SK Home Ad
Home ಸುದ್ದಿ ದೇಶ ಕಡಲ್ಗಳ್ಳರ ಸಂಚು : ಸರಕು ಹಡಗನ್ನು ರಕ್ಷಿಸಿದ ಭಾರತೀಯ ನೌಕಾಪಡೆ

ಕಡಲ್ಗಳ್ಳರ ಸಂಚು : ಸರಕು ಹಡಗನ್ನು ರಕ್ಷಿಸಿದ ಭಾರತೀಯ ನೌಕಾಪಡೆ

0
87

ನವದೆಹಲಿ: ಭಾರತಕ್ಕೆ ಅಗತ್ಯವಾದ ನಿರ್ಣಾಯಕ ಸರಕುಗಳನ್ನು ಸಾಗಿಸುತ್ತಿದ್ದ ವ್ಯಾಪಾರಿ ಹಡಗಿನ ಮೇಲೆ ನಡೆದ ಕಡಲ್ಗಳ್ಳತನದ (Piracy) ಪ್ರಯತ್ನವನ್ನು ಭಾರತೀಯ ನೌಕಾಪಡೆ (Indian Navy) ಸಮಯೋಚಿತ ಕಾರ್ಯಾಚರಣೆಯ ಮೂಲಕ ವಿಫಲಗೊಳಿಸಿದೆ. ಏಡನ್ ಕೊಲ್ಲಿಯಲ್ಲಿ (Gulf of Aden) ಬುಧವಾರ ರಾತ್ರಿ ನಡೆದ ಈ ಕಾರ್ಯಾಚರಣೆಯಲ್ಲಿ ಐಎನ್‌ಎಸ್ ತ್ರಿಕಾಂಡ್ (INS Trikand) ಯುದ್ಧನೌಕೆ ಪ್ರಮುಖ ಪಾತ್ರವಹಿಸಿದೆ.

ಮೂಲಗಳ ಪ್ರಕಾರ, ಭಾರತದತ್ತ ಸಾಗುತ್ತಿದ್ದ ಎಂವಿ ಗೋಲ್ಡನ್ ಆರ್ಸೆನಲ್ (MV Golden Arsenal) ಹಡಗನ್ನು ಶಂಕಿತ ಕಡಲ್ಗಳ್ಳರು ಗುರಿಯಾಗಿಸಿಕೊಂಡು ಹಡಗನ್ನು ವಶಪಡಿಸಿಕೊಳ್ಳಲು ಪ್ರಯತ್ನಿಸಿದ್ದರು. ಹಡಗಿನಲ್ಲಿದ್ದ ಭಾರತೀಯ ಸಿಬ್ಬಂದಿಯೊಬ್ಬರು ಪರಿಸ್ಥಿತಿಯ ಗಂಭೀರತೆಯನ್ನು ಅರಿತು ತಕ್ಷಣವೇ ಹಡಗಿನ ಸುರಕ್ಷಿತ ಕೊಠಡಿಯಲ್ಲಿ ಆಶ್ರಯ ಪಡೆದು, ತುರ್ತು ಸಂವಹನ ವ್ಯವಸ್ಥೆಯ ಮೂಲಕ ಅಧಿಕಾರಿಗಳಿಗೆ ಮಾಹಿತಿ ರವಾನಿಸಿದರು. ಇದರೊಂದಿಗೆ ಪೈರಸಿ ವಿರೋಧಿ ತುರ್ತು ಪ್ರೋಟೋಕಾಲ್‌ಗಳನ್ನು ಸಕ್ರಿಯಗೊಳಿಸಲಾಯಿತು.

