ಬೆಂಗಳೂರು: ಆಡಳಿತಾರೂಢ ಕಾಂಗ್ರೆಸ್ ಸರಕಾರಕ್ಕೆ ಬಿಸಿ ತುಪ್ಪದಂತಾಗಿದ್ದ ಒಳ ಮೀಸಲಾತಿ ಗೊಂದಲಕ್ಕೆ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ನೇತೃತ್ವದ ಸರ್ಕಾರ ಕೊನೆಗೂ ತೆರೆ ಎಳೆದಿದೆ.
ಒಳ ಮೀಸಲಾತಿ ವಿಷಯದ ಕುರಿತಂತೆ ನಡೆದ ವಿಶೇಷ ಸಂಪುಟ ಸಭೆಯಲ್ಲಿ 3 ಸಮುದಾಯಕ್ಕೂ ಮೀಸಲಾತಿ ಹಂಚಲು ಸರ್ಕಾರ ತೀರ್ಮಾನಿಸಿದೆ. 15% ಮೀಸಲಾತಿಯಲ್ಲೇ ವರ್ಗೀಕರಣಕ್ಕೆ ಸರ್ಕಾರ ಬದ್ಧವಾಗಿದ್ದು ಅದರಂತೆ ಹಂಚಿಕೆ ಮಾಡಲಾಗಿದೆ.
ವಿಶೇಷ ಸಚಿವ ಸಂಪುಟ ಸಭೆಯ ಬಳಿಕ ವಿಧಾನಸೌಧದಲ್ಲಿಂದು ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಎಡಗೈ ಸಮುದಾಯಕ್ಕೆ ಶೇಕಡಾ 5.25, ಬಲಗೈ ಸಮುದಾಯಕ್ಕೆ ಶೇಕಡಾ 5.25 ಹಾಗೂ ಎಸ್ಸಿ ಇತರೇ ಸಮುದಾಯಗಳಿಗೆ ಶೇಕಡಾ 4.5ರಷ್ಟು ಮೀಸಲಾತಿ ಕಲ್ಪಿಸಲು ನಿರ್ಧರಿಸಲಾಗಿದೆ ಎಂದು ತಿಳಿಸಿದ್ದಾರೆ.
ಕಳೆದ ಬಜೆಟ್ನಲ್ಲಿ 56,432 ಹುದ್ದೆಗಳನ್ನು ಭರ್ತಿ ಮಾಡುವುದಾಗಿ ಘೋಷಣೆ ಮಾಡಲಾಗಿತ್ತು. ಆದರೆ ಅದಕ್ಕೆ ಒಳ ಮೀಸಲಾತಿಯ ಅಂತಿಮ ನಿರ್ಧಾರ ಅಡ್ಡಿಯಾಗಿತ್ತು. ಸದ್ಯ ಒಳ ಮೀಸಲಾತಿ ಕಲ್ಪಿಸಲು ಸರ್ವಾನುಮತದ ನಿರ್ಧಾರ ಕೈಗೊಳ್ಳಲಾಗಿದೆ. ಅದರಂತೆ 56,432 ಹುದ್ದೆಗಳ ನೇಮಕಾತಿಗೆ ಅಧಿಸೂಚನೆ ಮತ್ತೊಮ್ಮೆ ಪ್ರಕಟ ಮಾಡುವುದಾಗಿ ತಿಳಿಸಿದರು.
ಅಲ್ಲದೇ ನ್ಯಾಯಾಲಯದ ಮುಂದಿನ ಆದೇಶದವರೆಗೂ ನೂತನ ಒಳ ಮೀಸಲಾತಿಯ ಅನುಸಾರವೇ ಸರ್ಕಾರಿ ಹುದ್ದೆಗಳ ಭರ್ತಿಗೆ ಪ್ರಕ್ರಿಯೆ ಮುಂದುವರೆಯಲಿದೆ ಎಂದು ಅವರು ತಿಳಿಸಿದರು.






















