Home Advertisement
Home ನಮ್ಮ ಜಿಲ್ಲೆ ಹಾವೇರಿ ಶಾಸಕ ಚಂದ್ರು ಲಮಾಣಿ ವಿರುದ್ಧ ಷಡ್ಯಂತ್ರ ನಡೆದಿದೆ

ಶಾಸಕ ಚಂದ್ರು ಲಮಾಣಿ ವಿರುದ್ಧ ಷಡ್ಯಂತ್ರ ನಡೆದಿದೆ

0
32

ಹಾವೇರಿ: ಶಿರಹಟ್ಟಿ ಬಿಜೆಪಿ ಶಾಸಕ ಚಂದ್ರು ಲಮಾಣಿ ಅವರ ವಿರುದ್ಧ ಪಡ್ಯಂತ್ರ ನಡೆದಿದೆ. ಒತ್ತಾಯಪೂರ್ವಕವಾಗಿ ಅವರಿಗೆ ಹಣ ನೀಡುವ ಪ್ರಯತ್ನ ನಡೆದಿದೆ. ಭ್ರಷ್ಟಾಚಾರ ನಿಗ್ರಹ ಕಾಯ್ದೆಯ ಪ್ರಕಾರ ಲಂಚ ಕೊಡುವ ಒತ್ತಾಯ ಮಾಡುವುದೂ ಕೂಡ ತಪ್ಪು ಹೀಗಾಗಿ ಎಲ್ಲ ಆಯಾಮಗಳಲ್ಲಿ ಸರಿಯಾದ ರೀತಿಯಲ್ಲಿ ತನಿಖೆಯಾಗಬೇಕೆಂದು ಒತ್ತಾಯಿಸುವುದಾಗಿ ಮಾಜಿ ಮುಖ್ಯಮಂತ್ರಿ ಹಾಗೂ ಸಂಸದ ಬಸವರಾಜ ಬೊಮ್ಮಾಯಿ ಹೇಳಿದ್ದಾರೆ.

ಹಾವೇರಿಯಲ್ಲಿ ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, ಶಾಸಕ ಚಂದ್ರು ಲಮಾಣಿ ಅವರ ಆಸ್ಪತ್ರೆಯಲ್ಲಿ ಎಲ್ಲ ರೀತಿಯ ಜನರು ಬಂದಿರುತ್ತಾರೆ. ಹೀಗಾಗಿ ಅದರಲ್ಲಿ ಯಾವುದೂ ಸ್ಪಷ್ಟತೆ ಇಲ್ಲ. ಲೋಕಾಯುಕ್ತರು ಕೇಸ್ ಹಾಕಿದ್ದಾರೆ. ತನಿಖೆ ನಂತರ ಸತ್ಯಾಸತ್ಯತೆ ಹೊರ ಬರುತ್ತದೆ. ಒಬ್ಬ ಯುವ ವೈದ್ಯರು ಒಳ್ಳೆಯ ಕೆಲಸ ಮಾಡುತ್ತಿರುವಾಗ ಒಂದು ಕರಿ ನೆರಳು ಅವರ ಸೇವೆಗೆ ಅಡ್ಡಿಯಾಗಿದೆ. ಲಂಚ ಕೊಡುವ ಒತ್ತಾಯ ಮಾಡುವುದೂ ಕೂಡ ಭ್ರಷ್ಟಾಚಾರ ನಿಗ್ರಹ ಕಾಯ್ದೆಯ ಪ್ರಕಾರ ತಪ್ಪು ಹೀಗಾಗಿ ಎಲ್ಲ ಆಯಾಮಗಳಲ್ಲಿ ಸರಿಯಾದ ರೀತಿಯಲ್ಲಿ ತನಿಖೆಯಾಗಬೇಕೆಂದು ಒತ್ತಾಯ ಮಾಡುತ್ತೇನೆ. ಯಾವುದೇ ಒಬ್ಬರ ಸಾರ್ವಜನಿಕರ ಜೀವನವನ್ನು ಷಡ್ಯಂತ್ರದಿಂದ ಮುಗಿಸುವ ಕೆಲಸವನ್ನು ಯಾರೂ ಪ್ರೋತ್ಸಾಹ ಮಾಡಬಾರದು ಖಂಡಿಸಬೇಕು ಎಂದರು.

