SK Home Ad
Home ಸಿನಿ ಮಿಲ್ಸ್ ಗೋಲ್ಡನ್ ಮೂವೀಸ್ ಬ್ಯಾನರ್ ಅಡಿಯಲ್ಲಿ ಕನ್ನಡಕ್ಕೆ ʻಟಾಸ್ʼ: ಸೆ. 18ಕ್ಕೆ ತೆರೆಗೆ

ಗೋಲ್ಡನ್ ಮೂವೀಸ್ ಬ್ಯಾನರ್ ಅಡಿಯಲ್ಲಿ ಕನ್ನಡಕ್ಕೆ ʻಟಾಸ್ʼ: ಸೆ. 18ಕ್ಕೆ ತೆರೆಗೆ

0
14

ತುಳು ಚಿತ್ರರಂಗದ ಸೂಪರ್ ಸ್ಟಾರ್, ಬಹುಮುಖ ಪ್ರತಿಭೆ ಅರ್ಜುನ್ ಕಾಪಿಕಾಡ್ (ಅರ್ಜುನ್ ದೇವ್) ನಾಯಕ ನಟನಾಗಿ ನಟಿಸಿ, ನಿರ್ದೇಶಿಸಿರುವ ಬಹುನಿರೀಕ್ಷಿತ ʻಟಾಸ್ʼ ಸಿನಿಮಾ ಸೆಪ್ಟೆಂಬರ್ 18ರಂದು ರಾಜ್ಯಾದ್ಯಂತ ಬಹುದೊಡ್ಡ ಮಟ್ಟದಲ್ಲಿ ಬಿಡುಗಡೆಯಾಗುತ್ತಿದೆ. ಅವಿಕಾ ಪ್ರೊಡಕ್ಷನ್ಸ್, ಬಿಆರ್‌ಬಿ ಪ್ರೊಡಕ್ಷನ್ಸ್ ಹಾಗೂ P&Y World Tours LLP (ಸಾಗರ್ ಪೂಜಾರಿ) ನಿರ್ಮಾಣದ ಈ ಚಿತ್ರವು ತುಳು ಮತ್ತು ಕನ್ನಡ ಎರಡೂ ಭಾಷೆಗಳಲ್ಲಿ ಏಕಕಾಲಕ್ಕೆ ನಿರ್ಮಾಣಗೊಂಡಿದೆ.

ಗೋಲ್ಡನ್ ಮೂವೀಸ್ ಬೆಂಬಲ: ಯಾವುದೇ ಹಿನ್ನೆಲೆಯಿಲ್ಲದೆ ಸ್ವಂತ ಪರಿಶ್ರಮದಿಂದ ಸ್ಯಾಂಡಲ್‌ವುಡ್‌ನಲ್ಲಿ ಬೆಳೆದ ಗೋಲ್ಡನ್ ಸ್ಟಾರ್ ಗಣೇಶ್ ಹಾಗೂ ಅವರ ಪತ್ನಿ ಶಿಲ್ಪಾ ಗಣೇಶ್ ಅವರು ತಮ್ಮ ʻಗೋಲ್ಡನ್ ಮೂವೀಸ್ʼ ಬ್ಯಾನರ್ ಅಡಿಯಲ್ಲಿ ಈ ಚಿತ್ರವನ್ನು ಹೆಮ್ಮೆಯಿಂದ ಕನ್ನಡಕ್ಕೆ ಅರ್ಪಿಸುತ್ತಿದ್ದಾರೆ. ಡಾ. ದೇವದಾಸ್ ಕಾಪಿಕಾಡ್ ಅವರ ಮೇಲಿರುವ ಗೌರವ ಹಾಗೂ ಚಿತ್ರದ ಮೇಕಿಂಗ್ ನೋಡಿ ಉತ್ಸುಕರಾದ ಶಿಲ್ಪಾ ಗಣೇಶ್ ಅವರು, ಕೋಸ್ಟಲ್‌ವುಡ್ ಸ್ಟಾರ್ ಅರ್ಜುನ್ ಕಾಪಿಕಾಡ್ ಅವರನ್ನು ಈ ಸಿನಿಮಾ ಮೂಲಕ ಕನ್ನಡಕ್ಕೆ ನಾಯಕ ನಟನಾಗಿ ಪರಿಚಯಿಸುತ್ತಿದ್ದಾರೆ.

ಶಿವಣ್ಣ ಮೆಚ್ಚಿದ ʻಟಾಸ್ʼ ಕಂಟೆಂಟ್: ಚಿತ್ರೀಕರಣದ ಹಂತದಲ್ಲೇ ಗಮನ ಸೆಳೆದಿರುವ ʻಟಾಸ್ʼ ಸಿನಿಮಾದ ಕಂಟೆಂಟ್ ಹಾಗೂ ಝಲಕ್ ನೋಡಿ ಕರುನಾಡ ಚಕ್ರವರ್ತಿ ಡಾ. ಶಿವರಾಜ್ ಕುಮಾರ್ ಅವರು ತೀವ್ರ ಸಂತಸ ವ್ಯಕ್ತಪಡಿಸಿದ್ದು, ಚಿತ್ರತಂಡಕ್ಕೆ ಶುಭ ಹಾರೈಸಿದ್ದಾರೆ. ಇದು ಸಿನಿಮಾ ತಂಡದ ಉತ್ಸಾಹವನ್ನು ದ್ವಿಗುಣಗೊಳಿಸಿದೆ.

