ಸಂಕ ವರದಿಗಾರ ಮಾಲತೇಶ, ಸಾಯಿರಾಮ್‌ಗೆ ಪ್ರಶಸ್ತಿ

0
22

ಹುಬ್ಬಳ್ಳಿ: ಕರ್ನಾಟಕ ರಾಜ್ಯ ಕಾರ್ಯನಿರತ ಪತ್ರಕರ್ತರ ಸಂಘದ ಧಾರವಾಡ ಜಿಲ್ಲಾ ಘಟಕದವತಿಯಿಂದ ಜುಲೈ ೨೯ರಂದು ಬೆಳಿಗ್ಗೆ ೧೦ಕ್ಕೆ ಸವಾಯಿ ಗಂಧರ್ವ ಸಭಾಂಗಣದಲ್ಲಿ ಪತ್ರಿಕಾ ದಿನಾಚರಣೆ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ ಎಂದು ಸಂಘದ ಅಧ್ಯಕ್ಷ ಲೋಚನೇಶ ಹೂಗಾರ ಹೇಳಿದರು.
ನಗರದಲ್ಲಿ ಬುಧವಾರ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಪ್ರಸ್ತಕ ವರ್ಷ ಮಾಧ್ಯಮ ಮಿತ್ರರಿಗಾಗಿ ವೃತ್ತಿಪರತೆಯನ್ನು ಉತ್ತೇಜಿಸುವ ಹಿನ್ನೆಲೆಯಲ್ಲಿ ವರದಿ, ಲೇಖನ, ಛಾಯಾಚಿತ್ರ, ಪುಟವಿನ್ಯಾಸ ಇತ್ಯಾದಿ ವಿಭಾಗದಲ್ಲಿ ಸ್ಪರ್ಧೆಗೆ ಅರ್ಜಿಗಳನ್ನು ಆಹ್ವಾನಿಸಲಾಗಿತ್ತು. ವಿವಿಧ ವಿಭಾಗಗಳಲ್ಲಿ ಪ್ರಶಸ್ತಿ ವಿಜೇತರಿಗೆ ಅಂದು ಪ್ರಶಸ್ತಿಗಳನ್ನು ಪ್ರದಾನ ಮಾಡಲಾಗುವುದು ಎಂದರು.
ಅತ್ಯುತ್ತಮ ನಗರ ವರದಿಗಾರಿಕೆ ಪ್ರಶಸ್ತಿಯಾದ ಕಮಲವ್ವ ಸೋಮಶೇಖರಪ್ಪ ಬುರ್ಲಬುಡ್ಡಿ ವರದಿಗಾರಿಕೆ ಪ್ರಶಸ್ತಿಗೆ ಕೃಷ್ಣಿ ಶಿರೂರು (ಪ್ರಜಾವಾಣಿ), ಲಿಂ. ಮುರಿಗೆಮ್ಮ ಬಸಪ್ಪ ಹೂಗಾರ ವರದಿಗಾರಿಕೆ ಪ್ರಶಸ್ತಿಗೆ ಶಶಿಧರ ಬುದ್ನಿ (ಉದಯವಾಣಿ) ಆಯ್ಕೆಯಾಗಿದ್ದಾರೆ ಎಂದು ಹೇಳಿದರು.
ಅತ್ಯುತ್ತಮ ಲೇಖನ ಪ್ರಶಸ್ತಿಗೆ (ನಗರ) ಸುಲೇಮಾನ ಅಬ್ದುಲ್ ಅಜೀಜ್‌ಸಾಬ್ ಮುನವಳ್ಳಿ(ಪೊಲೀಸ್ ಇಲಾಖೆ) ಲೇಖನ, ಅಜೀಜ್ ಅಹ್ಮದ ಬಳಗಾನೂರು. (ಕನ್ನಡಪ್ರಭ), ಕೃಷಿ ಲೇಖನಕ್ಕೆ ವಿರೂಪಾಕ್ಷ ಗುದ್ನಯ್ಯನವರಮಠ, ಜಿತೇಂದ್ರ ದಯಾಳಜಿ ಮೆಜೇಥಿಯಾ ಗ್ರಾಮೀಣ ವರದಿಗಾರಿಕಾ ಪ್ರಶಸ್ತಿಗೆ ಶ್ರೀಶೈಲ ಗೌರಿಮಠ (ಉದಯವಾಣಿ), ಸಾಹಿತಿ ಸಂಗಮೇಶ ಹಂಡಿಗಿ ಸಾಹಿತ್ಯ ಪ್ರತಿಷ್ಠಾನ ಗ್ರಾಮೀಣ ಲೇಖನ ಪ್ರಶಸ್ತಿಗೆ ಪ್ರಹ್ಲಾದ ಗೊಲ್ಲಗೌಡರ (ವಿಜಯ ಕರ್ನಾಟಕ) ಕಲಘಟಗಿ ಭಾಜನರಾಗಿದ್ದಾರೆ ಎಂದರು.
