ಹಾವೇರಿ (ಶಿಗ್ಗಾವಿ): ರಾಜ್ಯದ ಆರ್ಥಿಕ ಪರಿಸ್ಥಿತಿ ದುಸ್ಥಿತಿಯಲ್ಲಿದ್ದು, ಹಿಂದಿನ ಸಿಎಂ ಸಿದ್ದರಾಮಯ್ಯ ಅವರು ಬಿಟ್ಟು ಹೋದ ಹಣಕಾಸಿನ ಸ್ಥಿತಿ ಕುರಿತು ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಶ್ವೇತ ಪತ್ರ ಹೊರಡಿಸಲಿ ಎಂದು ಮಾಜಿ ಮುಖ್ಯಮಂತ್ರಿ ಹಾಗೂ ಸಂಸದ ಬಸವರಾಜ ಬೊಮ್ಮಾಯಿ ಆಗ್ರಹಿಸಿದ್ದಾರೆ.
ಶಿಗ್ಗಾವಿಯಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಉತ್ತರ ಕರ್ನಾಟಕ ಗುತ್ತೆಗೆದಾರರ 23 ಸಾವಿರ ಕೋಟಿ ಬಿಲ್ಲು ಬಾಕಿ ಪಾವತಿಸಲು ಶಾಸಕ, ಸಚಿವ, ಅಧಿಕಾರಿಗಳಿಂದ ಭ್ರಷ್ಟಾಚಾರದ ಕಿರುಕುಳ ಆರೋಪಗಳು ಕೇಳು ಬರುತ್ತಿದೆ. ಇದನ್ನು ಹೇಗೆ ಸರಿಪಡಿಸಲಿದ್ದಾರೆ? ಕಾನೂನು ಬಿಟ್ಟು ಕೆಲಸ ಮಾಡಬೇಡಿ ಎಂದು ಹೇಳುವ ಬದಲು, ವ್ಯವಸ್ಥೆ ಬಿಟ್ಟು ಹೋಗಬೇಡಿ ಎಂದು ಹೇಳಿದ ನೂತನ ಸಿಎಂ ಡಿ.ಕೆ. ಶಿವಕುಮಾರ ಅವರ ಸಿಸ್ಟಂ ಏನು? ಎಂದು ಬೊಮ್ಮಾಯಿ ಪ್ರಶ್ನಿಸಿದರು.
ಹಣಕಾಸು ಸುಧಾರಣೆ ಚಿಂತನೆ ಇಲ್ಲ: ರಾಜ್ಯ ಹಣಕಾಸು ದುಸ್ಥಿತಿ ದೊಡ್ಡ ಪ್ರಮಾಣದಲ್ಲಿದೆ. ಆದರೆ, ಸುಧಾರಿಸುವ ಚಿಂತನೆ ಈವರೆಗೂ ಸಿಎಂ, ಡಿಸಿಎಂ ಅವರಿಗಿಲ್ಲ. ಡಿಕೆಶಿ ಅವರಿಗೆ ವೈಟ್ ಪೇಪರ್ ಕೊಟ್ಟು ಹಿಂದಿನ ಸಿಎಂ ಸಿದ್ದರಾಮಯ್ಯ ಅವರು ಬಿಟ್ಟು ಹೋದ ಹಣಕಾಸಿನ ಸ್ಥಿತಿ ಕುರಿತು ಎಷ್ಟು ಸಾಲ, ಎಲ್ಲಲ್ಲಿ ಮಾಡಿದ್ದಾರೆ. ಎಲ್ಲಲ್ಲಿ ಉಪಯೋಗ ಆಗಿದೆ? ಬಂಡವಾಳದ ಹೂಡಿಕೆಯಲ್ಲಿ ಆಗಿದೆಯೇ? ಅಥವಾ ನಿತ್ಯ ಸಂಬಳ, ಪೆನ್ಸನ್, ಸಾಲ ಮರುಪಾವತಿಗೆ ಆಗಿದೆಯೇ? ಗ್ಯಾರೆಂಟಿಗಳಿಗೆಷ್ಟೇ ಉಪಯೋಗ ಆಗಿದೆಯಾ? ಶೇಕಡಾ 90 ಕ್ಕಿಂತ ಹೆಚ್ಚು ಕಮಿಟೆಡ್ ಎಕ್ಸ್ಪೆಂಡಿಚೇರ್ ಆಗಿದೆ. ಅದು ಒಳ್ಳೇಯದು ಆದರೆ, ಅಭಿವೃದ್ಧಿಗೆ ನಯಾ ಪೈಸೆ ಕೊಟ್ಟಿಲ್ಲ. ಆದರೆ, 4.5 ಲಕ್ಷ ಕೋಟಿ ಬಜೆಟ್ ಮಾಡಿದ್ದಾರೆ. ಅದರ ಶೇ. 90ರಷ್ಟು ಬದ್ಧತಾ ವೆಚ್ಚಕ್ಕೆ ಹೋಗುತ್ತಿದೆ. ಯಾವ ಅಭಿವೃದ್ಧಿ ಕಾರ್ಯಕ್ಕೆ ಹೋಗುತ್ತಿಲ್ಲ ಇಂತಹ ಪರಿಸ್ಥಿತಿಯಲ್ಲಿ ಕರ್ನಾಟಕವನ್ನು ಯಾವ ರೀತಿ ಮುನ್ನಡಿಸುತ್ತಾರೆ ಸಿಎಂ ಶಿವಕುಮಾರ ಸಾರ್ವಜನಿಕವಾಗಿ ತಿಳಿಸಬೇಕು ಅದು ಅವರ ಜವಾಬ್ದಾರಿ ಎಂದು ತಿಳಿಸಿದ ಬೊಮ್ಮಾಯಿ, ನಾನು ಸಿಎಂ. ಆಗಿ ಅಧಿಕಾರ ವಹಿಸಿಕೊಂಡ ಕೋವಿಡ್ ವೇಳೆಯಲ್ಲಿ ಹಣಕಾಸಿನ ಸಮಸ್ಯೆಯಿದ್ದರೂ ಸರಿಯಾದ ಆರ್ಥಿಕ ನಿರ್ವಹಣೆ ಮಾಡಿ, ಸೋರಿಕೆ ತಡೆದು, ಅನಾವಶ್ಯಕ ವೆಚ್ಚಗಳನ್ನು ಕಡಿಮೆ ಮಾಡಿ ಕೆಲಸ ಮಾಡಿದ್ದೇವೆ ಇಂತ ಧೈರ್ಯ ಮಾಡುತ್ತಾರಾ ಎಂದು ಪ್ರಶ್ನಿಸಿದರು.
ರೈತರ ಬಗ್ಗೆ ಅಸೆಡ್ಡೆ: ಭವಿಷ್ಯದಲ್ಲಿ ರಾಜ್ಯ ಸರಕಾರದಿಂದ ಜನಪರ ಕಾರ್ಯಕ್ರಮಗಳನ್ನು ನಿರೀಕ್ಷಿಸಲು ಸಾಧ್ಯವಿಲ್ಲ. ಸರಕಾರದಲ್ಲಿ ಅದೇ ವ್ಯವಸ್ಥೆ, ಗುದ್ದಾಟ ಇದೆ. ಪ್ರತಿ ಜಿಲ್ಲೆಯಲ್ಲಿ ಒಂದೊಂದು ಸಮಸ್ಯೆ ಇದೆ. ಉತ್ತರ ಕರ್ನಾಟಕ ಭಾಗದಲ್ಲಿ ನೀರಾವರಿ ಸಮಸ್ಯೆ ಇದೆ. ರೈತರಿಗೆ ನೀರು ಕೊಡುವ ಜಲ ಸಂಪನ್ಮೂಲ ಖಾತೆ. ಇದನ್ನು ನಿರ್ವಹಿಸಲು ರಾಮಲಿಂಗಾರೆಡ್ಡಿ ಒಪ್ಪುತ್ತಿಲ್ಲ ಇದು ಒಳ್ಳೆಯ ಲಕ್ಷಣವಲ್ಲ. ಪ್ರಾರಂಭವೂ ಅಲ್ಲ. ಕಾಂಗ್ರೆಸ್ಸಿಗರಿಗೆ ರೈತರ ಬಗ್ಗೆ ತೊರುತ್ತಿರುವ ಆಸೆಡ್ಡೆ ಎಂದು ಬೊಮ್ಮಾಯಿ ಆರೋಪಿಸಿದರು.
