ಜೆಇಇ ಅಡ್ವಾನ್ಸ್ಡ್ ಡೇಟಾ ಉಲ್ಲಂಘನೆ ವಿವಾದ: ತಪ್ಪು ಮಾಹಿತಿ ಹರಡಲಾಗುತ್ತಿದೆ ಎಂದ ಐಐಟಿ
ನವದೆಹಲಿ: ಜೆಇಇ (ಅಡ್ವಾನ್ಸ್ಡ್) ಪರೀಕ್ಷೆಗೆ ಹಾಜರಾದ ಲಕ್ಷಾಂತರ ವಿದ್ಯಾರ್ಥಿಗಳ ವೈಯಕ್ತಿಕ ಮಾಹಿತಿ ಸೋರಿಕೆಯಾಗಿದೆ ಎಂಬ ವರದಿಗಳನ್ನು ಐಐಟಿ ರೂರ್ಕಿ ತೀವ್ರವಾಗಿ ತಳ್ಳಿಹಾಕಿದೆ. ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿರುವ ದತ್ತಾಂಶ ಉಲ್ಲಂಘನೆ ಮತ್ತು ಗೌಪ್ಯತೆ ಭಂಗದ ಆರೋಪಗಳು ವಾಸ್ತವಕ್ಕೆ ದೂರವಾಗಿದ್ದು, ತಪ್ಪು ಮಾಹಿತಿಯನ್ನು ಹರಡುವ ಪ್ರಯತ್ನ ನಡೆಯುತ್ತಿದೆ ಎಂದು ಸಂಸ್ಥೆ ಸ್ಪಷ್ಟಪಡಿಸಿದೆ.
ಈ ಕುರಿತು ಸಾಮಾಜಿಕ ಜಾಲತಾಣದಲ್ಲಿ ಪೋಸ್ಟ್ ಮಾಡಿದೆ “ಲಕ್ಷಾಂತರ ಜೆಇಇ (ಅಡ್ವಾನ್ಸ್ಡ್) ಅಭ್ಯರ್ಥಿಗಳ ಮಾಹಿತಿಗೆ ಧಕ್ಕೆಯಾಗಿದೆ ಎಂಬ ವರದಿಗಳು ದಾರಿತಪ್ಪಿಸುವ ಮತ್ತು ವಾಸ್ತವಿಕವಾಗಿ ತಪ್ಪಾಗಿವೆ. ಸಾಮಾಜಿಕ ಮಾಧ್ಯಮಗಳಲ್ಲಿ ಪ್ರಸಾರವಾಗುತ್ತಿರುವ ಮಾಹಿತಿ ಘಟನೆಯ ನಿಜಸ್ವರೂಪವನ್ನು ಪ್ರತಿಬಿಂಬಿಸುವುದಿಲ್ಲ” ಎಂದು ಐಐಟಿ ರೂರ್ಕಿ ತಿಳಿಸಿದೆ.
ಇದನ್ನೂ ಓದಿ: BJP ನಾಯಕ ಅಣ್ಣಾಮಲೈ ರಾಜೀನಾಮೆ ಅಂಗೀಕಾರ
ಏನಾಗಿತ್ತು? : ಐಐಟಿ ರೂರ್ಕಿ ನೀಡಿರುವ ಮಾಹಿತಿಯ ಪ್ರಕಾರ, ಜೂನ್ 2, 2026ರಂದು ಪ್ರವೇಶ ಪತ್ರ (Admit Card) ಪಡೆಯುವ ಸಂದರ್ಭದಲ್ಲಿ ಕೆಲವು ಅಭ್ಯರ್ಥಿಗಳು ತಾಂತ್ರಿಕ ಸಮಸ್ಯೆಗಳನ್ನು ಎದುರಿಸುತ್ತಿದ್ದರು. ಈ ಸಮಸ್ಯೆಗಳನ್ನು ನಿವಾರಿಸಲು ಮತ್ತು ನೋಂದಣಿ ಪ್ರಕ್ರಿಯೆ ಸುಗಮವಾಗಿ ನಡೆಯುವಂತೆ ಮಾಡಲು ತುರ್ತು ತಾಂತ್ರಿಕ ಬದಲಾವಣೆಗಳನ್ನು ಜಾರಿಗೆ ತರಲಾಗಿತ್ತು.
