ಕೃಪಣತೆ ಬಿಟ್ಟು ದಾನಿಯಾಗು

ಈ ಪ್ರಪಂಚದಲ್ಲಿ ಕೆಲವರಿಗೆ ಧನಗಳಿಸುವುದು ಮಾತ್ರ ಗೊತ್ತು ತಾನೂ ಉಪಭೋಗಿಸುವುದಿಲ್ಲ. ಇನ್ನೊಬ್ಬರಿಗೆ ಕೊಡುವುದಂತೂ ದೂರದ ಮಾತು. ಧನಸಂಗ್ರಹದಲ್ಲೇ ಅವರಿಗೆ ಏನೋ ಒಂದು ಬಗೆಯ ನೆಮ್ಮದಿ. ಗಳಿಸಿ ಉಳಿಸುವುದಂತೂ ಅವರಿಗೆ ಎಲ್ಲಿಲ್ಲದ ಹರ್ಷ ತರುತ್ತದೆ. ತಾನು ಉಣ್ಣದ ಪರರಿಗಿಕ್ಕದ ಧನವಿದ್ದೇತಕೆ? ಎಂದು ಪ್ರಶ್ನಿಸುವ ಮೂಲಕ ದಾಸರು ಕೃಪಣರ ಧನದ ವ್ಯರ್ಥತೆಯನ್ನು ಬಣ್ಣಿಸಿದ್ದಾರೆ.
ಒಂದು ಊರಲ್ಲಿ ಬದುಕುತ್ತಿದ್ದ ಗಂಡ ಹೆಂಡತಿ ಇಬ್ಬರೂ ಕೃಪಣ ಪಿತಾಮಹರು. ಜಿಪುಣತನದಲ್ಲಿ ಇಬ್ಬರೂ ಒಬ್ಬರಿಗೊಬ್ಬರು ಹೇಳಿ ಮಾಡಿಸಿದ ಜೋಡಿ, ಗಂಡ ಪರ ಊರಿಗೆ ಹೊರಟಿದ್ದ. ತನ್ನ ಸಾಮಾನು ಪ್ಯಾಕ್ ಮಾಡಿಕೊಳ್ಳುವುದಕ್ಕಾಗಿ ದೀಪ ಹಚ್ಚಿಕೊಂಡಿದ್ದ. ಅವಸರದಲ್ಲಿ ದೀಪ ಆರಿಸದೇ ಹೊರನಡೆದ, ಮೂರು ಮೈಲಿ ದಾರಿ ನಡೆದು ಬಂದನಂತರ ದೀಪ ಆರಿಸದೇ ಬಂದುದರ ನೆನಪಾಗಿ ಆರಿಸಿ ಬರಲು ಮರಳಿ ಮನೆ ಕಡೆಗೆ ತಿರುಗಿದ. ಬಾಗಿಲು ತಟ್ಟಿ ಪತ್ನಿಯನ್ನು ಎಚ್ಚರಿಸಿದ. ಬಂದು ಬಾಗಿಲ ತೆರೆದ ಅವಳು “ಊರಿಗೆ ಹೊರಟವರು ತಿರುಗಿ ಯಾಕೆ ಬಂದ್ರಿ? ಏನಾದರೂ ಮರೆತು ಹೋಗಿದ್ದಿರೇನು?” ಎಂದು ಕೇಳಿದಳು. ಒಳಗೆ ಬಂದ ಅವನು “ಹೌದು ಹಚ್ಚಿದ ದೀಪ ಆರಿಸುವುದನ್ನು ಮರೆತಿದ್ದೆ, ನೀ ಆರಿಸಿದಿಯೋ ಇಲ್ಲವೋ, ನೋಡಿ ಹೇಳಿ ಹೋಗೋಣವೆಂದು ಬಂದೆ.” ಎಂದ. ಆಗವಳು ನಗುತ್ತ ಎದೆ ತಟ್ಟಿ “ನಾ ನಿಮ್ಮ ಹೆಂಡತಿ! ನೀವು ಇನ್ನೂ ಹೊಸ್ತಿಲ ದಾಟಿರಲಿಕ್ಕಿಲ್ಲ ನಾನಾಗಲೇ ದೀಪ ಆರಿಸಿದ್ದೆ, ಅದಿರಲಿ ನೀವು ಎಷ್ಟು ಮೈಲಿ ಹೋಗಿ ತಿರುಗಿ ಬಂದ್ರಿ’ ಎಂದು ಕೇಳಿದಳು. ಆಗವನು “ಹೆಚ್ಚೇನಿಲ್ಲ ಮೂರು ಮೈಲಿ’ ಎಂದ. ಅದಕ್ಕೆ ಅವಳು “ಏನ್ರಿ ಹೋಗುವಾಗ ಮೂರು ಮೈಲು ಬರುವಾಗ ಮೂರು ಮೈಲು ಹಿಂಗ ಒಟ್ಟು ಆರು ಮೈಲು ನಡೆದಾಡಿದ್ರಿ ಕಾಲೊಳಗಿನ ಚಪ್ಪಲ್ಲು ಎಷ್ಟು ಸವೆದವು! ಎಂದಿದ್ದಕ್ಕೆ ಅವನು ಬಗಲಲ್ಲಿ ಹಿಡಿದುಕೊಂಡು ಬಂದಿರುವೆ ನೋಡಿಲ್ಲಿ” ಎಂದು ಕಂಕುಳದಲ್ಲಿಯೇ ಹಿಡಿದು ತಂದ ಚಪ್ಪಲ್ಲನ್ನು ತೋರಿಸಿದನಂತೆ.