ಇದನ್ನೂ ಓದಿ: ಬೆಂಗಳೂರು: ಕಲ್ಲು ಕ್ವಾರಿ ದುರಂತ – ಬಂಡೆ ಕುಸಿದು 7 ಕಾರ್ಮಿಕರ ಸಾವು

ಆ ಸಂದರ್ಭದಲ್ಲಿ ಆ ಪ್ರದೇಶದಲ್ಲಿ ಗಸ್ತು ತಿರುಗುತ್ತಿದ್ದ ಭಾರತೀಯ ನೌಕಾಪಡೆಯ ಐಎನ್‌ಎಸ್ ತ್ರಿಕಾಂಡ್ ಯುದ್ಧನೌಕೆ ತಕ್ಷಣವೇ ಸಂಕಷ್ಟದ ಕರೆ ಸ್ವೀಕರಿಸಿ ವ್ಯಾಪಾರಿ ಹಡಗಿನತ್ತ ದೌಡಾಯಿಸಿತು. ಯುದ್ಧನೌಕೆ ಸಮೀಪಿಸುತ್ತಿರುವುದನ್ನು ಗಮನಿಸಿದ ಶಂಕಿತ ಕಡಲ್ಗಳ್ಳರು ಹಡಗಿನ ಸಂಪೂರ್ಣ ನಿಯಂತ್ರಣ ಪಡೆಯುವ ಮೊದಲೇ ಸ್ಥಳದಿಂದ ಪರಾರಿಯಾದರು ಎಂದು ಮೂಲಗಳು ತಿಳಿಸಿವೆ.

ಘಟನೆಯ ನಂತರ ಭಾರತೀಯ ನೌಕಾಪಡೆಯ ವಿಶೇಷ ಮೆರೈನ್ ಕಮಾಂಡೋ ಪಡೆಯಾದ ಮಾರ್ಕೋಸ್ (MARCOS) ಸಿಬ್ಬಂದಿ ಎಂವಿ ಗೋಲ್ಡನ್ ಆರ್ಸೆನಲ್ ಹಡಗನ್ನು ಏರಿ ಸಮಗ್ರ ಭದ್ರತಾ ಪರಿಶೀಲನೆ ನಡೆಸಿದರು. ಹಡಗಿನಲ್ಲಿದ್ದ ಎಲ್ಲ ಸಿಬ್ಬಂದಿ ಸುರಕ್ಷಿತರಾಗಿರುವುದು ಹಾಗೂ ಯಾವುದೇ ರೀತಿಯ ಬೆದರಿಕೆ ಉಳಿದಿಲ್ಲ ಎಂಬುದನ್ನು ಖಚಿತಪಡಿಸಿಕೊಂಡ ಬಳಿಕ ಹಡಗನ್ನು ಸುರಕ್ಷಿತ ಎಂದು ಘೋಷಿಸಲಾಯಿತು.

ಇದನ್ನೂ ಓದಿ: ನ್ಯಾಯಾಲಯಗಳಿಗೆ ಬಾಂಬ್ ಬೆದರಿಕೆ: ಚಿಕ್ಕಮಗಳೂರು, ಮೈಸೂರು ಕೋರ್ಟ್‌ಗಳಲ್ಲಿ ತೀವ್ರ ಪರಿಶೀಲನೆ

ಮೂಲಗಳ ಪ್ರಕಾರ, ಎಂವಿ ಗೋಲ್ಡನ್ ಆರ್ಸೆನಲ್ ಭಾರತಕ್ಕೆ ಅಗತ್ಯವಿರುವ ಮಹತ್ವದ ಸರಕುಗಳನ್ನು ಸಾಗಿಸುತ್ತಿದ್ದು, ಭಾರತೀಯ ನೌಕಾಪಡೆಯ ಕ್ಷಿಪ್ರ ಕಾರ್ಯಾಚರಣೆಯಿಂದ ಸಂಭವಿಸಬಹುದಾಗಿದ್ದ ದೊಡ್ಡ ಅನಾಹುತ ತಪ್ಪಿದಂತಾಗಿದೆ. ಹಿಂದೂ ಮಹಾಸಾಗರ ಹಾಗೂ ಏಡನ್ ಕೊಲ್ಲಿಯಲ್ಲಿ ಸಾಗರ ಭದ್ರತೆಯನ್ನು ಕಾಪಾಡುವ ನಿಟ್ಟಿನಲ್ಲಿ ಭಾರತೀಯ ನೌಕಾಪಡೆ ನಿರಂತರ ನಿಗಾವಹಿಸಿದ್ದು, ವ್ಯಾಪಾರಿ ಹಡಗುಗಳಿಗೆ ಅಗತ್ಯ ರಕ್ಷಣೆ ಒದಗಿಸುತ್ತಿದೆ.