ದಾವಣಗೆರೆ: ಕಳೆದ ಮೂರು ದಿನಗಳಿಂದ ಸಂಜೆ ಆಗಮನವಾಗುತ್ತಿರುವ ಮಳೆಯು ಸುಡು ಬಿಸಿಲಿಗೆ ಕಾದು ಕಬ್ಬಿಣವಾಗಿದ್ದ ಇಳೆಯನ್ನು ತಂಪಾಗಿಸಿದೆ.
ಬೆಳಗ್ಗೆಯಿಂದಲೇ ಬಿಸಿಲಿನ ತಾಪಕ್ಕೆ ಜನರು ಹೊರಗಡೆ ಬಾರದೆ ಮನೆ ಸೇರಿದ್ದರು. ಬಿಸಿಲಿನ ತಾಪಕ್ಕೆ ಭಯಗೊಂಡ ಜನ ಹೊರಗೆ ಬಾರದ ಪರಿಣಾಮ ರಸ್ತೆಗಳು ಬಿಕೋ ಎನ್ನುತ್ತಿದ್ದವು. ವಾಹನಗಳ ಸಂಚಾರವೂ ವಿರಳವಾಗಿತ್ತು.
ಮಧ್ಯಾಹ್ನ 4.30ರ ಹೊತ್ತಿಗೆ ಯಾವುದೇ ಮಳೆಯ ಮುನ್ಸೂಚನೆ ಇಲ್ಲದೇ ಆರಂಭವಾದ ಮಳೆಯು ಮುಕ್ಕಾಲು ಗಂಟೆ ಸುರಿಯಿತು. ಅರ್ಧ ಗಂಟೆ ಬಿಡುವು ನೀಡಿ ಮತ್ತೆ ಮಳೆ ಸುರಿಯಿತು. ಹೀಗೆ ಐದಾರು ಬಾರಿ ಬಿಟ್ಟು ಬಿಟ್ಟು ಮಳೆ ಸುರಿದಿದ್ದು, ಭೂಮಿಯನ್ನು ತಂಪಾಗಿಸಿದೆ.
ಸರ್ಕಾರಿ ನೌಕರರು, ಶಾಲಾ-ಕಾಲೇಜು ವಿದ್ಯಾರ್ಥಿಗಳು ಮನೆ ಸೇರುವ ಸಂದರ್ಭದಲ್ಲಿ ಆರಂಭವಾದ ಮಳೆಯಿಂದ ಕೆಲವರು ತೊಯ್ದು ತೊಪ್ಪೆಯಾಗಿ ಮನೆ ಸೇರಿದರೆ, ಇನ್ನು ಕೆಲವರು ಕಟ್ಟಡಗಳ ಬಳಿ ಆಶ್ರಯ ಪಡೆದಿರುವ ದೃಶ್ಯಗಳು ಕಂಡುಬಂದವು.
ಸಂಜೆ ಸುರಿದ ಮಳೆಯಿಂದ ಕೆಲವು ಬಡಾವಣೆಗಳಲ್ಲಿ ವಿದ್ಯುತ್ ನಿಲುಗಡೆ ಮಾಡಲಾಗಿತ್ತು. ಮಳೆ ನಿಂತರು ಕೆಲವು ಬಡಾವಣೆಗಳಲ್ಲಿ ವಿದ್ಯುತ್ ಪೂರೈಕೆ ವ್ಯತ್ಯಯವಾಗಿತ್ತು.




















