ಬೆಂಗಳೂರು: “ಮನೆಯಲ್ಲಿ ಯಾರೂ ಇಲ್ಲ ಬಾ…” ಎಂದು ಪ್ರಿಯಕರನನ್ನು ಮನೆಗೆ ಕರೆದ ಪ್ರಿಯತಮೆ ಆತನನ್ನು ಕಟ್ಟಿಹಾಕಿ ಬೆಂಕಿ ಹಚ್ಚಿ ಕೊಲೆ ಮಾಡಿದ ಘೋರ ಘಟನೆ ರಾಜಧಾನಿ ಬೆಂಗಳೂರಿನ ಅಂಜನಾನಗರದಲ್ಲಿ ನಡೆದಿದೆ.
ಖಾಸಗಿ ಟೆಲಿಕಾಂ ಕಂಪನಿಯಲ್ಲಿ ಕೆಲಸ ಮಾಡುತ್ತಿದ್ದ ಕಿರಣ್ ಎಂಬಾತ ಮೃತ ದುರ್ದೈವಿಯಾಗಿದ್ದಾನೆ. ಕಿರಣ್ ಮತ್ತು ಆರೋಪಿ ಪ್ರೇಮಾ ನಡುವೆ ಕೆಲ ದಿನಗಳಿಂದಲೇ ಸ್ನೇಹ ಬೆಳೆದು ಅದು ಪ್ರೀತಿಯಾಗಿ ಪರಿವರ್ತನೆಯಾಗಿತ್ತು.
ಮಂಗಳವಾರ ಮಧ್ಯಾಹ್ನದ ಸುಮಾರಿಗೆ ಕಿರಣ್ ತನ್ನ ಪ್ರೇಯಸಿ ಪ್ರೇಮಾ ಮನೆಗೆ ಬಂದಿದ್ದ. ಮನೆಯಲ್ಲಿ ಆಕೆಯ ತಾಯಿ ಮತ್ತು ಅಣ್ಣ ಇಲ್ಲ ಎಂದು ಯುವತಿಯೇ ಆತನನ್ನು ಬರಮಾಡಿಕೊಂಡಿದ್ದಳು.
ಈ ವೇಳೆ ಕಿರಣ್ಗೆ ವೆಸ್ಟರ್ನ್ ಸ್ಟೈಲ್ನಲ್ಲಿ ನಿನಗೆ ಪ್ರಪೋಸ್ ಮಾಡುತ್ತೇನೆ ಎಂದು ನಂಬಿಸಿದ ಪ್ರೇಮಾ ಆತನ ಕಣ್ಣಿಗೆ ಬಟ್ಟೆ ಕಟ್ಟಿ, ಕೈ-ಕಾಲುಗಳನ್ನು ಹಗ್ಗದಿಂದ ಬಿಗಿದಿದ್ದಾಳೆ. ಆಗ ಕಿರಣ್ “ಯಾಕೆ ಇಷ್ಟು ಟೈಟ್ ಆಗಿ ಹಗ್ಗ ಕಟ್ಟುತ್ತಿದ್ದೀಯಾ?” ಎಂದು ಕೇಳಿದಾಗ, “ಇದು ವೆಸ್ಟರ್ನ್ ಸ್ಟೈಲ್” ಎಂದು ಹೇಳಿ ಸುಮ್ಮನಿರಿಸಿದ್ದಾಳೆ.
ಬಳಿಕ ಆತನನ್ನು ಅರೆಬೆತ್ತಲೆಗೊಳಿಸಿ ಪೆಟ್ರೋಲ್ ಸುರಿದು ಬೆಂಕಿ ಇಟ್ಟಿದ್ದಾಳೆ. ಇಷ್ಟೇ ಅಲ್ಲದೇ ಆ ಘಟನೆಯನ್ನು ತನ್ನ ಮೊಬೈಲ್ನಲ್ಲಿ ಯುವತಿ ವಿಡಿಯೋ ಮಾಡಿಕೊಂಡಿರುವುದಾಗಿಯೂ ಮಾಹಿತಿ ಬಂದಿದೆ.
ತನಿಖೆ ದಿಕ್ಕು ತಪ್ಪುಸುವ ಹೇಳಿಕೆ: “ನಾನು ಟಾಯ್ಲೆಟ್ಗೆ ಹೋಗಿದ್ದ ಸಂದರ್ಭದಲ್ಲಿ ಏಕಾಏಕಿ ಶಬ್ಧ ಬಂದಿತ್ತು. ಹೊರ ಬಂದು ನೋಡಿದಾಗ ಕಿರಣ್ ಬೆಂಕಿ ಹಚ್ಚಿಕೊಂಡಿದ್ದ” ಎಂದು ಪ್ರೇಮಾ ಹೇಳಿಕೆ ನೀಡಿದ್ದಳು. ಆದರೆ, ಕಿರಣ್ ಮನೆಗೆ ಬಂದಾಗ ಪೆಟ್ರೋಲ್ ಕ್ಯಾನ್ ತಂದಿರಲಿಲ್ಲ ಎನ್ನುವುದು ಸಿಸಿಟಿವಿ ದೃಶ್ಯಾವಳಿಯಲ್ಲಿ ಕಂಡು ಬಂದಿತ್ತು. ಇದು ಯುವತಿ ಮೊದಲೇ ಪೆಟ್ರೋಲ್ ತಂದು ಮನೆಯಲ್ಲಿ ಇಟ್ಟಿದ್ದಳಾ ಎಂಬ ಸಂಶಯವನ್ನುಂಟು ಮಾಡಿತ್ತು.
ಸಿಲಿಕಾನ್ ಸಿಟಿಯ ಬ್ಯಾಡರಹಳ್ಳಿ ಪೊಲೀಸ್ ಠಾಣಾ ವ್ಯಾಪ್ತಿಯ ಅಂಜನಾನಗರದಲ್ಲಿ ಘಟನೆ ನಡೆದಿದ್ದು, ಈ ಘಟನೆ ಕುರಿತಂತೆ ಪೊಲೀಸರು ಮತ್ತಷ್ಟು ಮಾಹಿತಿಯನ್ನು ಕಲೆಹಾಕುತ್ತಿದ್ದಾರೆ.






















