ನವದೆಹಲಿ: ಕರ್ನಾಟಕ ಕಾಂಗ್ರೆಸ್ನಲ್ಲಿ ಬಹುದಿನಗಳಿಂದ ನಡೆಯುತ್ತಿದ್ದ ಮುಖ್ಯಮಂತ್ರಿ ಬದಲಾವಣೆ ಪ್ರಕ್ರಿಯೆ ಈಗ ಅಂತಿಮ ಘಟ್ಟ ತಲುಪಿದೆ. ರಾಜ್ಯ ಸಚಿವ ಸಂಪುಟ ಪುನರ್ ರಚನೆಯ ಆಶಯದೊಂದಿಗೆ ದೆಹಲಿಗೆ ತೆರಳಿದ್ದ ಮುಖ್ಯಮಂತ್ರಿ ಸಿದ್ದುಗೆ ಕಾಂಗ್ರೆಸ್ ಹೈಕಮಾಂಡ್ ಬಿಗ್ ಶಾಕ್ ನೀಡಿದೆ. “ನಾವು ನಾಯಕತ್ವ ಬದಲಾವಣೆಗೆ ತೀರ್ಮಾನಿಸಿದ್ದೇವೆ, ನೀವು ತಕ್ಷಣವೇ ಮುಖ್ಯಮಂತ್ರಿ ಸ್ಥಾನಕ್ಕೆ ರಾಜೀನಾಮೆ ನೀಡಿ” ಎಂದು ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಕಟ್ಟುನಿಟ್ಟಿನ ಆದೇಶ ನೀಡಿದ್ದಾರೆ.
ಜಾತಿ ಸಮೀಕ್ಷೆಯ ವರದಿ ಸ್ವೀಕರಿಸಲು ಕನಿಷ್ಠ 15 ದಿನಗಳ ಕಾಲಾವಕಾಶ ನೀಡಬೇಕು ಎಂಬ ಸಿದ್ದರಾಮಯ್ಯ ಕೊಟ್ಟ ಮನವಿಯನ್ನು ರಾಹುಲ್ ಗಾಂಧಿ ತಳ್ಳಿಹಾಕಿದ್ದಾರೆ. ಮೂರು ವರ್ಷಗಳ ಹಿಂದಿನ ಅಧಿಕಾರ ಹಸ್ತಾಂತರದ ಒಪ್ಪಂದವನ್ನು ನೆನಪಿಸಿ, “ವರದಿ ಸ್ವೀಕಾರ ಸೇರಿದಂತೆ ಎಲ್ಲಾ ಬಾಕಿ ಕೆಲಸಗಳನ್ನು ಎರಡು ದಿನಗಳ ಒಳಗಾಗಿ ಮುಗಿಸಿ ಪದತ್ಯಾಗ ಮಾಡಿ” ಎಂದು ಸೂಚಿಸಿದ್ದಾರೆ. ಪಕ್ಷದ ವಿಶ್ವಾಸಾರ್ಹತೆ ಉಳಿಸಿಕೊಳ್ಳಲು ಸೋನಿಯಾ ಗಾಂಧಿ, ಮಲ್ಲಿಕಾರ್ಜುನ ಖರ್ಗೆ ಹಾಗೂ ಪ್ರಿಯಾಂಕಾ ಗಾಂಧಿ ಸಹ ನಾಯಕತ್ವ ಬದಲಾವಣೆಗೆ ಒತ್ತು ನೀಡಿದ್ದಾರೆ ಎನ್ನಲಾಗಿದೆ.
ಹೀಗಾಗಿ ಮೊದಲ ಎರಡೂವರೆ ವರ್ಷ ಸಿದ್ದರಾಮಯ್ಯ ಹಾಗೂ ಉಳಿದ ಅವಧಿಗೆ ಡಿ.ಕೆ. ಶಿವಕುಮಾರ್ ಮುಖ್ಯಮಂತ್ರಿಯಾಗಬೇಕೆಂಬ ಒಪ್ಪಂದಕ್ಕೆ ಹೈಕಮಾಂಡ್ ಬದ್ಧವಾಗಿದೆ. ಈ ನಿಟ್ಟಿನಲ್ಲಿ ಕಳೆದ ಆರು ತಿಂಗಳಲ್ಲಿ 17 ಬಾರಿ ದೆಹಲಿ ಯಾತ್ರೆ ಮಾಡಿದ್ದ ಶಿವಕುಮಾರ್ ಒತ್ತಡಕ್ಕೆ ಕೊನೆಗೂ ಮಣಿದಿರುವ ಹೈಕಮಾಂಡ್, ಸೂಕ್ತ ಕಾಲದಲ್ಲಿ ಕಠಿಣ ತೀರ್ಮಾನ ತೆಗೆದುಕೊಳ್ಳುವ ಸಂದೇಶ ರವಾನಿಸಿದೆ.
ಅಲ್ಲದೇ.. ಹೈಕಮಾಂಡ್ ನಿರ್ಧಾರದ ಬೆನ್ನಲ್ಲೇ ಸಿದ್ದರಾಮಯ್ಯ, ಆಪ್ತ ಸಚಿವರೊಂದಿಗೆ ಸಮಾಲೋಚನೆ ನಡೆಸಿದ್ದಾರೆ. ಈ ವೇಳೆ ಶಾಸಕರ ಸಹಿ ಸಂಗ್ರಹಿಸಿ ಒತ್ತಡ ಹೇರುವ ಆಪ್ತರ ಸಲಹೆಯನ್ನು ನಿರಾಕರಿಸಿರುವ ಸಿಎಂ, ರಾಹುಲ್ ಗಾಂಧಿ ಸೂಚನೆಯಂತೆ ಮುನ್ನಡೆಯಲು ನಿರ್ಧರಿಸಿದ್ದಾರೆ. ಇತ್ತ ಬೆಂಗಳೂರಿನಲ್ಲಿ ಡಿ.ಕೆ. ಶಿವಕುಮಾರ್ ಬೆಂಬಲಿಗರು ಭರ್ಜರಿ ಸ್ವಾಗತಕ್ಕೆ ಸಜ್ಜಾಗುತ್ತಿದ್ದು, ಪರಿಸ್ಥಿತಿ ತಿಳಿಯಾಗುವವರೆಗೆ ಯಾವುದೇ ಸಾರ್ವಜನಿಕ ಹೇಳಿಕೆ ನೀಡದಂತೆ ಹೈಕಮಾಂಡ್ ಉಭಯ ನಾಯಕರಿಗೂ ಕಠಿಣ ತಾಕೀತು ಮಾಡಿದೆ.



















