ಸಂ.ಕ.ಸಮಾಚಾರ ಕಲಬುರಗಿ : ಪ್ರಧಾನಿ ನರೇಂದ್ರ ಮೋದಿ ಹಾಗೂ ವಿದೇಶಾಂಗ ಸಚಿವ ಜೈಶಂಕರ್ ಅವರ ವಿದೇಶ ನೀತಿಯಿಂದಾಗಿ ಅಮೇರಿಕಾದ ವಿದೇಶಾಂಗ ಸಚಿವರು ಸೇರಿದಂತೆ ಪ್ರತಿಯೊಬ್ಬರು ಭಾರತದ ಬಗ್ಗೆ ಹಗುರವಾಗಿ ಮಾತನಾಡುಂತಾಗಿದೆ. ಇದರಿಂದಾಗಿ ಅಂತಾರಾಷ್ಟ್ರೀಯ ಮಟ್ಟದಲ್ಲಿ ಭಾರತದ ಬಗ್ಗೆ ಅವಮಾನ ಅನುಭವಿಸುವಂತಾಗಿದೆ ಎಂದು ಜಿಲ್ಲಾ ಉಸ್ತುವಾರಿ ಸಚಿವ ಪ್ರಿಯಾಂಕ್ ಖರ್ಗೆ ಹರಿಹಾಯ್ದರು.
ಕಲಬುರಗಿಯಲ್ಲಿ ಶನಿವಾರ ಮಾಧ್ಯಮ ಪ್ರತಿನಿಧಿಗಳೊಂದಿಗೆ ಮಾತನಾಡಿದ ಅವರು, ಅಮೇರಿಕಾದ ವಿದೇಶಾಂಗ ಅಧಿಕಾರಿಯೊಬ್ಬರು ನಾವು ಭಾರತವನ್ನು ಬೆಳೆಯಲು ಬಿಡುವುದಿಲ್ಲ. ಯುದ್ದದ ಪರಿಣಾಮದಿಂದಾಗಿ ಭಾರತ, ರಷ್ಯಾದಿಂದ 30 ದಿನಗಳ ವರೆಗೆ ತೈಲ ಖರೀದಿಸಲು ಅನುಮತಿ ನೀಡಿದ್ದೇವೆ ಎಂದು ಹೇಳಿಕೆ ನೀಡಿದ್ದಾರೆ. ಭಾರತಕ್ಕೆ ಅನುಮತಿ ನೀಡಲು ಅವರು ಯಾರು ? ಮೋದಿ, ಜೈಶಂಕರ್ ಸೇರಿದಂತೆ ಬಿಜೆಪಿ ನಾಯಕರು ಯಾರೊಬ್ಬರು ಈ ಬಗ್ಗೆ ಪ್ರತಿಕ್ರಿಯೆ ನೀಡಿಲ್ಲ. ಭಾರತದ ಬಗ್ಗೆ ಹಗುರವಾಗಿ ಮಾತನಾಡುತ್ತಿರುವುದರಿಂದಾಗಿ ಅಂತರಾಷ್ಟ್ರೀಯ ಮಟ್ಟದಲ್ಲಿ ಭಾರತಕ್ಕೆ ಅವಮಾನವಾಗುತ್ತಿದೆ ಎಂದು ಖರ್ಗೆ ಟೀಕಿಸಿದರು.
