SK Home Ad
Home ಸುದ್ದಿ ದೇಶ ಅಂಬೆನಾಲಿಘಾಟ್‌ನಲ್ಲಿ ವಾಹನ ಕಂದಕಕ್ಕೆ ಉರುಳಿ 8 ಪ್ರವಾಸಿಗರು ಸಾವು

ಅಂಬೆನಾಲಿಘಾಟ್‌ನಲ್ಲಿ ವಾಹನ ಕಂದಕಕ್ಕೆ ಉರುಳಿ 8 ಪ್ರವಾಸಿಗರು ಸಾವು

0
84

ಮಹಾರಾಷ್ಟ್ರದ ಅಂಬೆನಾಲಿ ಘಾಟ್‌ನಲ್ಲಿ ಭೀಕರ ದುರಂತ: 1000 ಅಡಿ ಕಂದಕಕ್ಕೆ ಬಿದ್ದ ಸ್ಕಾರ್ಪಿಯೋ; 8 ಯುವಕರ ದುರ್ಮರಣ

ಮಹಾರಾಷ್ಟ್ರದಲ್ಲಿ ಮತ್ತೊಂದು ಭೀಕರ ರಸ್ತೆ ದುರಂತ ಸಂಭವಿಸಿದ್ದು, ಅಂಬೇನಾಲಿ ಘಾಟ್‌ (Ambenali Ghat) ಪ್ರದೇಶದಲ್ಲಿ ನಿಯಂತ್ರಣ ತಪ್ಪಿದ ಸ್ಕಾರ್ಪಿಯೋ ಜೀಪ್ ಸುಮಾರು 1000 ಅಡಿ ಆಳದ ಕಂದಕಕ್ಕೆ ಬಿದ್ದ ಪರಿಣಾಮ ಎಂಟು ಯುವಕರು ಸಾವನ್ನಪ್ಪಿದ್ದಾರೆ. ಮೃತರೆಲ್ಲರೂ ಸತಾರಾ ಜಿಲ್ಲೆಯವರಾಗಿದ್ದು, ಕೊಂಕಣ ಪ್ರವಾಸ ಮುಗಿಸಿ ವಾಪಸ್ಸಾಗುತ್ತಿದ್ದರು ಎಂದು ತಿಳಿದುಬಂದಿದೆ.

ಪೊಲೀಸರ ಪ್ರಾಥಮಿಕ ಮಾಹಿತಿಯ ಪ್ರಕಾರ, ಸೋಮವಾರ ಮುಂಜಾನೆ ಸುಮಾರು 2.30ರ ವೇಳೆಗೆ ಪೋಲಾದ್‌ಪುರ-ಮಹಾಬಲೇಶ್ವರ (Poladpur-Mahabaleshwar) ರಸ್ತೆಯ ಅಂಬೇನಾಲಿ ಘಾಟ್ ಭಾಗದಲ್ಲಿ ಈ ದುರಂತ ಸಂಭವಿಸಿದೆ. ಪ್ರವಾಸಿಗರನ್ನು ಕರೆದೊಯ್ಯುತ್ತಿದ್ದ ಸ್ಕಾರ್ಪಿಯೋ ವಾಹನ ಅತಿ ವೇಗದಲ್ಲಿ ಚಲಿಸುತ್ತಿದ್ದಾಗ ಚಾಲಕನ ನಿಯಂತ್ರಣ ತಪ್ಪಿ ನೇರವಾಗಿ ಆಳವಾದ ಕಣಿವೆಗೆ ಉರುಳಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ಸ್ಥಳೀಯರ ಪ್ರಕಾರ, ಅಪಘಾತ ಸಂಭವಿಸಿದ ಕಂದಕ ಸುಮಾರು 1000ರಿಂದ 1500 ಅಡಿ ಆಳವಿದ್ದು, ಪರಿಣಾಮ ವಾಹನ ಸಂಪೂರ್ಣ ನಜ್ಜುಗುಜ್ಜಾಗಿದೆ. ಅಪಘಾತದ ತೀವ್ರತೆಯಿಂದ ಶವಗಳು ವಿವಿಧ ಕಡೆ ಚದುರಿಹೋಗಿರುವುದು ರಕ್ಷಣಾ ಕಾರ್ಯಾಚರಣೆಗೆ ದೊಡ್ಡ ಸವಾಲಾಗಿದೆ.