ಈ ಪ್ರಕ್ರಿಯೆಯಲ್ಲಿ ಕ್ಲೌಡ್ ಸ್ಟೋರೇಜ್ ವ್ಯವಸ್ಥೆಯ ಒಂದು ಭಾಗದಲ್ಲಿ ತಾತ್ಕಾಲಿಕ ಹಾಗೂ ಸಣ್ಣ ಪ್ರಮಾಣದ ಸಂರಚನಾ ದೋಷ (Misconfiguration) ಉಂಟಾಗಿತ್ತು. ಈ ದೋಷವನ್ನು ನೈತಿಕ ಹ್ಯಾಕರ್ ರೈಲೆನ್ ಅನಿಲ್ ಗುರುತಿಸಿ, ಸಂಬಂಧಿತ ಡೇಟಾಬೇಸ್ಗೆ ಓದಲು ಮಾತ್ರ (Read-only) ಪ್ರವೇಶ ಸಾಧ್ಯವಿದೆ ಎಂದು ವರದಿ ಮಾಡಿದ್ದರು.
ಇದನ್ನೂ ಓದಿ: ಸಚಿವ ಸ್ಥಾನಕ್ಕೆ ರಾಜೀನಾಮೆ ಘೋಷಿಸಿದ ರಾಮಲಿಂಗಾ ರೆಡ್ಡಿ
ತಕ್ಷಣ ಕ್ರಮ : ಹ್ಯಾಕರ್ ವರದಿ ನೀಡಿದ ತಕ್ಷಣ ಸಮಸ್ಯೆಯನ್ನು ಸರಿಪಡಿಸಲಾಗಿದ್ದು, ಸಂಬಂಧಿತ ಡೇಟಾಗೆ ಪ್ರವೇಶವನ್ನು ಸಂಪೂರ್ಣವಾಗಿ ನಿರ್ಬಂಧಿಸಲಾಗಿದೆ ಎಂದು ಸಂಸ್ಥೆ ತಿಳಿಸಿದೆ. ಇದಲ್ಲದೆ, ಬಾಧಿತ ಕ್ಲೌಡ್ ಸಂಗ್ರಹಣೆ “Read-only” ಸ್ವರೂಪದ್ದಾಗಿದ್ದು, ಯಾವುದೇ ಮಾಹಿತಿಯನ್ನು ಬದಲಾಯಿಸುವುದು ಅಥವಾ ಅಳಿಸುವುದು ಸಾಧ್ಯವಾಗಿರಲಿಲ್ಲ ಎಂದು ಐಐಟಿ ರೂರ್ಕಿ ಸ್ಪಷ್ಟಪಡಿಸಿದೆ.
ಡೇಟಾ ಡೌನ್ಲೋಡ್ ಆಗಿಲ್ಲ : ಕ್ಲೌಡ್ ಪ್ರವೇಶ ದಾಖಲೆಗಳ ಪರಿಶೀಲನೆಯ ಬಳಿಕ ಯಾವುದೇ ರೀತಿಯ ಬೃಹತ್ ಪ್ರಮಾಣದ ಡೇಟಾ ಡೌನ್ಲೋಡ್ ನಡೆದಿಲ್ಲ ಎಂಬುದು ದೃಢಪಟ್ಟಿದೆ ಎಂದು ಸಂಸ್ಥೆ ಹೇಳಿದೆ. ಓದಲು ಮಾತ್ರ ಸೀಮಿತವಾಗಿದ್ದ ಪ್ರವೇಶವು ಒಟ್ಟು ಮಾಹಿತಿಯ ಕೇವಲ 0.05 ಶೇಕಡಕ್ಕಿಂತಲೂ ಕಡಿಮೆ ಭಾಗಕ್ಕೆ ಮಾತ್ರ ಸೀಮಿತವಾಗಿತ್ತು.
ಇದನ್ನೂ ಓದಿ: ರಾಮಲಿಂಗಾ ರೆಡ್ಡಿ ಬಳಿಕ ಮುನಿಯಪ್ಪ ಅಸಮಾಧಾನ: ಡಿಕೆಶಿ ಸಂಪುಟದಲ್ಲಿ ಭಿನ್ನಮತ ತೀವ್ರ?
