ವಿರುದ್ಧ ಅಭಿಯಾನ : ಸಿಜೆಪಿ, NEET-UG 2026 ಪ್ರಶ್ನೆಪತ್ರಿಕೆ ಸೋರಿಕೆ ಆರೋಪಗಳನ್ನು ಉಲ್ಲೇಖಿಸಿ ಶಿಕ್ಷಣ ವ್ಯವಸ್ಥೆಯಲ್ಲಿ ಸುಧಾರಣೆ ಆಗಬೇಕೆಂದು ಒತ್ತಾಯಿಸುತ್ತಿದೆ. ಇದೇ ವೇಳೆ ಕೇಂದ್ರ ಶಿಕ್ಷಣ ಸಚಿವ ಧರ್ಮೇಂದ್ರ ಪ್ರಧಾನ್ ಅವರ ರಾಜೀನಾಮೆಗೆ ಆಗ್ರಹಿಸಿ ಡಿಜಿಟಲ್ ಅಭಿಯಾನವನ್ನೂ ಆರಂಭಿಸಿದೆ.




