ತಂದೆ-ಮಗನ ಜುಗಲ್‌ಬಂಧಿ: ರಂಗಭೂಮಿ ಹಾಗೂ ಚಿತ್ರರಂಗದಲ್ಲಿ ತಮ್ಮದೇ ಆದ 32 ಜನರ ತಂಡವನ್ನು ಕಟ್ಟಿಕೊಂಡು ನಿರಂತರ ಸೇವೆ ಸಲ್ಲಿಸುತ್ತಿರುವ ಹಿರಿಯ ಕಲಾವಿದ ಡಾ. ದೇವದಾಸ್ ಕಾಪಿಕಾಡ್ ಅವರು ಈ ಚಿತ್ರಕ್ಕೆ ಕಥೆ, ಚಿತ್ರಕಥೆ, ಸಂಭಾಷಣೆ ಹಾಗೂ ಸಾಹಿತ್ಯ ಬರೆದು ಪ್ರಮುಖ ಪಾತ್ರವೊಂದರಲ್ಲಿ ನಟಿಸಿದ್ದಾರೆ. ಇತ್ತೀಚೆಗೆ ನಡೆದ ದ್ವಿತೀಯ ಹಾಡು ಬಿಡುಗಡೆ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, “ಅರ್ಜುನ್ ದೇವ್ ಮನೆಯಲ್ಲಿ ಮಾತ್ರ ನನಗೆ ಮಗ, ಕೆಲಸದ ವಿಷಯಕ್ಕೆ ಬಂದಾಗ ಆತ ಒಬ್ಬ ಶ್ರೇಷ್ಠ ತಂತ್ರಜ್ಞ” ಎಂದು ಮಗನ ಕಾರ್ಯವೈಖರಿಯನ್ನು ಶ್ಲಾಘಿಸಿದರು.

ಸಂಗೀತ ಮಾಂತ್ರಿಕ ಮಣಿಕಾಂತ್ ಕದ್ರಿ ಮ್ಯಾಜಿಕ್: ಚಿತ್ರಕ್ಕೆ ಮಣಿಕಾಂತ್ ಕದ್ರಿ ಅವರ ಅದ್ಭುತ ಸಂಗೀತವಿದ್ದು, ಈಗಾಗಲೇ ಯೋಗರಾಜ್ ಭಟ್ ಸಾಹಿತ್ಯ ಹಾಗೂ ಅರ್ಮಾನ್ ಮಲಿಕ್ ಗಾಯನದಲ್ಲಿ ಮೂಡಿಬಂದ ʻಹಲೋ ಹಲೋ ನೀಲಾಂಬರಿʼ ಹಾಡು ಸೂಪರ್ ಹಿಟ್ ಆಗಿ ಟ್ರೆಂಡಿಂಗ್‌ನಲ್ಲಿದೆ. ಇದೀಗ ನಾಗಾರ್ಜುನ್ ಶರ್ಮಾ ಸಾಹಿತ್ಯದ ʻಮಿರ ಮಿರ ಮಿಂಚುತ್ತಾ ನನ್ನ ಕಣ್ಣೀಗೆ ಬಿದ್ದೋಳೆʼ ಎಂಬ ದ್ವಿತೀಯ ಹಾಡು ಬಿಡುಗಡೆಯಾಗಿ ಪ್ರೇಕ್ಷಕರ ಮನ ಗೆಲ್ಲುತ್ತಿದೆ. ಚಿತ್ರದ ಮತ್ತೊಂದು ಹಾಡಿಗೆ ಪ್ರಮೋದ್ ಮರವಂತೆ ಸಾಹಿತ್ಯ ಒದಗಿಸಿದ್ದಾರೆ.

ಅರ್ಜುನ್ ದೇವ್ ಭರವಸೆ: “2012ರಿಂದಲೂ ನಾನು ಚಿತ್ರೋದ್ಯಮದಲ್ಲಿದ್ದೇನೆ. ಕೊನೆಯುಸಿರಿರುವವರೆಗೂ ಸಿನಿಮಾ ಮಾಡುವುದೇ ನನ್ನ ಧ್ಯೇಯ,” ಎಂದು ನಟ-ನಿರ್ದೇಶಕ ಅರ್ಜುನ್ ಕಾಪಿಕಾಡ್ ತಿಳಿಸಿದ್ದಾರೆ. ಸೆಪ್ಟೆಂಬರ್ 18ಕ್ಕೆ ತೆರೆಕಾಣಲಿರುವ ಈ ಚಿತ್ರಕ್ಕೆ ಕರಾವಳಿ ಹಾಗೂ ಇಡೀ ಕರ್ನಾಟಕದಾದ್ಯಂತ ಭಾರಿ ನಿರೀಕ್ಷೆ ವ್ಯಕ್ತವಾಗಿದೆ.