ಧಾರವಾಡ: ಪ್ರಸಿದ್ಧ ಮನೋಹರ ಗ್ರಂಥಮಾಲದ ಸಂಪಾದಕ ಮತ್ತು ಪ್ರಕಾಶಕ, ಲೇಖಕ, ರಂಗಕರ್ಮಿ ಡಾ. ರಮಾಕಾಂತ ಜೋಶಿ ಅವರು ನಿಧನರಾಗಿದ್ದಾರೆ.
ಮನೋಹರ ಗ್ರಂಥಮಾಲಾ ಧಾರವಾಡದ ಸಂಪಾದಕ, ವ್ಯವಸ್ಥಾಪಕರು, ನಿವೃತ್ತ ಆಂಗ್ಲ ಪ್ರಾಧ್ಯಾಪಕ ಮತ್ತು ಬರಹಗಾರ ಡಾ.ರಮಾಕಾಂತ ಜೋಶಿಯವರು ವಯೋಸಹಜ ಅನಾರೋಗ್ಯದಿಂದಾಗಿ ಹುಬ್ಬಳ್ಳಿಯ ಖಾಸಗಿ ಆಸ್ಪತ್ರೆಯಲ್ಲಿ ಇಂದು ನಿಧನರಾದರು, ಅವರಿಗೆ 89 ವರ್ಷ ವಯಸ್ಸಾಗಿತ್ತು. ಮೃತರ ಅಂತ್ಯಕ್ರಿಯೆಯನ್ನು ನಾಳೆ (18.05.2025, ರವಿವಾರ.) ಬೆಳಿಗ್ಗೆ 10.00 ಗಂಟೆಗೆ ಧಾರವಾಡ ಹೊಸಯಲ್ಲಾಪುರ ರುದ್ರಭೂಮಿಯಲ್ಲಿ ನಡೆಯಲಿದ್ದು ಬೆಳಿಗ್ಗೆ 09.00 ರಿಂದ 10.00 ರ ವರೆಗೆ ಧಾರವಾಡದ ಮಂಗಳವಾರ ಪೇಟೆ, ಮೆಣಸಿನಕಾಯಿ ಓಣಿಯ ಅವರ ಸ್ವಗೃಹದಲ್ಲಿ ಸಾರ್ವಜನಿಕ ದರ್ಶನಕ್ಕೆ ವ್ಯವಸ್ಥೆ ಮಾಡಲಾಗಿದೆ.
ಮನೋಹರ ಗ್ರಂಥಮಾಲಾ ಸ್ಥಾಪಕರಾದ ಶ್ರೀ ಜಿ ಬಿ ಜೋಶಿಯವರ ಮಗನಾದ ಡಾ.ರಮಾಕಾಂತ ಜೋಶಿಯವರು ಗುಜರಾತಿನ ಆನಂದ ವಿಶ್ವವಿದ್ಯಾಲಯದಿಂದ ಸ್ನಾತಕೋತ್ತರ ಮತ್ತು ಪಿಎಚ್ ಡಿ ಪದವಿ ಪಡೆದ ರಮಾಕಾಂತ ಜೋಶಿಯವರು ಧಾರವಾಡದ ಕಿಟೆಲ್ ಕಾಲೇಜಿನಲ್ಲಿ ಇಂಗ್ಲಿಷ್ ಪ್ರಾಧ್ಯಾಪಕರಾಗಿ ಕೆಲಸ ಮಾಡಿದ್ದಾರೆ ಮತ್ತು ವಿಭಾಗದ ಮುಖ್ಯಸ್ಥರಾಗಿದ್ದರು. ಹಲವಾರು ಗ್ರಂಥಗಳ ಸಂಪಾದನೆ ಮಾಡಿದ್ದರು ಮತ್ತು ಅನುವಾದ ಕಾರ್ಯವನ್ನು ಸಹ ಮಾಡಿದ್ದರು. ದೀನಾನಾಥ ಮಲ್ಹೋತ್ರಾ ಅವರು ಇಂಗ್ಲಿಷಿನಲ್ಲಿ ಬರೆದ BOOK PUBLISHING ಕೃತಿಯನ್ನು ಕನ್ನಡಕ್ಕೆ ಅನುವಾದಿಸಿದ್ದು, ಪುಸ್ತಕ ಪ್ರಕಾಶನ ಪ್ರಪಂಚದಲ್ಲಿ ಅದೊಂದು ಅತ್ಯಂತ ಪ್ರಮುಖ ಕೃತಿ ಎನಿಸಿದೆ. 1993 ಡಿಸೆಂಬರ್ 26 ರಂದು ಜಿ ಬಿ ಜೋಶಿಯವರು ನಿಧನರಾದ ನಂತರ ಮನೋಹರ ಗ್ರಂಥಮಾಲಾದ ಸಂಪೂರ್ಣ ಜವಾಬ್ದಾರಿ ಹೊತ್ತುಕೊಂಡು ಯಶಸ್ವಿಯಾಗಿ ನಡೆಸಿದರು. ಅನೇಕ ಪ್ರಶಸ್ತಿಗಳಿಗೆ, ಮಾನ ಸನ್ಮಾನಗಳಿಗೆ ಭಾಜನರಾಗಿದ್ದಾರೆ. ದಿಲ್ಲಿಯ ಭಾರತೀಯ ಪ್ರಕಾಶಕರ ಒಕ್ಕೂಟದ ‘ವಿಶಿಷ್ಟ ಪ್ರಕಾಶಕ ಪ್ರಶಸ್ತಿ’, ‘ಆಳ್ವಾ ನುಡಿಸಿರಿ’ ಪ್ರಶಸ್ತಿ, ‘ಕನಕದಾಸ ಪ್ರಶಸ್ತಿ’, ಕನ್ನಡ ಪುಸ್ತಕ ಪ್ರಾಧಿಕಾರದ ೨೦೦೭ ರ ‘ಅತ್ಯುತ್ತಮ ಪ್ರಕಾಶನ’ ಪ್ರಶಸ್ತಿ, ಕನ್ನಡ ಸಾಹಿತ್ಯ ಪರಿಷತ್ತಿನ ‘ಅತ್ಯುತ್ತಮ ಪ್ರಕಾಶನ ಸಂಸ್ಥೆ’ ಹೀಗೆ ಅನೇಕ ಪ್ರಶಸ್ತಿಗಳಿಗೆ ಭಾಜನರಾಗಿದ್ದಾರೆ. ಧಾರವಾಡ ಜಿಲ್ಲೆಯ ಕನ್ನಡ ಸಾಹಿತ್ಯ ಸಮ್ಮೇಳನದ ಅಧ್ಯಕ್ಷರೂ ಆಗಿದ್ದರು.