ಶಿವಮೊಗ್ಗ: ಶಾಲಾ ಪ್ರವೇಶಾತಿ ನೀಡಲು ಬಾಲಕಿಯ ತಂದೆಯಿಂದ ಲಂಚ ಪಡೆಯುತ್ತಿದ್ದ ಕಿತ್ತೂರು ರಾಣಿ ಚನ್ನಮ್ಮ ವಸತಿ ಶಾಲೆಯ ಪ್ರಾಂಶುಪಾಲರೊಬ್ಬರು ಲೋಕಾಯುಕ್ತ ಪೊಲೀಸರ ಬಲೆಗೆ ಬಿದ್ದಿರುವ ಘಟನೆ ಸೋಮವಾರ ಭದ್ರಾವತಿ ತಾಲೂಕಿನಲ್ಲಿ ನಡೆದಿದೆ.
ಭದ್ರಾವತಿ ತಾಲೂಕಿನ ತಿಪ್ಲಾಪುರ ಕ್ಯಾಂಪ್ ನಿವಾಸಿ, ಎಳನೀರು ವ್ಯಾಪಾರಿ ಮೇಘರಾಜ.ಸಿ ಎಂಬುವವರು ತಮ್ಮ ಮಗಳನ್ನು ಭದ್ರಾವತಿ ತಾಲೂಕು ಹುಣಸೆಕಟ್ಟೆ ಗ್ರಾಮದಲ್ಲಿರುವ ಕಿತ್ತೂರು ರಾಣಿ ಚನ್ನಮ್ಮ ವಸತಿ ಶಾಲೆಗೆ 7ನೇ ತರಗತಿಗೆ ಸೇರಿಸಲು ಬಯಸಿದ್ದರು. ಈ ವೇಳೆ ಶಾಲೆಯ ಪ್ರಾಂಶುಪಾಲರಾದ ನಾಮದೇವ್ ಅವರು `ಡ್ರಮ್ ಸೆಟ್’ ಕೊಡುವ ನೆಪದಲ್ಲಿ 20,000 ರೂ. ಲಂಚ ನೀಡುವಂತೆ ಬೇಡಿಕೆ ಇಟ್ಟಿದ್ದರು.
ಲಂಚ ನೀಡಲು ಇಷ್ಟವಿಲ್ಲದ ಮೇಘರಾಜ್ ಅವರು ಜು. 18ರಂದು ಶಿವಮೊಗ್ಗ ಲೋಕಾಯುಕ್ತ ಪೊಲೀಸ್ ಠಾಣೆಗೆ ತೆರಳಿ ದೂರು ನೀಡಿದ್ದರು. ಈ ದೂರಿನನ್ವಯ ಭ್ರಷ್ಟಾಚಾರ ಪ್ರತಿಬಂಧಕ ಕಾಯ್ದೆ-1988 (ತಿದ್ದುಪಡಿ ಕಾಯಿದೆ-2018) ಕಲಂ 7ರ ಅಡಿಯಲ್ಲಿ ಪ್ರಕರಣ ದಾಖಲಿಸಿಕೊಳ್ಳಲಾಗಿತ್ತು.
ದೂರುದಾರರು ಮುಂಗಡವಾಗಿ 10,000 ರೂ. ಹಣವನ್ನು ನೀಡುವುದಾಗಿ ಒಪ್ಪಿಕೊಂಡಿದ್ದರು. ಅದರಂತೆ ಜು. 20ರಂದು ಮಧ್ಯಾಹ್ನ 12.20ಕ್ಕೆ ಹುಣಸೆಕಟ್ಟೆಯ ವಸತಿ ಶಾಲೆಯ ತಮ್ಮ ಕೊಠಡಿಯಲ್ಲಿ ಪ್ರಾಂಶುಪಾಲ ನಾಮದೇವ್ ಅವರು ದೂರುದಾರರಿಂದ 10,000 ರೂ. ಲಂಚ ಪಡೆಯುತ್ತಿದ್ದಾಗ ಲೋಕಾಯುಕ್ತ ಪೊಲೀಸರು ದಾಳಿ ನಡೆಸಿ ವಶಕ್ಕೆ ಪಡೆದಿದ್ದಾರೆ.
ಪೊಲೀಸರು ಲಂಚದ ಹಣವನ್ನು ಜಪ್ತಿ ಮಾಡಿಕೊಂಡಿದ್ದು, ಲೋಕಾಯುಕ್ತ ಪೊಲೀಸ್ ಠಾಣೆಯ ಇನ್ಸ್ಪೆಕ್ಟರ್ ರುದ್ರೇಶ್.ಕೆ.ಪಿ. ಅವರು ಪ್ರಕರಣದ ತನಿಖೆ ಕೈಗೊಂಡಿದ್ದಾರೆ ಎಂದು ಕರ್ನಾಟಕ ಲೋಕಾಯುಕ್ತ ಶಿವಮೊಗ್ಗ ಪೊಲೀಸ್ ಅಧೀಕ್ಷಕರು ತಿಳಿಸಿದ್ದಾರೆ.






