ಇದನ್ನೂ ಓದಿ: ಹಂಪಿ ಕನ್ನಡ ವಿಶ್ವವಿದ್ಯಾಲಯ: 3 ಜನ ಸಾದಕರಿಗೆ ನಾಡೋಜ ಪ್ರಕಟ

ಗುತ್ತಿಗೆದಾರರ ಸಂಘದವರು ಮಾಡಿರುವ ಕಮಿಷನ್ ಆರೋಪದ ಕುರಿತು ಕೇಳಿದ ಪ್ರಶ್ನೆಗೆ ಪ್ರತಿಕ್ರಿಯಿಸಿದ ಅವರು, ಕಾಂಗ್ರೆಸ್ ನಾಟಕ ಬಟಾಬಯಲಾಗಿದೆ. ಗುತ್ತಿಗೆದಾರರ ಸಂಘ ಒಂದೇ ಅಲ್ಲ. ಬೆಸ್ಕಾಂ ಗುತ್ತಿಗೆದಾರರ ಸಂಘ, ಪಿಡಬ್ಲ್ಯುಡಿ ಸಂಘ, ಎಲ್ಲ ಗುತ್ತಿಗೆದಾರರ ಸಂಘದವರು ಪತ್ರಿಕಾಗೋಷ್ಠಿ ಮಾಡಿ ಕಮಿಷನ್ ಹೆಚ್ಚಾಗಿದೆ ಎಂದು ಹೇಳಿದ್ದಾರೆ. ಕಾಂಗ್ರೆಸ್‌ನವರಿಗೆ ಈ ಬಗ್ಗೆ ಪ್ರಶ್ನೆ ಮಾಡುವ ನೈತಿಕತೆ ಇಲ್ಲ ಎಂದರು.

ಸಿಎಂ ಲೆಕ್ಕ ಕೊಡಲಿ: ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ರಾಜಕೀಯವಾಗಿ ತಮಗೆ ಅನ್ಯಾಯ ಮಾಡಲಾಗುತ್ತಿದೆ ಎನ್ನುವ ದೃಷ್ಟಿಯಲ್ಲಿ ಮಾಡಿರುವ ಅಭಿಪ್ರಾಯದ ಕುರಿತು ಕೇಳಿದ ಪ್ರಶ್ನೆಗೆ ಪ್ರತಿಕ್ರಿಯಿಸಿದ ಅವರು, ಸಿದ್ದರಾಮಯ್ಯ ಅವರಿಗೆ ಅನ್ಯಾಯವಾಗಿದೆ. ರಾಜಕೀಯ ಬೆಳವಣಿಗೆಯನ್ನು ಯಾರೂ ಸಹಿಸುತ್ತಿಲ್ಲ ಅಂತ ಹೇಳುತ್ತಿದ್ದಾರೆ. ಅವರು ಸಿಎಂ ಆಗಿ ದೇವರಾಜ ಅರಸು ಅವರ ಅವಧಿಯ ದಾಖಲೆಯನ್ನು ಮೀರಿದ್ದಾರೆ. ಏಳು ವರ್ಷ ಅಧಿಕಾರ ಅನುಭವಿಸಿದ್ದಾರೆ. ಅತಿ ಹೆಚ್ಚು ಅವಧಿ ಅಧಿಕಾರ ಅನುಭವಿಸಿದವರೇ ಅನ್ಯಾಯ ಆಗಿದೆ ಅಂದರೆ ಏನು? ಅವರ ಅವಧಿಯಲ್ಲಿ ಹಿಂದುಳಿದ ವರ್ಗದವರಿಗೆ, ಪರಿಶಿಷ್ಟ ವರ್ಗದವರಿಗೆ ಏನು ಮಾಡಿದ್ದಾರೆ ಅನ್ನುವುದನ್ನು ಸಿದ್ದರಾಮಯ್ಯ ಲೆಕ್ಕಾ ಕೊಡಬೇಕು. ಅವರು ಲೆಕ್ಕ ಕೊಡುವ ಸ್ಥಾನದಲ್ಲಿದ್ದಾರೆ ಎಂದು ಹೇಳಿದರು.

ಇದನ್ನೂ ಓದಿ: ‘ಗುಲಾಮಗಿರಿಯ ಸಂಕೇತಗಳಿಂದ ಮುಕ್ತಿ’: ರಾಜಾಜಿ ಪ್ರತಿಮೆ ಇಂದು ರಾಷ್ಟ್ರಪತಿ ಭವನದಲ್ಲಿ ಅನಾವರಣ