“ಯಾವುದೇ ಸೂಕ್ಷ್ಮ ಮಾಹಿತಿ ಸೋರಿಕೆಯಾಗಿಲ್ಲ. ಯಾವುದೇ ಮಾಹಿತಿಯನ್ನು ಸಾಮೂಹಿಕವಾಗಿ ಹೊರತೆಗೆಯಲಾಗಿಲ್ಲ. ಈ ಘಟನೆ ಅಭ್ಯರ್ಥಿಗಳ ಅಂಕಗಳು, ಶ್ರೇಯಾಂಕಗಳು, ವರ್ಗೀಕರಣ ಅಥವಾ ಪರೀಕ್ಷಾ ಫಲಿತಾಂಶಗಳ ಮೇಲೆ ಯಾವುದೇ ಪರಿಣಾಮ ಬೀರಿಲ್ಲ” ಎಂದು ಹೇಳಿಕೆಯಲ್ಲಿ ತಿಳಿಸಲಾಗಿದೆ.
ಪರೀಕ್ಷಾ ವ್ಯವಸ್ಥೆಯ ಮೇಲಿನ ನಂಬಿಕೆ ಕಾಪಾಡುವ ಅಗತ್ಯ : ಜೆಇಇ (ಅಡ್ವಾನ್ಸ್ಡ್) ಮತ್ತು ಜೋಎಸ್ಎಎ (JoSAA) ಕೌನ್ಸೆಲಿಂಗ್ ಪ್ರಕ್ರಿಯೆಗಳ ಭದ್ರತೆ, ಪಾರದರ್ಶಕತೆ ಹಾಗೂ ಸಮಗ್ರತೆಗೆ ಸಂಸ್ಥೆ ಬದ್ಧವಾಗಿದೆ ಎಂದು ಐಐಟಿ ರೂರ್ಕಿ ಪುನರುಚ್ಚರಿಸಿದೆ. ತಾಂತ್ರಿಕ ದೋಷವನ್ನು ಅತಿರಂಜಿತವಾಗಿ ಬಿಂಬಿಸಿ, ಪರೀಕ್ಷಾ ವ್ಯವಸ್ಥೆಯ ಮೇಲಿನ ಸಾರ್ವಜನಿಕ ನಂಬಿಕೆಯನ್ನು ಕುಗ್ಗಿಸುವ ಪ್ರಯತ್ನಗಳು ಕಳವಳಕಾರಿ ಎಂದು ಸಂಸ್ಥೆ ಹೇಳಿದೆ.
“ಪ್ರತಿಯೊಬ್ಬ ವಿದ್ಯಾರ್ಥಿಗೆ ಸುರಕ್ಷಿತ ಮತ್ತು ಪಾರದರ್ಶಕ ಪ್ರವೇಶ ಪ್ರಕ್ರಿಯೆ ಒದಗಿಸುವುದು ನಮ್ಮ ಆದ್ಯತೆಯಾಗಿದೆ. ಜೆಇಇ (ಅಡ್ವಾನ್ಸ್ಡ್) ತಂಡವು ಅಭ್ಯರ್ಥಿಗಳಿಗೆ ನಿರಂತರ ಬೆಂಬಲ ನೀಡಲಿದೆ” ಎಂದು ಐಐಟಿ ರೂರ್ಕಿ ತನ್ನ ಹೇಳಿಕೆಯಲ್ಲಿ ತಿಳಿಸಿದೆ.
ಇದನ್ನೂ ಓದಿ: ಡಿಕೆಶಿ ಸಮಗ್ರ ಕರ್ನಾಟಕದ ಮುಖ್ಯಮಂತ್ರಿ ಆದಾರ?
ಈ ಬೆಳವಣಿಗೆಯ ನಡುವೆ, ಜೆಇಇ (ಅಡ್ವಾನ್ಸ್ಡ್) ಫಲಿತಾಂಶಗಳು ಮತ್ತು ಜೋಎಸ್ಎಎ ಕೌನ್ಸೆಲಿಂಗ್ ಪ್ರಕ್ರಿಯೆ ಎಂದಿನಂತೆ ಮುಂದುವರಿಯಲಿದ್ದು, ವಿದ್ಯಾರ್ಥಿಗಳು ಆತಂಕಪಡುವ ಅಗತ್ಯವಿಲ್ಲ ಎಂದು ಶಿಕ್ಷಣ ವಲಯದ ತಜ್ಞರು ಅಭಿಪ್ರಾಯಪಟ್ಟಿದ್ದಾರೆ.




















