ರಾಮನಗರ ಜಿಲ್ಲೆ ಚನ್ನಪಟ್ಟಣ ತಾಲ್ಲೂಕಿನ ಅಂಬಾಡಹಳ್ಳಿಯ ಯು.ಜಿ.ಎಚ್.ಪಿ.ಎಸ್ (ಉನ್ನತೀಕರಿಸಿದ ಸರ್ಕಾರಿ ಹಿರಿಯ ಪ್ರಾಥಮಿಕ ಪಾಠ ಶಾಲೆ) ಸಹ ಶಿಕ್ಷಕಿ ಶಾಂತಮ್ಮ ರಾಜ್ಯ ಸರ್ಕಾರದಿಂದ ಕೈಗೊಳ್ಳಲಾಗಿರುವ ಸಾಮಾಜಿಕ ಮತ್ತು ಶೈಕ್ಷಣಿಕ ಕಾರ್ಯವನ್ನು ಕೇವಲ 7ದಿನಗಳಲ್ಲಿಯೇ ಪೂರ್ಣಗೊಳಿಸಿ ಶೇ.100ರಷ್ಟು ಸಾಧನೆ ಮಾಡಿದ್ದಾರೆ.
ರಾಮನಗರ ಜಿಲ್ಲಾಡಳಿತದ ವತಿಯಿಂದ ಶಿಕ್ಷಕಿ ಶಾಂತಮ್ಮರನ್ನು ಜಿಲ್ಲಾಧಿಕಾರಿ ಯಶವಂತ್ ವಿ. ಗುರುಕರ್ ತಮ್ಮ ಕಚೇರಿಯಲ್ಲಿ ಅಭಿನಂಧಿಸಿ, ವೈಯ್ಯಕ್ತಿವಾಗಿ 1,001 ರೂ.ಗಳ ನಗದು ಬಹುಮಾನ ನೀಡಿ, ಶಾಂತಮ್ಮ ಕಾರ್ಯವನ್ನು ಪ್ರಶಂಸಿದ್ದಾರೆ.
ಅಭಿನಂದನಾ ಪತ್ರ ನೀಡಿರುವ ಜಿಲ್ಲಾಧಿಕಾರಿಗಳು ಸಮೀಕ್ಷೆಗಾಗಿ ಚನ್ನಪಟ್ಟಣ ತಾಲ್ಲೂಕಿನ ಹೊಡಿಕೆ ಹೊಸಹಳ್ಳಿ, ಚನ್ನಂಕೇಗೌಡನದೊಡ್ಡಿ ಹಾಗೂ ಗೋವಿಂದೇಗೌಡನದೊಡ್ಡಿಯಲ್ಲಿ 86 ಮನೆಗಳ ಸಮೀಕ್ಷಾ ಕಾರ್ಯವನ್ನು ಕೇವಲ 7 ದಿನಗಳಲ್ಲಿಯೇ ಶೇ. 100ರಷ್ಟು ಪೂರ್ಣಗೊಳಿಸಿ ನಿಗದಿತ ಅವಧಿಗೂ ಮೊದಲೇ ಸಮೀಕ್ಷಾ ಕಾರ್ಯವನ್ನು ಪೂರ್ಣಗೊಳಿಸಿರುತ್ತೀರಿ.
ಸಮೀಕ್ಷೆಯಲ್ಲಿ ನೀವು ತೋರಿದ ಆಸಕ್ತಿ, ಉತ್ಸಾಹ ಮತ್ತು ಪ್ರಾಮಾಣಿಕ ಪ್ರಯತ್ನವು ಸಮೀಕ್ಷೆ ಕಾರ್ಯ ತ್ವರಿತವಾಗಿ ಸಾಗಲು ಸಹಕಾರಿಯಾಗಿದೆ. ಸಮೀಕ್ಷಾ ಕಾರ್ಯಕ್ಕೆ ನೀವು ನೀಡಿದ ಸಹಕಾರ ಮತ್ತು ಉತ್ಸಾಹವನ್ನು ಜಿಲ್ಲಾಡಳಿತವು ಪ್ರಶಂಸಿಸುತ್ತದೆ ಹಾಗೂ ತಮ್ಮ ಈ ಕಾರ್ಯಶ್ರದ್ದೆಗೆ ನನ್ನ ಸ್ವಂತ ಹಣದಿಂದ ಸ್ವ ಇಚ್ಚೆಯಾಗಿ 1,001 ರೂ.ಗಳನ್ನು ನೀಡಿ ಶ್ಲಾಘಿಸುತ್ತದೆ ಎಂದು ಹೇಳಿದ್ದಾರೆ.
ಸಮೀಕ್ಷಾ ಕಾರ್ಯದಲ್ಲಿ ತಾವು ತೋರಿಸಿದ ಉತ್ಸಾಹ ಮತ್ತು ಪ್ರಯತ್ನ ಇತರರಿಗೂ ಮಾದರಿಯಾಗಿದ್ದು, ತಮ್ಮ ಪ್ರಾಮಾಣಿಕ ಪ್ರಯತ್ನ ಮತ್ತು ಸಹಕಾರ ಮುಂದಿನ ದಿನಗಳಲ್ಲಿಯೂ ಇದೇ ರೀತಿಯಕಾರ್ಯಕ್ಷಮತೆಯನ್ನು ಜಿಲ್ಲಾಡಳಿತವು ತಮ್ಮಿಂದ ಬಯಸುತ್ತದೆ ಎಂದು ತಮ್ಮ ಅಭಿನಂದನಾ ಪತ್ರದಲ್ಲಿ ಜಿಲ್ಲಾಧಿಕಾರಿಯವರು ತಿಳಿಸಿರುತ್ತಾರೆ.
ಅಭಿನಂದನಾ ಪತ್ರವನ್ನು ನೀಡುವ ಸಂದರ್ಭದಲ್ಲಿ ಶಾಂತಮ್ಮ ಪತಿ ಶಿವರಾಜ್ ಸಹ ಉಪಸ್ಥಿತರಿದ್ದರು. ಕರ್ನಾಟಕ ಸರ್ಕಾರ ಸೆಪ್ಟೆಂಬರ್ 22ರಿಂದ ಸಮೀಕ್ಷೆಯನ್ನು ಕೈಗೊಂಡಿದ್ದು, ಅಕ್ಟೋಬರ್ 7ರೊಳಗೆ ಪೂರ್ಣಗೊಳಿಸಬೇಕು ಎಂದು ಗಡುವು ನೀಡಲಾಗಿದೆ.