ಎಸ್ಸಿಗಳಿಗೆ ಸಿಎಂ ಸ್ಥಾನ ಕೊಡಬೇಕು ಎನ್ನುವ ಮಾತನಾಡುತ್ತಾರೆ. ಸಿದ್ದರಾಮಯ್ಯ, ಮಹದಾದೇವಪ್ಪ ಕಾಂಗ್ರೆಸ್‌ಗೆ ಆಮದಾದವರು. ಬಸವಲಿಂಗಪ್ಪ, ರಂಗನಾಥವರು, ಖರ್ಗೆಯವರು ಬಹಳಷ್ಟು ಘಟಾನುಘಟಿಗಳು ಕಾಂಗ್ರೆಸ್‌ಗೆ ಬೆಂಬಲ ಕೊಡುತ್ತ ಬಂದಿದ್ದಾರೆ. ಎಪ್ಪತ್ತೈದು ವರ್ಷಗಳಿಂದ ದಲಿತರು ಕಾಂಗ್ರೆಸ್‌ಗೆ ಬೆಂಬಲ ನೀಡುತ್ತ ಬಂದಿದ್ದಾರೆ. ದಲಿತರ ಋಣದಲ್ಲಿ ಇರುವಂತ ಕಾಂಗ್ರೆಸ್‌ನವರು ಅವರನ್ನು ಸಿಎಂ ಮಾಡಬೇಕು. ನಿಜವಾಗಲು ರಾಜಕೀಯ ಬದ್ಧತೆ ಇದ್ದರೆ, ಕಾಂಗ್ರೆಸ್ ದಲಿತರ ಹಕ್ಕನ್ನು ಕೊಡಬೇಕು. ಅದು ಭಿಕ್ಷೆಯಲ್ಲ. ದಲಿತರಿಗೆ ಮೂಗಿಗೆ ತುಪ್ಪ ಸವರುವ ಮೂಲಕ ದಲಿತರ ದಾರಿ ತಪ್ಪಿಸುವ ಕೆಲಸ ಮಾಡುತ್ತಿದ್ದಾರೆ ಎಂದು ವಾಗ್ದಾಳಿ ನಡೆಸಿದರು.

ಎಸ್ಪಿ ವರ್ಗಾವಣೆ ಮಾಡಬೇಕು: ಬಾಗಲಕೋಟೆಯಲ್ಲಿ ನಡೆದ ಗಲಾಟೆ ಕುರಿತು ಕೇಳಿದ ಪ್ರಶ್ನೆಗೆ ಪ್ರತಿಕ್ರಿಯಿಸಿದ ಅವರು, ಗಲಾಟೆಯನ್ನು ಯಾರು ಸೃಷ್ಟಿ ಮಾಡಿದ್ದಾರೆ. ಮಸೂತಿಯಿಂದ ಕಲ್ಲು, ಚಪ್ಪಲಿ ಬಿದ್ದಿದೆ. ಅದನ್ನು ಯಾರು ಮಾಡಿದ್ದಾರೆ. ಪೊಲೀಸರು ಒಂದು ಸೈಡ್ ಬಂಧನ ಮಾಡುವುದು. ಪ್ರಮುಖರನ್ನು ಬಿಟ್ಟು ಬಂಧನ ಮಾಡುವುದು. ಪಿತೂರಿ ಹಿಂದಿರುವವರನ್ನು ಬಿಟ್ಟು ಇತರರನ್ನು ಬಂಧಿಸಿದರೆ ಪಿತೂರಿ ಮಾಡುವವರು ಮುಂದೆಯೂ ಮಾಡುತ್ತಾರೆ ತುಷ್ಟಿಕರಣ ಮಾಡುವ ಮೂಲಕ ಹಿಂದೂಗಳ ಹಬ್ಬ, ಮೆರವಣಿಗೆ, ಶಿವಾಜಿ ಜಯಂತಿ, ಗಣೇಶ ಜಯಂತಿ ಕಾರ್ಯಕ್ರಮಗಳಲ್ಲಿ ನಿರಂತರ ಗಲಾಟೆ ಮಾಡಿಸುವುದು ನಡೆಯುತ್ತಿದೆ. ಬಾಗಲಕೋಟೆ ಎಸ್ಪಿಗೆ ಏಟು ಬಿದ್ದು ರಕ್ತ ಬರುತ್ತಿದ್ದರೂ ನನಗೇನು ಆಗಿಲ್ಲ ಎಂದು ಹೇಳುತ್ತಾರೆ. ಮೊದಲು ಅಲ್ಲಿನ ಎಸ್ಪಿ ಸೇರಿದಂತೆ ಎಲ್ಲ ಪೊಲೀಸ್ ಅಧಿಕಾರಿಗಳನ್ನು ವರ್ಗ ಮಾಡಬೇಕು ಎಂದು ಆಗ್ರಹಿಸಿದರು.

Previous articleಮನರೇಗಾ ಮರುಸ್ಥಾಪಿಸುವ ಕಾಂಗ್ರೆಸ್ ಹೋರಾಟ ಬೆಂಬಲಿಸಿ: ಸಿಎಂ ಕರೆ
Next articleಕೊಪ್ಪಳ ಬಂದ್: ಒಂದು ವರ್ಷದ ಹೋರಾಟ ನಿರ್ಣಾಯಕ ಹಂತಕ್ಕೆ