ಇಂತಹ ಕೃಪಣರು ಇನ್ನೊಬ್ಬರಿಗೆ ನೀಡುವುದೂ ಇಲ್ಲ, ತಾವೂ ಉಪಭೋಗಿಸುವುದಿಲ್ಲ. ಗಳಿಸಿದ್ದನ್ನೆಲ್ಲ ಸಂಗ್ರಹಿಸಿಯೇ ಒಂದೆಡೆ ಇಟ್ಟು ಕೊನೆಗೆ ಎಲ್ಲವನ್ನು ಇಲ್ಲಿಯೇ ಬಿಟ್ಟು ಮೃತ್ಯುವಿಗೆ ತುತ್ತಾಗುತ್ತಾರೆ. ಅವರು ಗಳಿಸಿದ್ದು ಕೊನೆಗೆ ಇನ್ನೊಬ್ಬರ ಪಾಲಾಗುತ್ತದೆ. ಈ ಕಾರಣಕ್ಕಾಗಿಯೇ ವ್ಯಂಗ್ಯೋಕ್ತಿಕಾರರು ಕೃಪಣನಂಥ ದಾನಿ ಮತ್ತಾರೂ ಅಲ್ಲ ಎಂದು ಹೇಳುತ್ತಾರೆ. ಏಕೆಂದರೆ ಸಾಮಾನ್ಯವಾಗಿ ದಾನ ಮಾಡುವವನು ತಾನು ಉಪಯೋಗಿಸಿ ಉಳಿದುದನ್ನು ದಾನ ಮಾಡುತ್ತಾನೆ. ಆದರೆ ಕೃಪಣ ತಾನು ತನಗಾಗಿ ಸಹ ಉಪಯೋಗಿಸದೇ ಎಲ್ಲವನ್ನು ಪರರಿಗೆ ಬಿಟ್ಟು ಹೋಗುತ್ತಾನೆ. ಕೊಡಬೇಕೆಂಬ ಭಾವವಿಲ್ಲದೆ, ಒಯ್ಯಲಿಕ್ಕಾಗದೆ ಅನಿವಾರ್ಯವಾಗಿ ಬಿಟ್ಟು ಹೋದದ್ದನ್ನು ಇನ್ನೊಬ್ಬರು ತೆಗೆದುಕೊಂಡಾಗ ಅದು ದಾನವಾಗಲಾರದು ಆ ಮಾತು ಬೇರೆ.
