ರಾಯಚೂರು: ಕಾರ್ಮಿಕರ ಶೆಡ್ನಲ್ಲಿ ಶಾರ್ಟ್ ಸರ್ಕ್ಯೂಟ್ನಿಂದ ಆಕಸ್ಮಿಕ ಬೆಂಕಿ ಅವಘಡ ಕಾಣಿಸಿಕೊಂಡ ಘಟನೆ ಮಂತ್ರಾಲಯದ ಶ್ರೀ ಸುಯತೀಂದ್ರ ತೀರ್ಥ ಕಾಲೋನಿಯಲ್ಲಿ ಬುಧವಾರ ನಡೆದಿದೆ.
ಆಕಸ್ಮಿಕ ಬೆಂಕಿ ಅವಘಡದ ಪರಿಣಾಮ ಕಾರ್ಮಿಕರ ಶೆಡ್ನಲ್ಲಿ ಎರಡು ಸಣ್ಣ ಸಿಲಿಂಡರ್ಗಳು ಸ್ಫೋಟಗೊಂಡಿವೆ. ಆದರೆ, ಯಾವುದೇ ಪ್ರಾಣಹಾನಿಯಾಗಿಲ್ಲ. ಸಿಲಿಂಡರ್ ಸ್ಫೋಟಗೊಂಡ ಪರಿಣಾಮ ಭಕ್ತರು ಆತಂಕಗೊಂಡಿದ್ದರು. ಅದೃಷ್ಟವಶಾತ್ ಘಟನೆಯಿಂದ ಯಾವುದೇ ಪ್ರಾಣಾಪಾಯವಾಗಿಲ್ಲ.
ತಕ್ಷಣ ಸ್ಥಳಕ್ಕೆ ಆಗಮಿಸಿದ ಅಗ್ನಿಶಾಮಕ ದಳ, ಮಂತ್ರಾಲಯ ಪೊಲೀಸರು ಬೆಂಕಿ ನಂದಿಸಿದ್ದಾರೆ. ಅಗ್ನಿಶಾಮಕ ದಳದ ಸಿಬ್ಬಂದಿ ಶೆಡ್ನಲ್ಲಿದ್ದ ಇನ್ನೆರಡು ಸಿಲಿಂಡರ್ಗಳನ್ನ ಹೊರತೆಗೆದು ಹೆಚ್ಚಿನ ಅನಾಹುತವನ್ನು ತಪ್ಪಿಸಿದ್ದಾರೆ.
ಶ್ರೀರಾಯರ ಮಠದಲ್ಲಿ ಕಟ್ಟಡ ಕೆಲಸ, ಟೈಲ್ಸ್ ಅಳವಡಿಕೆ ಕೆಲಸ ಮಾಡಿಕೊಂಡಿದ್ದ ಕಾರ್ಮಿಕರು ಶೆಡ್ನಲ್ಲಿ ವಾಸವಾಗಿದ್ದು, ಸ್ಥಳಕ್ಕೆ ಮಠದ ಪೀಠಾಧಿಪತಿ ಸುಬುಧೇಂದ್ರ ತೀರ್ಥ ಸ್ವಾಮಿ ಭೇಟಿ ಪರಿಶೀಲನೆ ನಡೆಸಿದರು.
ಐದು ಶೆಡ್ನಲ್ಲಿ ವಾಸಿಸುತ್ತಿದ್ದ 20 ಜನ ಕಾರ್ಮಿಕರಿಗೆ ಪಡಿತರ, ಅಗತ್ಯ ವಸ್ತುಗಳನ್ನ ನೀಡುವುದಾಗಿ ಭರವಸೆ ನೀಡಿದ್ದಾರೆ. ಮಂತ್ರಾಲಯ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಲಾಗಿದೆ ಎಂದು ತಿಳಿದುಬಂದಿದೆ.