ಪ್ರಶ್ನೆಯೊಂದಕ್ಕೆ ಉತ್ತರಿಸುತ್ತಿದ್ದ ಸಚಿವರು, ” ನಾನು ಮನಸು ಮಾಡಿದರೆ ಮೋದಿ ಅವರ ರಾಜಕೀಯ ಭವಿಷ್ಯ ಹಾಳು ಮಾಡಬಲ್ಲೆ. ಆದರೆ, ಮೋದಿ ನನ್ನ ಸ್ನೇಹಿತರು ಹಾಗಾಗಿ ನಾನು ಹಾಗೆ ಮಾಡುವುದಿಲ್ಲ ” ಎಂದು ಅಮೇರಿಕ ಅಧ್ಯಕ್ಷ ಡೋನಾಲ್ಡ್ ಟ್ರಂಪ್ ಹೇಳಿದ್ದಾರೆ ಇದಕ್ಕೂ ಕೂಡಾ ಮೋದಿ ಪ್ರತಿಕ್ರಿಯೆ ನೀಡಿಲ್ಲ. ಯಾಕೆ ಅವರು ಮಾತಮಾಡುತ್ತಿಲ್ಲ, ಮೋದಿಯವರ ಬಗ್ಗೆ ಎಫ್ಸ್ಟೀನ್ ಫೈಲ್ ನಲ್ಲಿ ಏನಾದರೂ ಇದೆಯಾ ? ಎಂದು ಪ್ರಿಯಾಂಕ್ ಖರ್ಗೆ ವ್ಯಂಗ್ಯ ವಾಡಿದರು.
ಈ ಹಿಂದೆ ಮಧ್ಯಪ್ರಾಚ್ಯಗಳ ವಿಚಾರದಲ್ಲಿ ಅಮೇರಿಕಾ ಮಧ್ಯೆ ಪ್ರವೇಶಿಸಿದಾಗ ಅಂದಿನ ಪ್ರಧಾನಿ ಮನಮೋಹನ್ ಸಿಂಗ್ ಅವರು ಆ ಬಗ್ಗೆ ಆಕ್ಷೇಪ ಎತ್ತಿದ್ದರು. ಅಂತಹ ಎದೆಗಾರಿಕೆ ಮೋದಿಗೆ ಯಾಕೆ ಇಲ್ಲ? ಎಂದು ಪ್ರಶ್ನಿಸಿದ ಸಚಿವರು, ಸಚಿವ ಪ್ರಹ್ಲಾದ್ ಜೋಶಿ ಸೇರಿದಂತೆ ಬಿಜೆಪಿಯವರು ನೆಹರು , ಸೋನಿಯಾ, ರಾಹುಲ್ ಗಾಂಧಿ ಬಗ್ಗೆ ಮಾತನಾಡುತ್ತಾರೆ. ಸ್ವತಃ ಮೋದಿ ಸಿನೆಮಾ ನಟ ನಟಿಯರ ಮದುವೆ, ಕ್ರಿಕೆಟ್ ತಂಡಕ್ಕೆ ಶುಭಾಶಯ ಕೋರಲು ಹೋಗುತ್ತಾರೆ. ಆದರೆ, ವಿದೇಶಾಂಗ ನೀತಿಗಳ ಬಗ್ಗೆ ಭಾರತ ದಿಟ್ಟನಿಲುವಿನ ಬಗ್ಗೆ ಮಾತನಾಡಲು ಅವರಿಗೆ ಸಮಯವಿಲ್ಲ ಎಂದು ಕುಟುಕಿದರು.
ಗೃಹ ಬಳಕೆ ಸಿಲಿಂಡರ್ ಬೆಲೆ ಏರಿಕೆ ಬಗ್ಗೆ ಕೇಳಲಾದ ಪ್ರಶ್ನೆಗೆ ಉತ್ತರಿಸಿದ ಸಚಿವರು, ಆ ಬಗ್ಗೆ ಕೇಂದ್ರ ಸಚಿವರು ಉತ್ತರಿಸಲಿ. ಬೆಲೆ ಏರಿಕೆಯ ಮಾಸ್ಟರ್ ಸ್ಟೋಕ್ ಬಗ್ಗೆ ಬಿಜೆಪಿಯವರು ಉತ್ತರಿಸಲಿ ಎಂದು ಪ್ರಶ್ನೆಯೊಂದಕ್ಕೆ ಉತ್ತರಿಸುತ್ತಾ ಸವಾಲು ಹಾಕಿದರು.
