ಹುಬ್ಬಳ್ಳಿ: ರಂಗಭೂಮಿಯ ಹಿರಿಯ ಕಲಾವಿದೆ ಹುಬ್ಬಳ್ಳಿಯ ತೆರೇಸಮ್ಮ ಡಿಸೋಜಾ (91) ಅನಾರೋಗ್ಯದಿಂದ ಭಾನುವಾರ ಇಲ್ಲಿನ ತಮ್ಮ ನಿವಾಸದಲ್ಲಿ ನಿಧನರಾದರು.
ಅವರಿಗೆ ರಂಗಭೂಮಿ ಕಲಾವಿದರಾದ ಬಾಬು ಮೈಸೂರು, ಫ್ರಾನ್ಸಿಸ್ ಮೈಸೂರು, ಹೆಲನ್ ಮೈಸೂರು ಮಕ್ಕಳಿದ್ದು, ಇನ್ನೊಬ್ಬ ಪುತ್ರಿ ಗೀತಾ ಖಾಸಗಿ ಉದ್ಯೋಗಿಯಾಗಿದ್ದಾರೆ.
ತೆರೇಸಮ್ಮ ಅವರು ಗುಬ್ಬಿ ವೀರಣ್ಣ, ಎಚ್. ಕೆ. ಯೋಗಾನರಸಿಂಹ, ಸುಳ್ಳದ ದೇಸಾಯಿ ಅವರ ಕಂಪನಿಗಳಲ್ಲಿ ಕಲಾವಿದೆಯಾಗಿದ್ದರು.
ಹರಕೆ, ಕರಿಮಾಯಿ, ನೆಂಟರು ಗಂಟು ಕಳ್ಳರು, ಮಾಗಿಯ ಕನಸು, ಹುಲಿ ಹೆಜ್ಜೆ, ಪಡುವಾರಳ್ಳಿ ಪಾಂಡವರು, ಅಮೃತ ಘಳಿಗೆ, ಸಂಗ್ಯಾಬಾಳ್ಯಾ, ಸಿಂಧೂರ ಲಕ್ಷ್ಮಣ, ಪತಿತ ಪಾವನಿ ಹಲವಾರು ಸಿನಿಮಾಗಳಲ್ಲಿ ನಟಿಸಿದ್ದರು.
ಅವರು ಹುಟ್ಟಿದ್ದು ಹಾಸನ ಜಿಲ್ಲೆಯ ಅರಸೀಕೆರೆ ತಾಲೂಕಿನ ಬೊಮ್ಮನಹಳ್ಳಿ ಎಂಬ ಪುಟ್ಟ ಗ್ರಾಮದಲ್ಲಿ. ೧೯೭೧ರಲ್ಲಿ ಹುಬ್ಬಳ್ಳಿಯಲ್ಲಿ ನೆಲೆಸಿದರು. ಉತ್ತರ ಕರ್ನಾಟಕದಲ್ಲಿ ಮಹಿಳಾ ನಾಟಕ ತಂಡವನ್ನು ಕಟ್ಟಿದ ಪ್ರಥಮ ಕಲಾವಿದೆ ಅವರು. ಕರ್ನಾಟಕ ನಾಟಕ ಅಕಾಡೆಮಿ ಪ್ರಶಸ್ತಿ, ಕಿತ್ತೂರು ಚೆನ್ನಮ್ಮ ಪ್ರಶಸ್ತಿ, ಗುಬ್ಬಿ ವೀರಣ್ಣ ಪ್ರಶಸ್ತಿ ಪುರಸ್ಕೃತರಾಗಿದ್ದರು.
ಅವರ ಅಂತಿಮ ದರ್ಶನವು ಹುಬ್ಬಳ್ಳಿಯ ಸುಳ್ಳದ ರಸ್ತೆಯ ಮನೋಜ್ ಪಾರ್ಕಿನ ಎರಡನೇ ಮೇನ್, ಎಂಟನೇ ಅಡ್ಡರಸ್ತೆಯಲ್ಲಿರುವ ಅವರ ಸ್ವಗೃಹದಲ್ಲಿ ಸೋಮವಾರ ಬೆಳಗ್ಗೆ ೧೦ರಿಂದ ಮಧ್ಯಾಹ್ನ ಒಂದರವರೆಗೆ ಇರುತ್ತದೆ. ನಂತರ ಎರಡು ಗಂಟೆಗೆ ಹುಬ್ಬಳ್ಳಿಯ ಮುಕ್ತಿಧಾಮದಲ್ಲಿ ಅಂತ್ಯಕ್ರಿಯ ನಡೆಯಲಿದೆ.