SK Home Ad
Home ಸುದ್ದಿ ರಾಜ್ಯ ಅಮಿತ್ ಶಾ ಭೇಟಿ ಮಾಡಿದ ಸಿಎಂ ಡಿಕೆಶಿ: ಪ್ರಮುಖ ವಿಷಯಗಳ ಚರ್ಚೆ

ಅಮಿತ್ ಶಾ ಭೇಟಿ ಮಾಡಿದ ಸಿಎಂ ಡಿಕೆಶಿ: ಪ್ರಮುಖ ವಿಷಯಗಳ ಚರ್ಚೆ

0
46

ನವದೆಹಲಿ: ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಅವರು ಕೇಂದ್ರ ಗೃಹ ಹಾಗೂ ಸಹಕಾರ ಸಚಿವ ಅಮಿತ್‌ ಶಾ ಅವರನ್ನು ನವದೆಹಲಿಯಲ್ಲಿ ಭೇಟಿ ಮಾಡಿ ಕರ್ನಾಟಕಕ್ಕೆ ಸಂಬಂಧಿಸಿದ ಹಲವು ಮಹತ್ವದ ವಿಷಯಗಳ ಕುರಿತು ಚರ್ಚೆ ನಡೆಸಿದರು.

ಭೇಟಿಯ ವೇಳೆ ರಾಜ್ಯದಲ್ಲಿ ಕಾನೂನು ಮತ್ತು ಸುವ್ಯವಸ್ಥೆ ಬಲಪಡಿಸುವುದು, ಪೊಲೀಸ್ ಇಲಾಖೆಯ ಆಧುನೀಕರಣ, ಆಂತರಿಕ ಭದ್ರತೆ ವೃದ್ಧಿ, ಸೈಬರ್ ಅಪರಾಧ ತಡೆಗಟ್ಟುವಿಕೆ, ಪೊಲೀಸ್ ತರಬೇತಿ ಮೂಲಸೌಕರ್ಯ ಅಭಿವೃದ್ಧಿ, ಜೈಲುಗಳ ಆಧುನೀಕರಣ ಹಾಗೂ ಹೆಚ್ಚುವರಿ ಭಾರತ ಮೀಸಲು ಪಡೆ ಬೆಟಾಲಿಯನ್‌ಗಳ ಮಂಜೂರಾತಿ ಸೇರಿದಂತೆ ಹಲವು ಪ್ರಮುಖ ಪ್ರಸ್ತಾಪಗಳಿಗೆ ಕೇಂದ್ರದ ಬೆಂಬಲ ಕೋರಿದ್ದಾರೆ.

ಸಕ್ಕರೆ ವಲಯಕ್ಕೆ ಸಂಬಂಧಿಸಿದಂತೆ ಕಬ್ಬಿಗೆ ನ್ಯಾಯಯುತ ಮತ್ತು ಲಾಭದಾಯಕ ಬೆಲೆ ಹೆಚ್ಚಳ, ಸಕ್ಕರೆಯ ಕನಿಷ್ಠ ಮಾರಾಟ ಬೆಲೆ ಪರಿಷ್ಕರಣೆ ಹಾಗೂ ಸಹಕಾರಿ ಸಕ್ಕರೆ ಕಾರ್ಖಾನೆಗಳಿಗೆ ಬೆಂಬಲ ನೀಡಲು ಎಥೆನಾಲ್ ಖರೀದಿ ಹಂಚಿಕೆಯನ್ನು ಹೆಚ್ಚಿಸುವಂತೆ ಸಿಎಂ ಒತ್ತಾಯಿಸಿದರು. ಇದರಿಂದ ರೈತರಿಗೆ ಸಕಾಲದಲ್ಲಿ ಪಾವತಿ ಮಾಡುವುದಕ್ಕೂ ನೆರವಾಗಲಿದೆ ಎಂದು ಅವರು ತಿಳಿಸಿದರು.

ಕರ್ನಾಟಕದ ಜನರಿಗೆ ಸುರಕ್ಷಿತ, ಬಲಿಷ್ಠ ಮತ್ತು ಸಮೃದ್ಧ ಭವಿಷ್ಯ ನಿರ್ಮಿಸುವುದು ರಾಜ್ಯ ಸರ್ಕಾರದ ಬದ್ಧತೆಯಾಗಿದ್ದು, ರಾಜ್ಯದ ಹಿತಾಸಕ್ತಿಗೆ ಸಂಬಂಧಿಸಿದ ಈ ಮನವಿಗಳನ್ನು ತ್ವರಿತವಾಗಿ ಪರಿಗಣಿಸಿ ಸಕಾರಾತ್ಮಕ ಕ್ರಮ ಕೈಗೊಳ್ಳುವಂತೆ ಮುಖ್ಯಮಂತ್ರಿ ಕೇಂದ್ರ ಸಚಿವರಿಗೆ ಮನವಿ ಮಾಡಿದ್ದಾರೆ. ಲಕ್ಷಾಂತರ ಕನ್ನಡಿಗರ ಜೀವನೋಪಾಯದ ಮೇಲೆ ಪರಿಣಾಮ ಬೀರುವ ಈ ವಿಷಯಗಳಲ್ಲಿ ಕೇಂದ್ರ ಸರ್ಕಾರ ಸ್ಪಂದನೆ ನೀಡುವ ವಿಶ್ವಾಸ ವ್ಯಕ್ತಪಡಿಸಿದ್ದಾರೆ.