ದಾನಂ ಭೋಗೋ ನಾಶಶ್ಚ ಗತಯೋ ಭವಂತಿ ವಿತ್ತಸ್ಯ | ಯೋ ನ ದದಾತಿ ನ ಭುಂಕ್ತೇ ತಸ್ಯ ತೃತೀಯಾ ಗತಿರ್ಭವತಿ ||
ಧನದ ಗತಿ ತಿಳಿಸುವ ಇದೊಂದು ಸುಭಾಷಿತ, ದಾನ, ಭೋಗ ಮತ್ತು ನಾಶ ಎಂಬುದಾಗಿ ದುಡ್ಡಿನ ಉಪಯೋಗದ ಮೂರೇ ದಾರಿಗಳು. ದಾನ ಮಾಡಿದವನ ಮತ್ತು ತಾನೂ ಉಪಯೋಗ ಮಾಡದವನ ಸಂಪತ್ತು ಮೂರನೆಯ ದಾರಿಯನ್ನು ಕಂಡುಕೊಳ್ಳುತ್ತದೆ. ಅಂದರೆ ನಾಶವಾಗಿ ಹೋಗುತ್ತದೆ. ದಾನ ಧನದ ಉತ್ತಮ ಉಪಯೋಗ, ಉಪಭೋಗ ಮಧ್ಯಮ ಉಪಯೋಗ, ವಿನಾಶ ಕನಿಷ್ಠ ಉಪಯೋಗ. ಅಂತೆಯೇ “ಕೊಡಬೇಕುತ್ತಮಂಗೆ ಮಗಳಂ, ಸತ್ಪಾತ್ರಕ್ಕೆ ದಾನಮಂ’ ಎಂದಿರುವರು ಅನುಭಾವಿಗಳು.
ಕೊಟ್ಟದ್ದು ತನಗೆ ಉಳಿಯುತ್ತದೆ. ಸಂಗ್ರಹಿಸಿ ಇಟ್ಟಿದ್ದು ಪರರಿಗೆ ದಕ್ಕುತ್ತದೆ. ನಾವು ಗಳಿಸಿದ್ದನ್ನು ನಮ್ಮೊಂದಿಗೆ ಒಯ್ಯಬೇಕಾದರೆ ದಾನವೊಂದೇ ಅದಕ್ಕೆ ದಾರಿ. ಅಮೇರಿಕಾದಲ್ಲಿ ಭಾರತದ ಹಣ ಚಲಾವಣೆಯಾಗುವುದಿಲ್ಲ. ಭಾರತೀಯ ಪ್ರಜೆ ಅಲ್ಲಿಗೆ ಹೋಗುವಾಗ ಮೊದಲು ಭಾರತದ ರೂಪಾಯಿಗಳನ್ನು ಕೊಟ್ಟು ಅಮೇರಿಕಾದ ಡಾಲರ್ ಖರೀದಿಸಬೇಕಾಗುತ್ತದೆ. ಅವುಗಳಿಗೆ ಅಲ್ಲಿ ಬೆಲೆ. ಇಲ್ಲಿಯೇ ಭೂಮಿಯಲ್ಲಿಯೇ ಇರುವ ಅಮೇರಿಕಾದಲ್ಲಿ ನಮ್ಮ ದುಡ್ಡು ನಡೆಯುವುದಿಲ್ಲವೆಂದ ಮೇಲೆ ಪರಲೋಕದಲ್ಲಿ ಹೇಗೆ ನಡೆಯುತ್ತದೆ.
ಅಮೇರಿಕಾಕ್ಕೆ ಹೋಗುವವನು ಮೊದಲು ಭಾರತದ ರೂಪಾಯಿಗಳಿಗೆ ಡಾಲರ್‌ಗಳನ್ನು ಬದಲಾಯಿಸಿ ಕೊಡುವ ಆಫೀಸಿಗೆ ಹೋಗಿ ಅಲ್ಲಿ ರೂಪಾಯಿಗಳನ್ನು ಕೊಟ್ಟು ಪ್ರತಿಯಾಗಿ ಡಾಲರ್ ಪಡೆದು ನಂತರ ಅಮೇರಿಕಾಕ್ಕೆ ಹೋದರೆ ಅಲ್ಲಿ ಈ ಡಾಲರ್‌ಗಳು ಬೆಲೆಬಾಳುತ್ತವೆ. ಇದರಂತೆ ನಾವು ಗಳಿಸಿದ ಸಂಪತ್ತನ್ನು ಮರುಜನ್ಮಕ್ಕೆ ಅಥವಾ ಪರಲೋಕಕ್ಕೆ ಒಯ್ಯಬೇಕಾದರೆ ಅದನ್ನು ಪುಣ್ಯದ ರೂಪದಲ್ಲಿ ಪರಿವರ್ತಿಸಿಕೊಳ್ಳಬೇಕಾಗುತ್ತದೆ. ಸಂಪತ್ತು ದಾನದಿಂದಲೇ ಪುಣ್ಯವಾಗಿ ಪರಿವರ್ತಿತವಾಗುತ್ತದೆ.