ಹುಬ್ಬಳ್ಳಿ: ತ್ಯಾಗ ಬಲಿದಾನಗಳ ಪ್ರತೀಕವಾದ ಬಕ್ರೀದ್ ಹಬ್ಬವನ್ನು ಗುರುವಾರ ಸಂಭ್ರಮದಿಂದ ಆಚರಿಸಿದರು. ಅಲ್ಲಾಹು ನಾಮ ಪಠಣದೊಂದಿಗೆ ನಗರದ ಪ್ರಮುಖ ಬೀದಿಗಳಲ್ಲಿ ಮೆರವಣಿಗೆ ನಡೆಸುತ್ತ, ಕಿತ್ತೂರು ರಾಣಿ ಚನ್ನಮ್ಮ ವೃತ್ತದ ಬಳಿಯ ಈದ್ಗಾ ಮೈದಾನ ಹಾಗೂ ಹಳೇ ಹುಬ್ಬಳ್ಳಿ ಈದ್ಗಾ ಮೈದಾನಕ್ಕೆ ತೆರಳಿ, ಧಾರ್ಮಿಕ ವಿಧಿ ವಿಧಾನಗಳ ಮೂಲಕ ಸಾಮೂಹಿಕ ಪ್ರಾರ್ಥನೆ ಸಲ್ಲಿಸಿದರು. ಸಾವಿರಾರು ಮಂದಿ ಪಾಲ್ಗೊಂಡಿದ್ದರು.
ಪ್ರಾರ್ಥನೆಯಲ್ಲಿ ಭಾಗವಹಿಸಿದ್ದ ಮುಸ್ಲಿಮ್ ಧರ್ಮಗುರು ಮೌಲಾನ್ ಜಹೀರುದ್ದೀನ್ ಖಾಜಿ, ‘ಇಸ್ಲಾಂ ಧರ್ಮದ ಸಿದ್ಧಾಂತಗಳನ್ನು ಪಾಲಿಸುತ್ತ, ಪ್ರತಿಯೊಬ್ಬರಿಗೂ ಒಳಿತನ್ನು ಬಯಸಬೇಕು. ಅಲ್ಲಾಹುವಿನ ಕೃಪೆಗೆ ಪಾತ್ರರಾದಾಗ ಮೋಕ್ಷ ಪಡೆಯಲು ಸಾಧ್ಯ. ಉತ್ತಮ ಮಳೆಯಾಗಿ, ದೇಶ ಸುಭೀಕ್ಷವಾಗಲಿ. ದೇಶದ ಸಮಸ್ತ ಜನರಿಗೆ ಆರೋಗ್ಯ, ಶಾಂತಿ, ಸಹನೆ, ದಾನ ಧರ್ಮದ ಗುಣಗಳನ್ನು ನೀಡಲಿ’ ಎಂದರು.
ಇದನ್ನೂ ಓದಿ: ಬೆಳಗಾವಿಯಲ್ಲಿ ಎಸ್ಡಿಆರ್ಎಫ್ CPI ಶ್ರೀಶೈಲ ಚೌಗಲೆ ಆತ್ಮಹತ್ಯೆ
ಅದೇ ರೀತಿ ಹಳೇಹುಬ್ಬಳ್ಳಿ ಈದ್ಗಾ ಮೈದಾನದಲ್ಲಿ ಸಾವಿರಾರು ಜನಸೇರಿ ಈದ್ ಉಲ್ ಅದಹಾ ಸಾಮೂಹಿಕ ಪ್ರಾರ್ಥನೆ ಸಲ್ಲಿಸಿದರು. ಪ್ರಾರ್ಥನೆಯ ನಂತರ ಹಿರಿಯರು, ಕಿರಿಯರೆನ್ನದೆ ಪರಸ್ಪರ ಹಬ್ಬದ ಶುಭಾಶಯ ವಿನಿಮಯ ಮಾಡಿಕೊಂಡರು. ನಂತರ ಓಣಿ ಓಣಿಯಲ್ಲಿ ಕುರುಬಾನಿ ವಿತರಿಸಿ ಪರಸ್ಪರ ಶುಭಾಷಯ ಕೋರಿಕೊಂಡರು.
ಅಂಜುಮನ್ ಸಂಸ್ಥೆ ಅಧ್ಯಕ್ಷ ಎ.ಎಂ. ಹಿಂಡಸಗೇರಿ, ಅಲ್ತಾಫ್ ಕಿತ್ತೂರ, ಅಲ್ತಾಫ್ ಹಳ್ಳೂರು, ಶಿರಾಜ್ಅಹ್ಮದ್ ಕುಡಚಿವಾಲೆ, ಮೌಲಾನಾ ನಯೀಮೋದ್ದೀನ ಶೇಖ, ಬಶೀರ ಹಳ್ಳೂರ ಸೇರಿದಂತೆ ಇತರರು ಇದ್ದರು.





