ರೈತರ ನೆರವಿಗೆ ಬರಲಿ: ಮೊದಲು ಸಚಿವ ಸಂಪುಟದಲ್ಲಿ ರೈತರ ಬಿತ್ತನೆ ಬೀಜ, ಗೊಬ್ಬರ ಬಗ್ಗೆ ವ್ಯವಸ್ಥೆ ಬಗ್ಗೆ ಚರ್ಚೆಸುವ ನಿರೀಕ್ಷೆ ಹುಸಿಯಾಗಿದೆ. ಅಲ್ಲಲ್ಲಿ ಬೀಜ, ಗೊಬ್ಬರ ಕೊರತೆ ಕಾಣುತ್ತಿದೆ. ವ್ಯಾಪಾರಸ್ಥರು ಈಗಾಗಲೇ ದಾಸ್ತಾನು ಮಾಡಿಕೊಂಡು ಹೆಚ್ಚಿನ ದರಕ್ಕೆ ಮಾರಾಟ ಮಾಡುತ್ತಿದ್ದಾರೆ. ಸರಕಾರ ರೈತರ ನೆರವಿಗೆ ಬರಬೇಕು. ಸಮರ್ಪಕವಾದ ನಿರ್ವಹಣೆ ಮಾಡಬೇಕು. ಇಲ್ಲಿವರೆಗೂ ಕೃಷಿ ಖಾತೆ ಯಾರಿಗೂ ತ್ವರಿತವಾಗಿ ಕೊಟ್ಟು ನಿರ್ವಹಣೆ ಮಾಡಲು ಸರಕಾರ ಮುಂದಾಗಬೇಕು ಎಂದು ಬೊಮ್ಮಾಯಿ ಆಗ್ರಹಿಸಿದರು.
ಬದಲಾವಣೆ ಚರ್ಚೆಯಿಲ್ಲ: ಬಿಜೆಪಿಯಲ್ಲಿ ನಾಯಕತ್ವ ಬದಲಾವಣೆ ಕುರಿತು ಕೇಳಿದ ಪ್ರಶ್ನೆಗೆ ಪ್ರತಿಕ್ರಿಯಿಸಿದ ಅವರು, ಮುಖ್ಯಮಂತ್ರಿ ಬದಲಾವಣೆಯಾಗಿದೆ ಎಂಬ ಕಾರಣಕ್ಕೆ ವಿರೋಧ ಪಕ್ಷದ ನಾಯಕರ ಮತ್ತು ರಾಜ್ಯಾಧ್ಯಕ್ಷರ ಬದಲಾವಣೆ ವಿಚಾರ, ಪಕ್ಷದ ಮುಂದೆ ಚರ್ಚೆಯಾಗಲಿ, ಸೂಚನೆಯಾಗಲಿ ಯಾವುದು ಇಲ್ಲ. ಅಂತಹ ಪ್ರಸಂಗವೂ ಇಲ್ಲ ಎಂದು ಸ್ಪಷ್ಟಪಡಿಸಿದರು.
ಪಕ್ಷದ ಸಂಘಟನೆ ದೃಷ್ಟಿಯಿಂದ ಒಂದಿಷ್ಟು ಬದಲಾವಣೆ ಇದೆ ಹೊರತು, ಅಂತ ದೊಡ್ಡ ಬದಲಾವಣೆ ಇಲ್ಲ. ಈಗಾಗಲೇ ವಿಭಾಗವಾರು ಸಂಘಟನೆ ಎಸ್ಐಆರ್ ಬಗ್ಗೆ ಹೆಚ್ಚಿನ ಗಮನ ಕೊಟ್ಟು ಹಿಂದುಳಿದ ವರ್ಗ, ಪರಿಶಿಷ್ಟ ಜಾತಿ, ಪರಿಶಿಷ್ಟ ಪಂಗಡಕ್ಕೆ ಹೆಚ್ಚು ಸಾಮಾಜಿಕ ನ್ಯಾಯ ನೀಡಲು ತಿರ್ಮಾನಿಸಿದ್ದಾಗಿ ತಿಳಿಸಿದರು.





