ದಿ. ರಾಮುಶೆಟ್ಟಿ ಆಂಗ್ಲ ವರದಿಗಾರಿಕಾ ಪ್ರಶಸ್ತಿಗೆ ಗಿರೀಶ ಪಟ್ಟಣಶೆಟ್ಟಿ (ದಿ. ಹಿಂದು), ಈ ಬಾರಿ ಘೋಷಣೆಯಾದ ಲೀಲಾವತಿ ವಿಶ್ವನಾಥ ಶೆಟ್ಟಿ ತನಿಖಾ ವರದಿ ಪ್ರಶಸ್ತಿಗೆ ಸಂಯುಕ್ತ ಕರ್ನಾಟಕ ದಿನಪತ್ರಿಕೆ ವರದಿಗಾರ ಮಾಲತೇಶ ಹೂಲಿಹಳ್ಳಿ ಅವರ ಏರ್‌ಪೋರ್ಟ್ ಎನ್‌ಓಸಿ ಪಾಲಿಕೆಯಲ್ಲಿ ಬ್ರಹ್ಮಾಂಡ ಭ್ರಷ್ಟಾಚಾರ' ಶೀರ್ಷಿಕೆಯಡಿ ಪ್ರಕಟವಾದ ವರದಿಗೆ ಪ್ರಶಸ್ತಿ ಲಭಿಸಿದೆ. ಡಾ. ಬಿ. ಎಫ್ ದಂಡಿನ ಅತ್ಯುತ್ತಮ ಪುಟ ವಿನ್ಯಾಸ ಪ್ರಶಸ್ತಿಸಂಯುಕ್ತ ಕರ್ನಾಟಕ’ ಪತ್ರಿಕೆಯ ಸಾಯಿರಾಮ ಪವಾರ ಪುಟ ವಿನ್ಯಾಸ ಮಾಡಿದ `ಸೋರುತಿಹವು ಸರಕಾರಿ ಶಾಲೆಗಳು’ ಪುಟಕ್ಕೆ ಪ್ರಶಸ್ತಿ ದೊರೆತಿದೆ ಎಂದು ಹೇಳಿದರು.
ಸಾಹಿತಿ ದಿ. ಎಂ.ಡಿ. ಗೋಗೇರಿ ಸ್ಮರಣೆಯ ಉತ್ತಮ ಛಾಯಾಚಿತ್ರ ಪ್ರಶಸ್ತಿಗೆ ಸಂತೋಷ ಈಳಿಗೇರ (ವಿಜಯ ಕರ್ನಾಟಕ), ತೀರ್ಪುಗಾರರ ಮೆಚ್ಚುಗೆ ಪ್ರಶಸ್ತಿಗೆ ಈರಪ್ಪ ನಾಯ್ಕರ (ಕನ್ನಡ ಪ್ರಭ), ಟಿವಿ ವರದಿಗಾರಿಕಾ ಪ್ರಶಸ್ತಿಗೆ (ತನಿಖೆ) ವರದಿಗಾರ ಪ್ರಕಾಶ ಹಿರೇಮಠ, ಕ್ಯಾಮೆರಾಮನ್: ವಿನಾಯಕ ಪೂಜಾರಿ (ಆರ್.ಕನ್ನಡ), ಟಿವಿ ವರದಿಗಾರಿಕಾ ಪ್ರಶಸ್ತಿ (ಮಾನವೀಯ) ಪ್ರಶಸ್ತಿಗೆ ವರದಿಗಾರ ಸುನೀಲ ಪಾಟೀಲ, ಕ್ಯಾಮೆರಾಮನ್ ನಾರಾಯಣಗೌಡ ಪಾಟೀಲ (ಪಬ್ಲಿಕ್ ಟಿವಿ), ಉದಯೋನ್ಮುಖ ಪತ್ರಕರ್ತ ಪ್ರಶಸ್ತಿಗೆ ಹಜರತ್ ನದಾಫ್, ಸ್ತ್ರೀ ಸಬಲೀಕರಣ ವಿಶೇಷ ಪ್ರಶಸ್ತಿಗೆ ಲಕ್ಷ್ಮೀ ಮೊರಬ(ಹೊಸದಿಗಂತ) ಆಯ್ಕೆಯಾಗಿದ್ದಾರೆ ಎಂದರು.