ಕಾಲೇಜುಗಳಲ್ಲಿ ಚುನಾವಣೆ ನಡೆಸುವ ವಿಚಾರಕ್ಕೆ ಸಂಬಂಧಿಸಿದ ಪ್ರಶ್ನೆಗೆ ಉತ್ತರಿಸಿದ ಪ್ರಿಯಾಂಕ್ ಖರ್ಗೆ, ಚುನಾವಣೆಗೆ ಪೋಷಕರ ವಿರೋಧ ಸೇರಿದಂತೆ ಎಲ್ಲ ವಿಚಾರಗಳ ಬಗ್ಗೆ ಕೂಲಂಕುಷ ಪರಿಶೀಲನೆ ನಡೆಸಲಾಗುತ್ತದೆ. ಜೆಎನ್ ಯೂ ಸೇರಿದಂತೆ ಬಹುತೇಕ ಶೈಕ್ಷಣಿಕ ಕೇಂದ್ರಗಳಲ್ಲಿ ವಿದ್ಯಾರ್ಥಿ ಸಂಘಕ್ಕೆ ಚುನಾವಣೆ ನಡೆಸಲಾಗುತ್ತಿದೆ. ಎಲ್ಲ ಹಂತದ ಪರಿಶೀಲನೆ ನಂತರ ರೂಪಿಸಲಾದ ನಿಯಮಗಳ ಪ್ರಕಾರ ಎನ್ ಎಸ್ ಐ ಯೂ, ಎಬಿವಿಪಿ ಸಂಘಗಳು ಒಪ್ಪಬೇಕಾಗುತ್ತದೆ ಎಂದರು.
ಗ್ರಾಮಪಂಚಾಯತ್ ಅಡಿಯಲ್ಲಿ ಬಿಲ್ ಕಲೆಕ್ಟರ್ ಹಾಗೂ ಡಾಟಾ ಆಪರೇಟರ್ ಅವರುಗಳು ಮುಂಬಡ್ತಿಗೆ ಸಂಬಂಧಿಸಿದಂತೆ ಪ್ರಾವಿಷನಲ್ ಲಿಸ್ಟ್ ಇನ್ನೂ ನೆನೆಗುದಿಗೆ ಬಿದ್ದಿರುವ ಕುರಿತು ಉತ್ತರಿಸಿದ ಸಚಿವರು ಈ ಬಗ್ಗೆ ಒಂದು ವಾರದಲ್ಲೇ ತೀರ್ಮಾನ ಕೈಗೊಳ್ಳಲಾಗುವುದು ಎಂದು ಭರವಸೆ ನೀಡಿದರು.
ಚಿತ್ತಾಪುರದಲ್ಲಿ ಅಂದಾಜು ರೂ 1069 ಕೋಟಿವೆಚ್ಚದ ಕಾಮಗಾರಿಗಳಿಗೆ ಅಡಿಗಲ್ಲು ಹಾಗೂ ಉದ್ಘಾಟನೆ ನೆರವೇರಲಿದೆ.
ಭಾನುವಾರ ಚಿತ್ತಾಪುರದಲ್ಲಿ ನಡೆಯುವ ಕಾರ್ಯಕ್ರಮಕ್ಕೆ ರಾಜ್ಯಸಭೆ ವಿರೋಧ ಪಕ್ಷದ ನಾಯಕ ಮಲ್ಲಿಕಾರ್ಜುನ ಖರ್ಗೆ, ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ ಸೇರಿದಂತೆ ಸಚಿವರು, ಶಾಸಕರು ಹಾಗೂ ಇತರೆ ಗಣ್ಯರು ಭಾಗಿಯಾಗಲಿದ್ದಾರೆ ಎಂದು ಸಚಿವ ಪ್ರಿಯಾಂಕ್ ಖರ್ಗೆ ತಿಳಿಸಿದರು.