ಘಟನೆ ತಿಳಿದ ತಕ್ಷಣ ಪೋಲಾದ್‌ಪುರ ಪೊಲೀಸರು, ಸ್ಥಳೀಯ ನಾಗರಿಕರು, ವಿಪತ್ತು ನಿರ್ವಹಣಾ ತಂಡಗಳು ಹಾಗೂ ಎನ್‌ಡಿಆರ್‌ಎಫ್ ಸಿಬ್ಬಂದಿ ಸ್ಥಳಕ್ಕೆ ಧಾವಿಸಿ ಶೋಧ ಮತ್ತು ರಕ್ಷಣಾ ಕಾರ್ಯಾಚರಣೆ ಆರಂಭಿಸಿದ್ದಾರೆ. ಇದುವರೆಗೆ ಹಲವು ಶವಗಳನ್ನು ಹೊರ ತೆಗೆದಿರುವುದಾಗಿ ಅಧಿಕಾರಿಗಳು ತಿಳಿಸಿದ್ದಾರೆ. ದುರ್ಗಮ ಪ್ರದೇಶವಾಗಿರುವುದರಿಂದ ರಕ್ಷಣಾ ಸಿಬ್ಬಂದಿ ಹಗ್ಗಗಳು, ವಿಶೇಷ ಉಪಕರಣಗಳು ಹಾಗೂ ದುರ್ಬೀನುಗಳ ಸಹಾಯದಿಂದ ಕಾರ್ಯಾಚರಣೆ ನಡೆಸುತ್ತಿದ್ದಾರೆ.

ಈ ದುರಂತದ ಬಗ್ಗೆ ದೇವೇಂದ್ರ ಫಡ್ನವೀಸ್ ಸಂತಾಪ ಸೂಚಿಸಿದ್ದು, “ರಾಯಗಢ ಜಿಲ್ಲೆಯ ಅಂಬೇನಾಲಿ ಘಾಟ್‌ನಲ್ಲಿ ಸಂಭವಿಸಿದ ಈ ದುರಂತ ಅತ್ಯಂತ ಹೃದಯವಿದ್ರಾವಕವಾಗಿದೆ. ಮೃತರಿಗೆ ನನ್ನ ಹೃತ್ಪೂರ್ವಕ ಶ್ರದ್ಧಾಂಜಲಿ” ಎಂದು ಸಾಮಾಜಿಕ ಜಾಲತಾಣದಲ್ಲಿ ಪೋಸ್ಟ್ ಮಾಡಿದ್ದಾರೆ. ರಕ್ಷಣಾ ಕಾರ್ಯಕ್ಕಾಗಿ ತಲಾ ಏಳು ಸಿಬ್ಬಂದಿಯನ್ನೊಳಗೊಂಡ ಐದು ತಂಡಗಳನ್ನು ರಚಿಸಲಾಗಿದೆ. ರಾಯಗಢ ಮತ್ತು ಸತಾರಾ ಪೊಲೀಸ್ ಪಡೆಗಳು ಸಮನ್ವಯದಿಂದ ಕಾರ್ಯನಿರ್ವಹಿಸುತ್ತಿದ್ದು, ಉಳಿದ ಶವಗಳನ್ನು ಶೀಘ್ರದಲ್ಲೇ ಹೊರತೆಗೆದು ಕುಟುಂಬಗಳಿಗೆ ಹಸ್ತಾಂತರಿಸಲು ಕ್ರಮ ಕೈಗೊಳ್ಳಲಾಗಿದೆ.