ತೀರ್ಪುಗಾರರಾಗಿ ಸಂಯುಕ್ತ ಕರ್ನಾಟಕ ದಿನಪತ್ರಿಕೆಯ ನಿವೃತ್ತ ಕಾರ್ಯನಿರ್ವಹಕ ಸಂಪಾದಕ ಎನ್. ಮಂಜುನಾಥ ಭಟ್, ಹಿರಿಯ ಪತ್ರಕರ್ತರಾದ ಅರುಣಕುಮಾರ ಹಬ್ಬು, ಎಂ. ಎಂ. ಪಾಟೀಲ, ಛಾಯಾಚಿತ್ರ ತೀರ್ಪುಗಾರರಾಗಿ ಶಶಿ ಸಾಲಿ, ಪತ್ರಿಕಾ ಅಕಾಡೆಮಿ ಸದಸ್ಯ ವೆಂಕಟೇಶ, ಹಿರಿಯ ಪತ್ರಕರ್ತ ವಿಜಯ ಮಲಗಿಹಾಳ ಕಾರ್ಯ ನಿರ್ವಹಿಸಿದ್ದಾರೆ ಎಂದರು.
ಕಾರ್ಯಕ್ರಮದ ಅತಿಥಿಗಳಾಗಿ ಕರ್ನಾಟಕ ಮಾಧ್ಯಮ ಅಕಾಡೆಮಿ ಅಧ್ಯಕ್ಷೆ ಆಯೇಶಾ ಖಾನ್, ಜಿಲ್ಲಾ ಉಸ್ತುವಾರಿ ಸಚಿವ ಸಂತೋಷ ಲಾಡ್, ಕಾನಿಪ ರಾಜ್ಯ ಉಪಾಧ್ಯಕ್ಷ ಪುಂಡಲಿಕ್ ಬಾಳೋಜಿ, ರಾಜ್ಯ ಕಾರ್ಯಕಾರಣಿ ಸದಸ್ಯ ಗಣಪತಿ ಗಂಗೊಳ್ಳಿ ಪಾಲ್ಗೊಳ್ಳುವರು. ಇದೇ ಸಂದರ್ಭದಲ್ಲಿ ಜೀವಮಾನ ಪ್ರಶಸ್ತಿಗೆ ಭಾಜನರಾಗಿರುವ ಎಚ್.ಜಿ. ಬೆಳಗಾಂವಕರ್ ಹಾಗೂ ಅವ್ವ ಪತ್ರಕರ್ತೆ ಪ್ರಶಸ್ತಿಗೆ ಭಾಜರಾಗಿರುವ ಸುಧಾ ಶರ್ಮಾ ಚವತ್ತಿ ಇವರು ಉಪಸ್ಥಿತರಿರುವರು ಎಂದು ಹೇಳಿದರು.
ಸಂಘದ ಪ್ರಧಾನ ಕಾರ್ಯದರ್ಶಿ ಸುಶೀಲೇಂದ್ರಾಚಾರ್ಯ ಕುಂದರಗಿ, ಉಪಾಧ್ಯಕ್ಷ ವಿಜಯ ಹೂಗಾರ, ಕಾರ್ಯದರ್ಶಿ ವೀರೇಶ ಹಂಡಿಗಿ, ಖಜಾಂಚಿ ಬಸವರಾಜ ಹೂಗಾರ ಇದ್ದರು.

Previous articleಕೇಂದ್ರ ಬಜೆಟ್‌ನಲ್ಲಿ ಕರ್ನಾಟಕ ರೈಲ್ವೆ ಅಭಿವೃದ್ಧಿ ಯೋಜನೆಗೆ `7559 ಕೋಟಿ’
Next article೨೫, ೨೬ ರಂದು ಧಾರವಾಡ ಜಿಲ್ಲೆಯ ಶಾಲಾ ಕಾಲೇಜುಗಳಿಗೆ ರಜೆ